ನಿನ್ನ ಹೊರತು ನಾನೆಲ್ಲಿದ್ದೆ
ಪುರಾಣಪುರುಷನೇನಲ್ಲ, ಯೋನಿಜ ನಾನು
ನಿನಗೆ ಬಗೆದ ಅನ್ಯಾಯಕ್ಕೆಪ್ರಾಯಶ್ಚಿತ್ತ
ಕ್ಷಮೆ ಎಂಬೆರಡು ಅಕ್ಷರಗಳೆಂದಾದರೆ ಆ ಅಕ್ಷರಗಳು ಕೂಡಿ ಸಂಭವಿಸಿದ ಶಬ್ದ ನಾಚಿಕೆಯಿಂದ ಸಾಯಲಿ
ಧನ್ಯವಾದ, ನನ್ನೊಂದಿಗೆ ನೀನಿರುವ ಮೋದಕ್ಕೆ ನೀನಿಲ್ಲದ ಜಗತ್ತಿನಲ್ಲಿ ನಾನು ಬದುಕುವ ಬೇಸರ ಕಲ್ಪನೆಯಲ್ಲೇ ಅಂಜಿಸುತ್ತದೆ.
ಪ್ರೇಮಿಸಿದ್ದೇನೆ ಕಾಮಿಸಿದ್ದೇನೆ ಜಗಳ ಕಾದಿದ್ದೇನೆ ನನಗೇ ಅಸಹ್ಯವಾಗುವ ಹಾಗೆ ವ್ಯವಹರಿಸಿದ್ದೇನೆ ನೊಂದಿದ್ದೇನೆ ನೋಯಿಸಿದ್ದೇನೆ
ಎಲ್ಲ ಅಳೆದೂ ಸುರಿದೂ ಕೊನೆಗೆ ಹೆಣ್ಣೇ ತಾಯಿಯಾಗಿ, ಅಕ್ಕನಾಗಿ ತಂಗಿಯಾಗಿ ಹೆಂಡತಿಯಾಗಿ, ಗೆಳತಿಯಾಗಿ, ಮಗಳಾಗಿ, ದೇವತೆಯಾಗಿ ... ..., ನನ್ನ ತುಂಬಿಕೊಂಡಿರುವ ನಿನ್ನ ಹೊರತು ನಾನೆಲ್ಲಿ...
ಆಮೇಲೆ
ನನ್ನ ಬದುಕು ಮತ್ತು ಸಾವು
ಎದುರಾ ಎದುರು ಸ್ನೇಹಿತರಂತೆ ಕೂತು
ಪಗಡೆ ಆಡೋಣ ಅಂತ ಮಾತಾಡಿಕೊಂಡವು
ನನಗೆ ತುಂಬ ಭಯವಾಯಿತು
ದಾಳ ಉರುಳುತ್ತಿತ್ತು
ನಾನು ಚಲಿಸುತ್ತಿದ್ದೆ ಅಥವ ನಿಲ್ಲುತ್ತಿದ್ದೆ, ಒಮ್ಮೊಮ್ಮೆ ತುಂಬ ಹೊತ್ತು, ಚಲನೆಯನ್ನೇ ಮರೆತಂತೆ.
ಪಾತ್ರವೂ ನಾನೇ ಪ್ರೇಕ್ಷಕನೂ ನಾನೇ
ಕೊನೆಕೊನೆಗೆ ಆ ನೀಚ ಆಟ
ಮುಗಿದರೆ ಸಾಕು ಎಂಬಂತಾಯ್ತು
ಆ ಮನೆಯಿಂದ ಈ ಮನೆಗೆ ಸಾಗಿ
ಮೇಲೇರಿ ಕೆಳಗಿಳಿದು ಕೆಳಗಿಂದ ಮೇಲೇರುವಾಗ ಒಂದೆಡೆ
ಬದುಕಿನ ಮುಖ ಕಳೆಗುಂದಿತ್ತು ಸಾವಿನ ಮುಖದಲೊಂದು ಹುಬ್ಬುಮೇಲೇರಿತ್ತು
ಅದು ನಗುತ್ತಿತ್ತು
ನಗು ಅಷ್ಟು ಕೆಟ್ಟದಾಗಿರುತ್ತದೆಂದು ಗೊತ್ತಿರಲಿಲ್ಲ
ದುರುಳ ಸ್ವಪ್ನ ಮುಗಿದು ಕಣ್ಣು ಬಿಟ್ಟಾಗ
ಬದುಕು ಬರಸೆಳೆದು ನನ್ನನಪ್ಪಿತು
ನಾನದರ ಮುಖಕೆ ಮುತ್ತಿಕ್ಕಿದೆ
(ಕವಿ ಗುಲ್ಜಾರ್ ಅವರ "ಠೀಕ್ ಸೇ ಯಾದ್ ನಂಹಿ" ಎಂಬ ಕವಿತೆಯ ಅನುವಾದ)
ಸರಿಯಾಗಿ ನೆನಪಿಲ್ಲ
ಫ್ರಾನ್ಸ್ ನ ’ಬೋರ್ದೂ’ ಬಳಿ ಒಂದೆಡೆ
ನಿಂತಿದ್ದೆವು ಕೆಲ ಗಳಿಗೆ
ಸಣ್ಣ ಜನವಸತಿ, ಅಲ್ಲಿ ಮರಮುಟ್ಟುಗಳದೊಂದು ಇಗರ್ಜಿ
ಎದುರಿಗೆ ಅಲ್ಟರ್ ಬೆಂಚ್ ಇತ್ತು
ಬಹುಶ: ಒ೦ದೇ
ಕುರಿಮರಿಯನ್ನೆತ್ತಿಕೊಂಡ ಏಸುವಿನ ಕಟ್ಟಿಗೆಯದೊಂದು ವಿಗ್ರಹ
ಜನ ಹಚ್ಚಿದ್ದ ಮೋಂಬತ್ತಿಗಳ ಹೊಗೆಯಿಂದ
ಕಪ್ಪುಗಟ್ಟಿದ್ದವು ಪಾದಗಳು
ಕರಗಿ ಕೆಳಗಿಳಿದ ಮೇಣದ ನಡುವೆ ಕೊಂಚ ಮುಳುಗಿದಂತಿದ್ದವು
ದೇಹದ ಮೇಲೆ ಮೊಳೆಗಳು
ಭುಜದ ಮೇಲೆ ಒಂದು - ಜೋಡಣೆ ಸೀಳು ಬಿಡುತ್ತಿದ್ದ ಜಾಗದಲ್ಲಿತ್ತು
ಕುರಿಮರಿಯ ಕಾಲೊಳಗೆ ಹೊಡೆದ ಇನ್ನೊಂದು ಬದಿಯಿಂದ ಉಡುಪಿನಾಚೆ ಹೊರಚಾಚಿತ್ತು
ಮತ್ತೊಂದು ಮೊಳೆ ಮೊಳಕೈಯ್ಯ ತುಸು ಕೆಳಗೆ
ಮೂರ್ತಿ ಬಿದ್ದಾಗ ಅಥವ ಸ್ವಚ್ಛಗೊಳಿಸುತ್ತಿದ್ದಾಗ
ಕಟ್ಟಿಗೆ ಸೀಳಿದ್ದ ಜಾಗದಲ್ಲಿ...
ಇದೇ (ಜನವರಿ, ೨೦೧೩) ೨೫,೨೬,೨೭ರಂದು ಧಾರವಾಡ ಸಾಹಿತ್ಯ ಸಂಭ್ರಮ ಎಂಬ ನೋಂದಾಯಿತ ಸಂಸ್ಥೆಯೊಂದು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ಶ್ರೀ ಗಿರಡ್ಡಿ ಗೋವಿಂದರಾಜ ಅವರು ಕಳಿಸಿದ ಮುದ್ರಿತ ಓಲೆ ತಲುಪಿದಾಗ ಕಳೆದ ಮೂರು ದಶಕಗಳಿಂದ ಧಾರವಾಡದ ಸಾಹಿತ್ಯಿಕ ಸಾಂಸ್ಕೃತಿಕ ಲೋಕವನ್ನು ಬಲ್ಲ ನನಗೆ ಸ್ವಲ್ಪ ವಿಚಿತ್ರವೆನಿಸಿತು. ಅವರ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಲೇ ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲವೆಂದೂ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ ಎಂದೂ ಭಾವಿಸಿ ನಾನು ಗಿರಡ್ಡಿಯವರಿಗೆ ಒಂದು ಬಹಿರಂಗ ಪತ್ರವನ್ನೂ ಬರೆದೆ.
ಗಿರಡ್ಡಿಯವರು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ, ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಆಯ್ದ ಕೆಲವರನ್ನು ಒಳಗೊಂಡು ಕೆಲವರನ್ನು ಹೊರಗಿಟ್ಟು ಅದು ಇಡೀ ಧಾರವಾಡದ ಪ್ರಾತಿನಿಧಿಕ ಸಂಸ್ಥೆ ಅಥವಾ ಕಾರ್ಯಕ್ರಮ ಎಂಬಂತಿದ್ದ ಈ ಪ್ರಯತ್ನ ಸ್ವಾಭಾವಿಕವಾಗಿಯೇ ಹಲವು ಪ್ರಶ್ನೆಗಳಿಗೆ ಜನ್ಮವಿತ್ತಿದೆ. ಧಾರವಾಡದ ವಿಶಿಷ್ಟವೂ ಶ್ರೀಮಂತವೂ ಆದ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ,ಗುಂಪು, ಜಾತಿ,ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ,ಸಂಗೀತ,ವಿಮರ್ಶೆ,ಚಿತ್ರಕಲೆ,ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು,ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ,ಪ್ರೀತಿ,ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು "ಇನ್ನೊಂದು ಹೊಸ ಪ್ರಯೋಗ" ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಅಂತರ್ಜಾಲ ತಾಣಗಳಲ್ಲಿ, ಬ್ಲಾಗ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೋಗಿ, ಜಿ.ಎನ್.ಮೋಹನ್, ಕೆ.ವಿ.ತಿರುಮಲೇಶ್, ರಹಮತ್ ತರೀಕೆರೆ, ಅಶೋಕವರ್ಧನ್, ಹೆಚ್.ಎಸ್.ರಾಘವೇಂದ್ರರಾವ್, ಕುಂ.ವೀರಭದ್ರಪ್ಪ, ಎಚ್.ಎಸ್.ಅನುಪಮಾ,ಬರಗೂರು ರಾಮಚಂದ್ರಪ್ಪ ಮುಂತಾದವರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಆ ನಿರಾಶೆಯನ್ನು ಶಕ್ತವಾಗಿಯೇ ಅಭಿವ್ಯಕ್ತಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ."ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ" ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವದಿಲ್ಲ.
ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ಆಯೋಜಕರು ಹೇಳಿದ್ದಾರೆ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ಅವರಿಗೆ ತೋಚಿರಲಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಕುರಿತ ಅವರ ಒಕ್ಕಣೆಯೇ ಸಾಕ್ಷಿ. "ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ ಕೂಡಿ ಕುಂತ ಜನಕೆಲ್ಲ ನಮ್ಮ ನಮನ" ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರಗಳೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಇವರಿಗೆ ಮಾದರಿಯಾದ ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಈ ನೋಂದಾಯಿತ ಸಂಸ್ಥೆಯ ಗೌರವಾಧ್ಯಕ್ಷರುಗಳು, ಅಧ್ಯಕ್ಷರು, ಸದಸ್ಯರು ಧಾರವಾಡದಲ್ಲಿ ಹಲವಾರು ದಶಕಗಳಿಂದ ಇದ್ದವರು. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವವರು. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾದ, ಅಸಭ್ಯವಾದ ವರ್ತನೆಯನ್ನು ೈವರು ಕಂಡಿದ್ದಾರೆ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದಾರೆ?? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದಾರೆ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೇ ಧಾರವಾಡದ ಮಂದಿ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯಇವರಿಗೆ ಕಂಡಿತು? ಏಕೆ ಇಂಥ ಹಾಸ್ಯಾಸ್ಪವ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದಾರೆ? ಧಾರವಾಡದಲ್ಲಿ ಪ್ರಗತಿಪರ ಯುವಕರು ಈ ಕುರಿತು ತಮ್ಮ ನೋವು, ವಿರೋಧ ವ್ಯಕ್ತಗೊಳಿಸಿದಾಗ ಸಂಘಟಕರು ಮಾಡಬಹುದಾಗಿದ್ದ ಕನಿಷ್ಟತಮ ಕೆಲಸವೆಂದರೆ ಆ ಅಚಾತುರ್ಯಕ್ಕಾಗಿ ಕ್ಷಮೆ ಕೇಳುವದು. ಆದರೆ ನಿಯಮ ನಿಬಂಧನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳನ್ನು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬಂತೆ ಸಂಘಟಕರು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟ ಕುರಿತು ತಮ್ಮ ನೋವನ್ನು ಪ್ರಗತಿಪರ ಮನೋಭಾವನೆಯ ಯುವಬರಹಗಾರರು ನನ್ನೊಂದಿಗೆ ಹಂಚಿಕೊಂಡರು.
ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವದಿಲ್ಲ ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು....! ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದೋ ಗೊತ್ತಿಲ್ಲ.
ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಅದರೆ ಇಲ್ಲಿ ಹಣದ, ಶ್ರೇಷ್ಠತೆಯ, ಅಹಮಿಕೆಯ ಧ್ವನಿಗಳು ಢಾಳಾಗಿ ಕಾಣುತ್ತಿವೆ ಎನ್ನಿಸುತ್ತಿದೆ. ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶ ಹಾಗಿದೆ ಎಂದು ಅನ್ನಿಸುತ್ತಿಲ್ಲ. ಇಂಥದರಲ್ಲಿ ಇವರು ಸಂಭ್ರಮಿಸಬಯಸುತ್ತಿದ್ದಾರೆ. ಅವರ ಸಂಭ್ರಮಕ್ಕೆ ಶುಭವಾಗಲಿ. ಆದರೆ ಹಲವು ಪ್ರಶ್ನೆಗಳು ಬಾಕಿ ಉಳಿಯುತ್ತವೆ, ಅವರ ಉತ್ತರದ ನಿರೀಕ್ಷೆಯಲ್ಲಿ..!
ಧಾರವಾಡದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ಎಂಬ ಖಾಸಗಿ
ನೋಂದಾಯಿತ ಸಂಸ್ಥೆಯೊಂದು ಅಯೋಜಿಸಿದ್ದ ಅದೇ ಹೆಸರಿನ ಸಮಾವೇಶ ಮುಗಿದಿದೆ. ಅಲ್ಲೇನಾಯ್ತೋ, ಏನಿಲ್ಲವೋ, ಏನು ಸಾಧಿತವಾಯಿತೋ ಗೊತ್ತಿಲ್ಲ. ಅದರ ವರದಿಗಳನ್ನು ಓದಿದ ನಮಗೆ - ಅಂದರೆ ತಾತ್ವಿಕವಾದ ನೆಲೆಗಳಲ್ಲಿ
ಆ ಸಮಾವೇಶದ ಧಾಟಿ ಧೋರಣೆಗಳೊಂದಿಗೆ ಭಿನ್ನವಾಗಿ ಯೋಚಿಸಿ ಅದರಿಂದ ದೂರ ಉಳಿದವರಿಗೆ- ಅದರ ಕುರಿತು ಸಂಭ್ರಮವೂ ಇಲ್ಲ, ಸಂಕಟವೂ ಇಲ್ಲ. ನಾವು ಆ ಕುರಿತ ನಮ್ಮ ಚಿಂತನೆಯಲ್ಲಿ ತುಂಬ ಸೂಕ್ಷ್ಮವಾಗಿದ್ದೇವೆಂಬುದನ್ನು ಮಾತ್ರ ನಾನಿಲ್ಲಿ
ಹೇಳಬಯಸುತ್ತೇನೆ. ಅಲ್ಲಿ ಭಾಗವಹಿಸಿದ ನಮ್ಮ ನಾಡಿನ, ಭಾಷೆಯ ಹಿರಿಯ ಲೇಖಕರನ್ನು ನಮ್ಮ ಪ್ರಜ್ಞಾವಲಯದ ಕಪ್ಪು ಪಟ್ಟಿಯಲ್ಲಿರಿಸುವ ಅಥವಾ ಖಳರೆಂಬಂತೆ
ನೋಡುವ ಸಣ್ಣತನ ನಮ್ಮದಲ್ಲ. ಕೋಮುವಾದಿ ಚಿಂತನೆಯ ವಿಷ ನಿಧನಿಧಾನವಾಗಿ ನಮ್ಮ
ಸಾಮಾಜಿಕ,ರಾಜಕೀಯ ಬದುಕಿನ ತುಂಬ ವ್ಯಾಪಿಸುತ್ತಿರುವಾಗ ಅದರ ವಿರುದ್ಧ ದಿಟ್ಟ
ನಿಲುವು ತಳೆಯುತ್ತ ಬಂದಿರುವ ಯು.ಆರ್. ಅನಂತಮೂರ್ತಿಯವರಾಗಲಿ,
ಗಿರೀಶ್ ಕಾರ್ನಾಡ್ ಅವರಾಗಲೀ ಧಾಸಾಸಂ ನಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ
ಯಾದಿಯಲ್ಲಿ ಇದ್ದರೆಂದ ಮಾತ್ರಕ್ಕೆ ನಮಗೆ ಅದು ಹೇಗೆ ಅಪಥ್ಯರಾದಾರು? ನಮ್ಮ
ವಿಮರ್ಶೆಗೆ ಹೊಸ ಜೀವ ತುಂಬಿದ ಜಿ.ಎಸ್.ಆಮೂರ್,
ಸಿ.ಎನ್.ರಾಮಚಂದ್ರನ್ ಮುಂತಾದವರು
ಅದು ಹೇಗೆ ನಮಗೆ ಆ ಕಾರಣಕ್ಕೆ ತ್ಯಾಜ್ಯರಾಗುತ್ತಾರೆ? ಇಂಥ ಎಲ್ಲ ವಿಷಯಗಳ
ಕುರಿತು ನಾವು ಮುಕ್ತವಾಗಿ, ಗಂಭೀರವಾಗಿ ಚರ್ಚಿಸಿದ್ದೇವೆ. ಇದೇ ರೀತಿಯ ಒಂದು ಘನತೆಯನ್ನು, ಗಾಂಭೀರ್ಯವನ್ನು, ಸಜ್ಜನಿಕೆಯನ್ನು ಈ ಉದ್ದಕ್ಕೂ ಧಾಸಾಸಂ ನ ಅಧಿಕೃತ ವಕ್ತಾರರಾಗಿರುವ ಅದರ ಅಧ್ಯಕ್ಷ ಶ್ರೀಯುತ
ಗಿರಡ್ಡಿ ಗೋವಿಂದರಾಜರಿಂದ ನಾವು ನಿರೀಕ್ಷಿಸಿದ್ದೆವು. ದುರದೃಷ್ಟವಶಾತ್
ಆ ನಮ್ಮ ನಿರೀಕ್ಷೆಯನ್ನು ಶ್ರೀಯುತರು ಹುಸಿಗೊಳಿಸಿದ್ದಾರೆ. ಧಾಸಾಸಂ ಸಮಾವೇಶದ
ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಸಂಭ್ರಮ ಆರಂಭಿಸುವ ಮುನ್ನ ಹಾಗೂ ನಂತರವೂ ಎದುರಾದ ಎಲ್ಲಾ ತರಹದ ವಿರೋಧವನ್ನು ಮುಕ್ತವಾಗಿ
ಸ್ವಾಗತಿಸುವದಾಗಿ ಅವರು ಹೇಳಿದ್ದನ್ನು ಮೆಚ್ಚುತ್ತಿರುವಾಗಲೇ "ವಿರೋಧದ
ಹಿಂದೆ ಕೆಡಿಸುವ ಮನಸ್ಸಿರಬಾರದು" ಎಂದೂ ಸೇರಿಸಿದ್ದನ್ನು ಕೇಳಿ ನಾವು
ಬೇಸರಗೊಂಡಿದ್ದೇವೆ.
ನಮ್ಮ “ಕೆಡಿಸುವ ಮನಸ್ಥಿತಿ”ಯ ಕುರಿತ ಗಿರಡ್ಡಿಯವರ ಗುಮಾನಿ ಏನೆಂದರೆ ನಾವು
ಸದಾ ಫೋನ್ ಕರೆ ಮಾಡಿ ಇದರಲ್ಲಿ ಪಾಲ್ಗೊಳ್ಳದಂತೆ ಸಂಪನ್ಮೂಲ ವ್ಯಕ್ತಿಗಳ ಮೇಲೆ, ಆಮಂತ್ರಿತರ ಮೇಲೆ ಒತ್ತಡ ತರುತ್ತಿದ್ದೆವೆಂಬುದು.
ಸಾಕಷ್ಟು ವಿನಮ್ರವಾಗಿ ನಾನು ಹೇಳಬಯಸುವದೇನೆಂದರೆ ಅವರ ಸಂಭ್ರಮದಲ್ಲಿದ್ದ ಸಂಪನ್ಮೂಲ
ವ್ಯಕ್ತಿಗಳ ಅಥವಾ ಅತಿಥಿಗಳ ಯಾದಿಯಲ್ಲಿದ್ದು ಅದರಲ್ಲಿ ಭಾಗವಹಿಸಬೇಕಾಗಿದ್ದ ಡಾ.ಯು.ಆರ್.ಅನಂತಮೂರ್ತಿ,ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ,ಸುಮತೀಂದ್ರ ನಾಡಿಗ, ಸಿದ್ದಲಿಂಗಯ್ಯ, ಅಬ್ದುಲ್ ರಶೀದ್, ಜೋಗಿ,
ಬೋಳುವಾರು ಮೊಹಮ್ಮದ್ ಕುಂಞಿ, ಕೆ.ಸತ್ಯನಾರಾಯಣ, ಮುಖ್ಯಮಂತ್ರಿ ಚಂದ್ರು ಮೊದಲಾದವರು ಭಾಗವಹಿಸದೇ
ಇರುವದಕ್ಕೆ ನಾವು ಕಾರಣರಲ್ಲ. ಅಂಥ ಮಟ್ಟಿಗಿನ ಪ್ರಭಾವ ನಮಗಿಲ್ಲ.
ಜೋಗಿ ಸ್ವತ: ಸಂಭ್ರಮದ ದಿಕ್ಕು ದೆಸೆಗಳನ್ನು ಸಂದೇಹಿಸಿ
ಪಾಲ್ಗೊಳ್ಳುವದಿಲ್ಲ ಎಂದು ಘೋಷಿಸಿದವರು. ಸಂಪನ್ಮೂಲ ವ್ಯಕ್ತಿಗಳಾಗಿ ಅಥವಾ
ವಿಶೇಷ ಆಹ್ವಾನಿತರಾಗಿ ಇರಬೇಕಾಗಿದ್ದ ನಾನು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ, ಜಗದೀಶ
ಮಂಗಳೂರುಮಠ, ಎಂ.ಡಿ.ವಕ್ಕುಂದ, ವೈಯಕ್ತಿಕವಲ್ಲದ,ತಾತ್ವಿಕ-ಸೈದ್ಧಾಂತಿಕ ಇತ್ಯಾದಿಯಾಗಿ ಹೆಸರಿಸಬಹುದಾದ ಕಾರಣಗಳಿಗಾಗಿ
ಹೊರಗುಳಿದವರು, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮೊದಲಾದವರು ನಮ್ಮ ಆಗ್ರಹ ಕಾರಣವಾಗಿ ಭಾಗವಹಿಸಲಿಲ್ಲ ಎಂದರೆ ಅದು ಅವರ ಗ್ರಹಿಕೆ,
ವಿವೇಕ ಮತ್ತು ಸ್ವಂತ ತೀರ್ಮಾನ ಕೈಗೊಳ್ಳುವ ಶಕ್ತಿಯನ್ನು ಅವಮಾನಿಸಿದಂತೆ.ಹಾಂ, ಹಿಂದೆ
ವಿವಿಧ ಸಂದರ್ಭಗಳಲ್ಲಿ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಚಳುವಳಿಗಳು ಭುಗಿಲೆದ್ದಾಗ
ಜೊತೆಯಾಗಿದ್ದ, ನಮ್ಮ ಸಮಾನಮನಸ್ಕರು ಎಂದು ನಾವು ಭಾವಿಸಿಕೊಂಡಿದ್ದ,
ಹಿರಿಯರೊಬ್ಬರಿಗೆ ನಾವು ಫೋನ್ ಕರೆ ಮಾಡಿ ಸಂಭ್ರಮದಲ್ಲಿ ಭಾಗವಹಿಸುವ ತಮ್ಮ ನಿರ್ಧಾರವನ್ನು
ಪುನ: ಪರಿಶೀಲಿಸುವಂತೆ ಆಗ್ರಹಿಸಿದ್ದು ನಿಜ. ಅದು
ನಮ್ಮ ಹಕ್ಕೂ ಹೌದು. ನಮ್ಮ ಆಗ್ರಹವನ್ನು ನಿರಾಕರಿಸಿ, ಸಂಭ್ರಮದಲ್ಲಿ ಪಾಲ್ಗೊಂಡು ತಮ್ಮ ಯಥಾಪ್ರಕಾರದ ಶೈಲಿಯಲ್ಲಿ ಯಾರನ್ನೋ ಚಿಂತಾಜನಕಮೂರ್ತಿಯೆಂದು
ಕರೆದು ಶ್ರೋತೃಗಣವನ್ನು ನಗಿಸಿದ ಸದರಿ ಕರುಣಾಜನಕಮೂರ್ತಿ ಹಿರಿಯರು ನಮ್ಮ ಸಮಾನಮನಸ್ಕರೆಂಬ ಭಾವನೆಯು
ನಮ್ಮ ಭ್ರಮೆ ಎಂದೂ ಅದನ್ನು ಆದಷ್ಟೂ ಬೇಗ ಕಳಚಿಕೊಳ್ಳಬೇಕೆಂದೂ ಪ್ರಗತಿಪರರು ಮನಗಂಡಿದ್ದಾರೆ.
ಗಿರಡ್ಡಿಯವರಿಗೆ ಗೊತ್ತಿರಬೇಕು. ಈ ಪ್ರಗತಿಪರರು ಸಂಭ್ರಮ
ಸಮಾವೇಶವನ್ನು ಕೆಡಿಸುವ ಮನಸ್ಥಿತಿಯವರಾಗಿದ್ದರೆ ಗಿರಡ್ಡಿಯವರ ಸಮ್ಮುಖದಲ್ಲೇ ಕಲಬುರ್ಗಿಯವರ ಮನೆಯಲ್ಲಿ
ನಡೆದ ಸಂಧಾನ ಸಭೆಯಲ್ಲಿ, ಸಂಭ್ರಮ ನಡೆಯುವ ದಿನಗಳಿಗೆ ಪರ್ಯಾಯವಾಗಿಯೇ ಸಮಾವೇಶ
ನಡೆಸುವ ಸಿದ್ಧತೆಯ ದಾರಿಯಲ್ಲಿ ಅದಾಗಲೇ ಬಹು ದೂರ ಕ್ರಮಿಸಿದ್ದ ತಮ್ಮ ನಿರ್ಧಾರವನ್ನು ಅವರು ಕೈಬಿಡುತ್ತಿರಲಿಲ್ಲ.
ಕೈ ಹಿಡಿದು ಪ್ರೀತಿಯಿಂದ ಹೇಳಿದ ಹಿರಿಯರ ಮಾತಿಗೆ ಪ್ರಗತಿಪರರು ಕೊಟ್ಟ ಗೌರವಕ್ಕೆ
ಪ್ರತಿಯಾಗಿ ಗಿರಡ್ಡಿಯವರೂ ಸ್ವಲ್ಪ ಮಟ್ಟಿಗಿನ ಗೌರವವನ್ನು, ಕೃತಜ್ಞತೆಯನ್ನು
ಅವರ ಕುರಿತು ಇಟ್ಟುಕೊಳ್ಳಬಹುದಿತ್ತು.
ಸಂಭ್ರಮದ ಎರಡನೇ ದಿನದ ನಡಾವಳಿಗಳು ಪೂರ್ಣಗೊಂಡ
ನಂತರದ ತಮ್ಮ ಬ್ರೀಫಿಂಗ್ ನಲ್ಲಿ ಗಿರಡ್ಡಿಯವರು "ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಳ್ಳುತ್ತಿರುವ ಈ ಸಂಭ್ರಮದಲ್ಲಿ
ಯಾವುದೇ ಹಣದ ಅಪವ್ಯಯಕ್ಕೆ ಆಸ್ಪದವಿಲ್ಲ. ಈ ಎರಡೂ ದಿನಗಳಲ್ಲಿ ಅದು ಸಂಭವಿಸಲೂ
ಇಲ್ಲ ಎಂಬುದು ಗಮನಾರ್ಹ. ಆದರೆ, ಕೆಲವು ವಿಶಿಷ್ಟ
ಹಿತಾಸಕ್ತಿಗಳು ಈ ಸಂಭ್ರಮದ ವಿರುದ್ಧ ಅಪಪ್ರಚಾರ ಮಾಡುತ್ತಿರುವದು ಧಾರವಾಡ ಸಾಂಸ್ಕೃತಿಕ ಪರಿಸರಕ್ಕೆ
ಮಾಡುತ್ತಿರುವ ದೊಡ್ಡ ಅಪಚಾರವೆಂದೇ ಭಾವಿಸಿದ್ದೇನೆ" ಎಂದದ್ದು ದಿನಪತ್ರಿಕೆಯೊಂದರಲ್ಲಿ
ವರದಿಯಾಗಿದೆ. ಯಾರು ಈ ಕೆಲವು ವಿಶಿಷ್ಟ ಹಿತಾಸಕ್ತಿಗಳು? ಇದರ ಧಾಟಿ ಧೋರಣೆಯನ್ನು ಸಕಾರಣವಾಗಿಯೇ ಪ್ರಶ್ನಿಸಿದ ಪಾಟೀಲ್ ಪುಟ್ಟಪ್ಪನವರೇ? ಸಾಹಿತ್ಯವೆಂಬುದು ಶ್ರೀಮಂತರಿಗಷ್ಟೆ ಎಂದು ಧಾಸಾಸಂ ನವರು ಭಾವಿಸಿದ್ದಾರೆಂದು ತೋರುತ್ತದೆ
ಎಂದು ಪತ್ರಿಕೆಯೊಂದರ ತಮ್ಮ ಅಂಕಣದಲ್ಲಿ ಸಂದೇಹ ವ್ಯಕ್ತಪಡಿಸಿದ ಕಥೆಗಾರ ಜೋಗಿಯೆ? ಅಂತರ್ಜಾಲ ತಾಣಗಳಲ್ಲಿ ಇದರ ಕುರಿತು ಬರೆದು ಇದರಲ್ಲಿ ಎಲೀಟಿಕರಣದ ಅಪಾಯವನ್ನು ಕಂಡ ಕೆ.ವಿ.ತಿರುಮಲೇಶ್ ಅಥವಾ ಹೆಚ್. ಎಸ್.ರಾಘವೇಂದ್ರ ರಾವ್ ಅವರೇ? ಧಾರವಾಡದ ಸಾಂಸ್ಕೃತಿಕ ಪರಿಸರದ ಠೇಕೆದಾರಿಕೆಯ
ಅಹಮಿಕೆಗಳನ್ನೇ ಪ್ರಶ್ನಿಸಿದ ನಾನೆ? ಸಂಭ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ
ಬರೆದ ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮುಂತಾದವರೆ?
ಧಾರವಾಡದಲ್ಲಿ ಗೌರವಾನ್ವಿತರಾದ, ಸಂಭ್ರಮ ನೋಂದಾಯಿತ ಸಂಸ್ಥೆಯ
ಗೌರವಾಧ್ಯಕ್ಷರುಗಳಾದ ಕೆಲ ಹಿರಿಯರು ಸಂಭ್ರಮದ ಆಕ್ಷೇಪಾರ್ಹ ಲಕ್ಷಣಗಳಿಗೆ ಕುರುಡಾದ ಕುರಿತು ಬೇಸರ
ನೋವು ತೋಡಿಕೊಂಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿಯವರೇ? ಅಥವಾ ಇನ್ನುಳಿದಂತೆ ಇದರ ವಿರುದ್ದ ತಾತ್ವಿಕ ನೆಲೆಗಳಲ್ಲಿ ಪ್ರಶ್ನೆಗಳನ್ನೆತ್ತಿದ,
ಡಾ. ಬರಗೂರು ರಾಮಚಂದ್ರಪ್ಪ,ಡಾ.
ಎಚ್. ಎಸ್.ಅನುಪಮಾ,
ಜಿ,ಎನ್.ಮೋಹನ್,ಬಸವರಾಜ ಸೂಳಿಬಾವಿ, ಡಾ.ಎಂ.ಡಿ.ವಕ್ಕುಂದ ಕುಂ.ಸಿ.ಉಮೇಶ್, ಬೇಳೂರು ಸುದರ್ಶನ,ಸಿದ್ದನಗೌಡ
ಪಾಟೀಲ್, ಡಾ. ಸಂಜೀವ ಕುಲಕರ್ಣಿ ಮೊದಲಾದವರೇ?
ಸಾಹಿತ್ಯ, ಸಮಾಜ, ಸಂಸ್ಕೃತಿಗಳ ಸಂಬಂಧದ
ಕುರಿತ ಗಂಭೀರ ಸಂವಾದದ ಸಾಧ್ಯತೆಯೊಂದನ್ನು ಜೀವನಪೂರ್ತಿ ಸಾಹಿತ್ಯದ ಪಾಠ ಮಾಡಿದ ಗಿರಡ್ಡಿಯವರು ಹೀಗೆ
ಟ್ರಿವಿಅಲೈಜ್ ಮಾಡುವದು ನೋವಿನ ಸಂಗತಿ. ಅವರು ಅದನ್ನು ತಮ್ಮ ವ್ಯಕ್ತಿನಿಷ್ಟ
ಯಾವುದೋ ಕಟ್ಟುಪಾಡುಗಳಿಗೆ ಬದ್ಧರಾಗಿ ಟ್ರಿವಿಅಲೈಜ್ ಮಾಡುತ್ತಿದ್ದಾರೆಂಬುದು ಅನುಮಾನವಲ್ಲ ಆರೋಪ.
"ಶಿಸ್ತನ್ನು ಕಾಪಾಡಿ ಕೊಳ್ಳುವ ಉದ್ದೇಶದಿಂದ ಕೆಲ ನಿಬಂಧನೆಗಳನ್ನು ವಿಧಿಸಿದ್ದು
ಸ್ವಾಭಾವಿಕ. ಇವುಗಳನ್ನು ತೀರ ಗಂಭೀರವಾಗಿ ತೆಗೆದುಕೊಂಡು ಟೀಕೆ,
ಅಪಹಾಸ್ಯಗಳನ್ನು ಮಾಡುತ್ತಿದ್ದುದು ನಿಜಕ್ಕೂ ವಿಷಾದನೀಯ" ಎನ್ನುತ್ತಾರೆ ಗಿರಡ್ಡಿಯವರು. ಅಂದರೆ ತಾವೇ ವಿಧಿಸಿದ ನಿಯಮ ನಿಬಂಧನೆಗಳ
ಕುರಿತು ಸ್ವತ: ಇವರೇ ಗಂಭೀರವಾಗಿರಲಿಲ್ಲ ಅಂದರೆ ಇವು ಇವರ ಇನ್ ಸ್ಟಂಟ್
ಪ್ರಚಾರದ ಗಿಮಿಕ್ಕೆ? ಇದನ್ನು ಯಾಕೆ ಕೇಳಬೇಕಾಗಿದೆ ಎಂದರೆ ಸಮಾರೋಪ ಸಮಾರಂಭದಲ್ಲಿ
ಗಿರಡ್ಡಿಯವರು "ಸಂಭ್ರಮದ ಯಶಸ್ಸಿಗೆ ನಮ್ಮ ವಿರೋಧಿಗಳು ಕಾರಣ ಏಕೆಂದರೆ
ನಮಗೆ ಪ್ರಚಾರದ ಅಗತ್ಯವೇ ಬೀಳಲಿಲ್ಲ, ನಮಗೆ ಪ್ರಚಾರವನ್ನು ನಮ್ಮ ವಿರೋಧಿಗಳೇ
ಒದಗಿಸಿಬಿಟ್ಟರು" ಎಂದರೆಂದು ಅದರಲ್ಲಿ ಭಾಗವಹಿಸಿದವರು ನಮಗೆ ಹೇಳಿದರು.
ವಿರೋಧಿಗಳು ಪ್ರಧಾನವಾಗಿ ಪ್ರಶ್ನಿಸಿದ್ದೇ ಈ ಇವರ ಹಾಸ್ಯಾಸ್ಪದ ನಿಯಮ ನಿಬಂಧನೆಗಳನ್ನು.
ಅದು ಹೋಗಲಿ ಸಮಾರೋಪ ಸಮಾರಂಭದ ಅತಿಥಿಗಳಾಗಿದ್ದ ವಿಮರ್ಶಕ ಜಿ.ಎಚ್.ನಾಯಕ್ ಅವರು ಸಹ ಹುಕುಂ ಸ್ವರೂಪದ ಆ ನಿಯಮಗಳ ಕುರಿತು ತಮ್ಮ
ಆಕ್ಷೇಪವನ್ನು ಎತ್ತಿದರು ಎಂಬುದು ನಮಗೆ ಗೊತ್ತಿದೆ. ಹೌದು, ಸಂಭ್ರಮದ ಯಶಸ್ಸಿನ ಒಂದು ಪಾಲಿಗೆ ನಾವು ಕಾರಣಕರ್ತರಾಗಿದ್ದೇವೆ. ಅದರೆ ಅದು ಗಿರಡ್ಡಿಯವರು ವ್ಯಂಗ್ಯವಾಗಿ ಹೇಳುವ ಆ ಕಾರಣಕ್ಕಾಗಿ ಅಲ್ಲ. ಅದು ಪ್ರತಿನಿಧಿ ಶುಲ್ಕ ಸಾವಿರದೈನೂರು ರೂಪಾಯಿಗಳಿಂದ ಕೇವಲ ಐನೂರು ರೂಪಾಯಿಗಿಳಿದು ಆ ಕಾರಣಕ್ಕೆ
ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ನೋಂದಾಯಿಸಿಕೊಳ್ಳಲು ಅನುವಾಯಿತೆನ್ನುವ ಕಾರಣಕ್ಕೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರ ಹತ್ತು ಲಕ್ಷ ರೂಪಾಯಿ ನೀಡಿತ್ತೆನ್ನುವ ಹಿನ್ನೆಲೆಯಲ್ಲಿ"ಸಾಹಿತ್ಯ ಸಂಭ್ರಮಕ್ಕೆ ಪ್ರವೇಶ
ನೀಡುವದನ್ನು ಕಾಯ್ದಿರಿಸಲಾಗಿದೆ" ಎಂಬುದನ್ನು ಪ್ರಗತಿಪರರು ವಿರೋಧಿಸಿದ್ದು
ಕಾರಣವಾಗಿಆ ನಿಬಂಧನೆ ಸಡಿಲುಗೊಂಡು
ಜನರಿಗೆ ಮುಕ್ತ ಪ್ರವೇಶ ದೊರೆತು ಸಭಾಭವನ ತುಂಬಿ ಶೋಭಿಸಿತು ಎಂಬ ಕಾರಣಕ್ಕೆ...! ಸಂಭ್ರಮದ ಯಶಸ್ಸಿನ ಆ ಕ್ರೆಡಿಟ್ ಅನ್ನು ನಾವು ತೆಗೆದುಕೊಳ್ಳುತ್ತೇವೆ ಏಕೆಂದರೆ ಸಾಮಾನ್ಯ
ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಅದರಿಂದ ಪ್ರಯೋಜನವಾಗಿರುವದು ಸಾಧ್ಯವಿದೆ.
ಆದರೆ ಸಂಭ್ರಮದ ಲೋಪಗಳಿಗೆ, ದೋಷಗಳಿಗೆ, ವೈಫಲ್ಯಗಳಿಗೆ ಸಂಘಟಕರೇ ಕಾರಣ. ಉದಾ: ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಮರ್ಶಕ ಟಿ.ಪಿ.ಅಶೋಕ್ "ಬರೀ ಹಿರಿಯ ತಲೆಮಾರಿನ
ಸಾಹಿತಿಗಳ ಚರ್ಚೆ, ಕಾವ್ಯವಾಚನ,ವಿಮರ್ಶೆ ಕೇಳುವಂತಾಗಿತ್ತು,
ಇದರ ಜೊತೆಗೆ ಈ ತಲೆಮಾರಿನ ಹೊಸ ಹುಡುಕಾಟಗಳ ತುಡಿತಗಳ ಯುವ ಬರಹಗಾರರಿಗೂ ಅವಕಾಶ ನೀಡಬೇಕಿತ್ತು"
ಎಂದು ಎತ್ತಿ ತೋರಿಸಿದ ಓರೆ-ಕೋರೆ. ಆ ಲೋಪವನ್ನು ಸಂಘಟಕರ ಭುಜಗಳಿಗೆ ವರ್ಗಾಯಿಸುತ್ತೇವೆ. ಹಾಗೇ ಸಾಹಿತ್ಯದ
ಆತ್ಮವಾದ ಮನುಷ್ಯನನ್ನು, ಅವನ ಬದುಕನ್ನು, ಸಮಾಜವನ್ನು
ಅದರಿಂದ ಕರುಳ ಬಳ್ಳಿಯನ್ನು ಕಿತ್ತೆಸೆದಂತೆ ಮೂರು ದಿನ ಕಿತ್ತೆಸೆಯಲಾಯಿತು ಎಂಬುದಕ್ಕೆ ಸಮಾಜದ ಕುರಿತು,
ಅದನ್ನು ಬಾಧಿಸುತ್ತಿರುವ ಸಮಕಾಲೀನ ಅಪಾಯಗಳ ಕುರಿತು, ವರ್ತಮಾನದ
ಸಂಕಷ್ಟಗಳು, ತಬ್ಬಲಿತನಗಳು, ತಲ್ಲಣಗಳ ಕುರಿತು
ಅವುಗಳಿಗೆ ಸಾಹಿತ್ಯ, ಸಾಹಿತಿಯ ಸ್ಪಂದನೆಯ ಕುರಿತು ಯಾವ ಚರ್ಚೆಯೂ ಆಗಲಿಲ್ಲ
ಎಂಬುದಕ್ಕೂ ಕಾರಣರು ನಾವಲ್ಲ..!
ಇನ್ನುಳಿದಂತೆ ಧಾರವಾಡದ ಸಾಂಸ್ಕೃತಿಕ ಪರಿಸರಕ್ಕೆ
ದೊಡ್ಡ ಅಪಚಾರವೆಂಬುದು ಆಗುತ್ತಿದೆಯೇ ಆಗುತ್ತಿದ್ದರೆ ಅದನ್ನು ಯಾರು ಬಗೆಯುತ್ತಿದ್ದಾರೆಂಬುದನ್ನು
ಸಾರ್ವಜನಿಕರ ವಿವೇಕಕ್ಕೇ ಬಿಡುವದು ಒಳಿತು.
ಒಂದೇ ಹೆಸರು ಕವಲೊಡೆದಂತೆ, ನನ್ನ
ಅವ್ವ ಈರವ್ವ, ಅಪ್ಪ ಈರಪ್ಪ., ಇಬ್ಬರಿಗೂ ಮಧ್ಯೆ ಹತ್ತು ವರ್ಷಗಳ ವ್ಯತ್ಯಾಸ. ಸ್ವಭಾವ
ವ್ಯತ್ಯಾಸಗಳೋ ಹಲವಾರು. ಮೂಲತ: ಇಬ್ಬರೂ ಸಾತ್ವಿಕರು. ಅಪ್ಪನ ಊರು ಬೆಳಗಾವಿ ಜಿಲ್ಲೆಯ
ಗೋಕಾಕ ತಾಲೂಕಿನ ಕೌಜಲಗಿ. ಅಲ್ಲಿಯ ಪರಶೆಟ್ಟೆಪ್ಪ ಶೆಟ್ಟರ ಪುತ್ರನಾಗಿ ನನ್ನ ತಂದೆ
ಜನಿಸಿದ್ದು ೨೮ ಡಿಸೆಂಬರ್ ೧೯೦೯ರಲ್ಲಿ. ಪರಶೆಟ್ಟೆಪ್ಪ ಶೆಟ್ಟರು ನನ್ನ ತಂದೆಯ
ಎಳವೆಯಲ್ಲೇ ಮುಂಬಯಿಗೆ ಹೋಗಿ ಅಲ್ಲಿ ತೇಜಿ-ಮಂದಿ ವ್ಯಾಪಾರ ಮಾಡುತ್ತಿದ್ದರು. ಅದು ಸರಕು
ಸಾಮಗ್ರಿಗಳನ್ನು ಕೊಂಡಿಟ್ಟು ಹೆಚ್ಚು ಬೆಲೆ ಬಂದಾಗ ಮಾರುವ ವ್ಯಾಪಾರವಿದ್ದೀತು. ನನ್ನ
ತಂದೆ ಮುಂಬಯಿಯಲ್ಲಿನ ತಮ್ಮ ಬಾಲ್ಯದ ಕುರಿತು ಹೇಳಿಕೊಳ್ಳುವಾಗ ಭಯ್ಯಾಗಳ ಅಂಗಡಿಗಳಲ್ಲಿ
ಹಣ ಕೊಟ್ಟು ಮನಸೋ ಇಚ್ಛೆ ಹಾಲು ಕುಡಿಯುತ್ತಿದ್ದುದು, ಕುದುರೆ ಸವಾರಿ
ಮಾಡುತ್ತಿದ್ದುದು-ಇಂಥ ಪ್ರಸಂಗಗಳು ಕೆಲಕಾಲ ನನ್ನ ಅಜ್ಜನ ಆರ್ಥಿಕ ಸ್ಥಿತಿ
ಚೆನ್ನಾಗಿತ್ತೆಂಬುದಕ್ಕಿಂತ ಹೆಚ್ಚಿಗೆ ಹೇಳುವದಿಲ್ಲ. ನನ್ನ ತಂದೆ ಅಲ್ಲಿ ಮರಾಠಿ
ಪ್ರಾಥಮಿಕ ಶಿಕ್ಷಣ ಪಡೆದರು. ನನ್ನ ತಂದೆಯ ಮರಾಠಿ ಓದು, ಬರಹ, ಮಾತು ಅವರ ಕನ್ನಡದಷ್ಟೇ
ನಿರರ್ಗಳ. ತಮ್ಮ ಕಾರ್ಯನಿಮಿತ್ತ ಅವರು ಮಿರಜ್, ಸಾಂಗ್ಲಿ, ಗಡ್ ಹಿಂಗ್ಲಜ್, ನಿಪ್ಪಾಣಿಗೆ
ಹೋದಾಗೆಲ್ಲ ಲೋಕಸತ್ತಾ, ಸಕಾಳ, ತರುಣ ಭಾರತ್ ಇತ್ಯಾದಿ ಒಂದು ಸಿವುಡು ಮರಾಠಿ
ಪತ್ರಿಕೆಗಳನ್ನು ತೆಗೆದುಕೊಂಡು ಬಂದು ಅರೆಪದ್ಮಾಸನದಲ್ಲಿ ಕುಳಿತು ರಾತ್ರಿ
ಹನ್ನೆರಡು-ಒಂದು ಗಂಟೆಯವರೆಗೆ ಓದುತ್ತಿದ್ದುದು, "ಟಾಯಮ್ ಬಾಳ ಆತ, ಮಕ್ಕೊರ್ರೀ ಇನ್ನs"
ಎಂದು ನಮ್ಮವ್ವ ಪದೇ ಪದೇ ಹೇಳುವದು ನಮಗೆ ಸಾಮಾನ್ಯ ದೃಶ್ಯವಾಗಿರುತ್ತಿತ್ತು.
ನನ್ನ
ಅಜ್ಜನ ಸುಭಿಕ್ಷದ ಕಾಲ ಮುಗಿದು ಅವರು ತಮ್ಮ ವ್ಯವಹಾರದಲ್ಲಿ ಸಂಪೂರ್ಣ ನೆಲ
ಕಚ್ಚಿದ್ದರು. ಈ ಅಜ್ಜನ ನೆನಪು ನನಗೆ ಮಸಕು ಮಸಕಾಗಿ ಇದೆ. ಬೈಲಹೊಂಗಲದಲ್ಲಿ ನಾವು
ಬಾಡಿಗೆಗಿದ್ದ ಮನೆಯೊಂದರ ಹೊರಕೋಣೆಯಲ್ಲಿ ಆತನ ವಾಸ. ಜೋಳದ ಒಣ ದಂಟು ಸುಲಿದು ಅದರ ಬೆಂಡು
ಮತ್ತು ಸಿಬರುಗಳಿಂದ ಆತ ತಾಸುಗಟ್ಟಲೆ ಶ್ರದ್ಧೆ ವಹಿಸಿ ಮಾಡಿಕೊಟ್ಟ ಆಟದ ಬಂಡಿಯನ್ನು
ನಾನು ಮುದ್ದಾಂ ಕೆಡಿಸಿ ಅವನ ಕೋಪಕ್ಕೆ ಕಾರಣನಾಗುತ್ತಿದ್ದುದು, ನನ್ನವ್ವ ನನ್ನನ್ನು
ಬೈಯ್ಯುತ್ತಿದ್ದುದು ಸ್ಪಷ್ಟವಾಗಿ ನೆನಪಿವೆ. ಮತ್ತೊಂದು ಸ್ಪಷ್ಟ ನೆನಪು ಬಿಳಿ
ರುಮಾಲು,ಧೋತ್ರ, ಬಗಲಗಸಿ ಅಂಗಿಯಿಂದಲಂಕೃತವಾದ ಆ ನನ್ನ ಅಜ್ಜನ ಪಾರ್ಥಿವ ಶರೀರವನ್ನು ಅದೇ
ಮಂದ ಬೆಳಕಿನ ಹೊರಕೋಣೆಯಲ್ಲಿ ಗೋಡೆಗೊರಗಿಸಿ ಕುಳ್ಳಿರಿಸಿದ್ದು. ನನ್ನವ್ವ ಸಂಪೂರ್ಣ
ಶ್ರದ್ಧೆಯಿಂದ ಅಜ್ಜನ ಸ್ವಚ್ಛತೆ ಸುಶ್ರೂಷೆ ಮಾಡುತ್ತಿದ್ದಳು. ನನ್ನ ತಂದೆಯ ತಾಯಿಯನ್ನು
ನಾನು ನೋಡಿಲ್ಲ. ಆಕೆ ಮೊದಲೇ ಗತಿಸಿದ್ದಳೆಂದು ತೋರುತ್ತದೆ. ಆಕೆ ಮತ್ತು ಖ್ಯಾತ ಜಾನಪದ
ಗಾಯಕರಾಗಿದ್ದ ಹುಕ್ಕೇರಿ ಬಾಳಪ್ಪನವರ ತಾಯಿ ಅಕ್ಕ-ತಂಗಿಯರು. ಸವದತ್ತಿ ತಾಲೂಕಿನ
ಆಲದಕಟ್ಟಿ ಅವರ ತವರುಮನೆ. ಆ ಮನೆಯ ಹಿರಿಯರು ತಲ್ಲೂರು ದೇಸಾಯರ ಬಳಿ ಕಾರಭಾರಿಗಳಾಗಿ
ಕಾರ್ಯ ನಿರ್ವಹಿಸುತ್ತಿದ್ದುದರಿಂದ ತಲ್ಲೂರ ಶೆಟ್ಟರು ಎಂದೇ ಕರೆಸಿಕೊಳ್ಳುತ್ತಿದ್ದರು.
ಮುಂಬಯಿಯಿಂದ
ಮರಳಿದ ನಂತರ ಅಲ್ಲಿ ತಾವು ಅದುವರೆಗೆ ಪಡೆದ ಹಂತದ ಶಿಕ್ಷಣವನ್ನು ನನ್ನ ತಂದೆ ಪುನ:
ಕನ್ನಡದಲ್ಲಿ ಪಡೆಯಬೇಕಾಯಿತು.ಆಗಿನ ಮುಲ್ಕಿ (೭ನೇ ಇಯತ್ತೆ) ಮುಗಿಸಿ ಅವರು ಶಿಕ್ಷಣ
ಕೊನೆಗೊಳಿಸಿದ್ದರು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಅಪ್ಪ ಒಂದಷ್ಟು ವರ್ಷ
ಗೋಕಾಕದಲ್ಲಿ, ಒಂದೆರಡು ವರ್ಷ ಮುನವಳ್ಳಿಯಲ್ಲಿ ಇದ್ದರು. ಮತ್ತೊಬ್ಬನ ಪಾಲುದಾರಿಕೆಯಲ್ಲಿ
ವ್ಯವಹಾರವೊಂದನ್ನು ಪ್ರಾರಂಭಿಸಿದ್ದರಾದರೂ ಪಾಲುದಾರನ ವಂಚಕ ಬುದ್ಧಿಯಿಂದಾಗಿ ಅದನ್ನೂ
ಕೈ ಬಿಟ್ಟಿದ್ದರು. ಕೊನೆಗೆ ತಲ್ಲೂರ ಶೆಟ್ಟರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ
ಸೋದರಮಾವಂದಿರ ಆಶ್ರಯಕ್ಕೆ ಬೈಲಹೊಂಗಲಕ್ಕೆ ಬಂದರು. ಆಮೇಲೆ ಬೈಲಹೊಂಗಲದ ಪ್ರತಿಷ್ಠಿತ
ಜಿ.ಎಸ್.ಮೆಟಗುಡ್ ಅವರ ವಿಜಯ ಕಾಟನ್ ಮತ್ತು ಆಯಿಲ್ ಮಿಲ್ ನಲ್ಲಿ ಕಾರಕೂನ ಅಥವಾ
ಅಕೌಂಟಂಟ್ ನೌಕರಿ ಸೇರಿ ಪ್ರತ್ಯೇಕವಾಗಿ ಬದುಕಿದರು.
ಹಾಗೆ ಬೈಲಹೊಗಲದಲ್ಲಿ ನನ್ನ
ನೆನಪುಗಳು ನಿಚ್ಚಳವಾಗಿ ಹಿಂದಕ್ಕೆ ಹೋಗುವಷ್ಟು ಅವಧಿಯಲ್ಲಿ ನಾವು ಬದುಕಿದ್ದು ಒಂದು ತೀರ
ಸಾಮಾನ್ಯ ಮನೆಯಲ್ಲಿ. ಅದಕ್ಕೆ ನಾನಾಗಲೇ ಪ್ರಸ್ತಾಪಿಸಿದ ಪ್ರತ್ಯೇಕವಾಗಿದ್ದ ಒಂದು
ಹೊರಕೋಣೆ, ಅದನ್ನು ಬಿಟ್ಟರೆ ಎರಡೇ ಅಂಕಣ- ಒಂದು ಪಡಸಾಲೆ ಮತ್ತು ಒಂದು
ಅಡುಗೆಮನೆ.ದೊಡ್ಡದಾಗಿದ್ದ ಅಡುಗೆಮನೆಯ ಒಂದು ಮೂಲೆಯಲ್ಲಿ ಬಚ್ಚಲಿತ್ತು. ಹಿತ್ತಲಲ್ಲಿ
ಕಸಕಡ್ಡಿ ಸಗಣಿ-ಗಂಜಳಗಳ ತಿಪ್ಪೆ. ಏಕೆಂದರೆ ನಮ್ಮವ್ವ ಒಂದು ಆಕಳನ್ನು ಸಾಕಿಕೊಂಡಿದ್ದಳು.
ಇನ್ನುಳಿದಂತೆ ಸಾಧುವಾಗಿದ್ದ ಆ ಆಕಳಿಗೆ "ಕಾವಕೂಲಿ"ಗೆ ಹೊಡೆದುಕೊಂಡು ಹೋದವ ಸಂಜೆ
ಒಮ್ಮೊಮ್ಮೆ ಮನೆಯ ತಿರುವಿನಲ್ಲೇ ಅದನ್ನು ಬಿಟ್ಟು ಹೋದ ಮೇಲೆ ಮನೆಗೆ ಬರದೇ
ಸಮೀಪದಲ್ಲಿದ್ದ ಹೊಲ-ಗದ್ದೆಗಳಲ್ಲಿ ತುಡುಗು ಮೇಯುವ ಚಟವಿತ್ತು. ಅದನ್ನು ಕೊಂಡವಾಡಕ್ಕೆ
ಒಯ್ದು ಹಾಕಿದರೆ ದಂಡ ತೆರಬೇಕಾದೀತೆಂಬ ಕಾರಣಕ್ಕೆ ನನ್ನವ್ವ ಅದನ್ನು ಕರೆತರಲು ನನ್ನಣ್ಣ
ಬಸವರಾಜನನ್ನು-ಅವನಾಗ ಹೈಸ್ಕೂಲ್ ವಿದ್ಯಾರ್ಥಿ-ಕಳಿಸುತ್ತಿದ್ದಳು. ಅದರ ಬೆಂಬತ್ತಿ ಓಡಾಡಿ
ಕೋಲಿ ಹಾಯ್ದು ಕೆಸರು ತುಳಿದು ಅಣ್ಣ ಅದು ಹೇಗೋ ಕರೆತಂದಾದ ಮೇಲೆ ಅದನ್ನು ಕಟ್ಟಿಹಾಕಿ
"ದನಕ್ಕೆ ಬಡಿದಂತೆ" ಬಡಿದು ತನ್ನ ಕೋಪ ಶಮನಗೊಳಿಸಿಕೊಳ್ಳುತ್ತಿದ್ದ.
ಒಂಬತ್ತು
ಮಕ್ಕಳ ಪೈಕಿ ಚೊಚ್ಚಲು ಮಗುವಾಗಿ ಹುಟ್ಟಿ ಎಳವೆಯಲ್ಲೇ ತೀರಿಹೋದ ಒಂದು ಗಂಡು ಮತ್ತು
ಬಾಲ್ಯಾವಸ್ಥೆಗೆ ತಲುಪಿ ಕಣ್ಮುಚ್ಚಿದ ಒಂದು ಹೆಣ್ಣು ಬಿಟ್ಟು ಉಳಿದವರು ನಾವು ಏಳು ಜನ
ಇದ್ದೆವು. ಅಕ್ಕಂದಿರ ಪೈಕಿ ಶಾಂತಕ್ಕ ಎಂಬುವಳನ್ನು ನನ್ನ ಸೋದರಮಾವನಿಗೆ ಮದುವೆ
ಮಾಡಿಕೊಟ್ಟಿದ್ದು ಅವಳು ನನ್ನ ತಾಯಿಯ ತವರೂರಾಗಿದ್ದ ಸವದತ್ತಿ ತಾಲೂಕಿನ
ಸತ್ತೀಗೇರಿಯಲ್ಲಿದ್ದುದರಿಂದ ನಮ್ಮ ಮನೆಯಲ್ಲಿ ನಾವು ಆರು ಜನ ಮಕ್ಕಳು, ನನ್ನ ತಂದೆ,ತಾಯಿ
ಹಾಗೂ ನಮ್ಮ ಅಜ್ಜ ಹೀಗೆ ಒಂಬತ್ತು ಜನ ಇದ್ದೆವು. ಕೊನೆಯವನಾಗಿ ಹುಟ್ಟಿದ ನನ್ನ ತಮ್ಮ
ಆಗಿನ್ನೂ ಕೈಗೂಸು. ಅವನು ಹುಟ್ಟುವ ಹೊತ್ತಿಗೆ ನನ್ನ ತಂದೆಗೆ ೫೦ ವರ್ಷ, ನನ್ನ ತಾಯಿಗೆ
೪೦. ಆ ವಯಸ್ಸಿನಲ್ಲಿ ಮತ್ತೊಂದು ಹಡೆಯಬೇಕಾಗಿ ಬಂದುದು "ನಾಚಿಕಿ ಸಾವಾ"ಗಿತ್ತು ಎಂದು
ನನ್ನವ್ವ ಒಮ್ಮೆ ಅಂದಂತಿತ್ತು. ಅದು ಸಂಕೋಚವೋ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂಬತ್ತು
ಮಕ್ಕಳನ್ನು ಹಡೆಯುವ ಸ್ಥಿತಿಯ ಕುರಿತ ಬೇಸರವೋ ಗೊತ್ತಿಲ್ಲ. ಆಗ
ನನ್ನ ತಂದೆಗೆ ಸಿಗುತ್ತಿದ್ದುದು ವಾರಕ್ಕೆ ೨೫ ಅಂದರೆ ತಿಂಗಳಿಗೆ ೧೦೦ ರೂಪಾಯಿಯ ವೇತನ.
ಅದರಲ್ಲಿ ಮನೆ ಬಾಡಿಗೆ ಎಂದು ೧೦ ರೂಪಾಯಿ ಕಳೆದು ಉಳಿದ ೯೦ ರೂಪಾಯಿಯಲ್ಲಿ ಒಂಬತ್ತು ಜನರ
ಬದುಕು ನಡೆಯಬೇಕಿತ್ತು. ಈಗ ನಾನು ಹೇಳುತ್ತಿರುವುದು ೧೯೬೨-೬೩ರ ಮಾತು. ಬಾಡಿಗೆಯ ಹತ್ತು
ರೂಪಾಯಿ ಕೊಡುವಲ್ಲಿ ವಿಳಂಬವಾದರೆ ಮನೆಯ ಮಾಲಿಕ ಯಡಳ್ಳಿ ಬಸವಣ್ಣೆಪ್ಪನೆಂಬ ವೃದ್ಧ ಬಂದು
ಮನೆಯಂಗಳದಲ್ಲಿ ನಿಂತು ಕೂಗಾಡುವದು ಶತಸ್ಸಿದ್ಧವಿತ್ತು. ಬ್ರಿಟಿಷರಂಥ ಸ್ವಚ್ಛ ಮೈಬಣ್ಣದ ಆ
ಸ್ಫುರದ್ರೂಪಿ ಮುದುಕ ತಲೆಯ ಮೇಲೊಂದು ಹಳದಿ ರುಮಾಲು ಸುತ್ತಿ, ಬಿಳಿ ಅಂಗಿ,ಕೋಟು,ಧೋತರ
ಉಟ್ಟು, ಕೈಲೊಂದು ಛತ್ರಿ ಹಿಡಿದು ಬರುತ್ತಿದ್ದ. ತಲೆಯ ಮೇಲಿನ ರುಮಾಲು ತೆಗೆದು ಮೈಸೂರು
ಪೇಟ ತೊಡಿಸಿದರೆ ಸಾಕ್ಷಾತ್ ಮುದ್ದೇನಹಳ್ಳಿಯ ಮೋಕ್ಷಗುಂಡಂ ವಿಶ್ವೇಶ್ವರಯ್ಯ! "ಕೊಡತೀವ್
ತೊಗೊರ್ರಿ, ಮುಂದಿನ ವಾರ ಕೊಡತೀವ್ ತೊಗೊರ್ರಿ" ಎಂದು ನನ್ನ ಅವ್ವ- ಅಕ್ಕ ವಿನಂತಿಸಿ
ಅವನನ್ನು ಸಾಗಹಾಕಿದ ಮೇಲೆ ಅವನು ಹೇಗೆ ಮುಖವೆತ್ತಿ ಮಾತಾಡಿದ, ಒಂದು ಕಾಲು ಮುಂದಿಟ್ಟು
ಛತ್ರಿಯ ಸಮೇತ ಹೇಗೆ ಕೈ ಮೇಲೆತ್ತೆತ್ತಿ ಕೂಗಾಡಿದ ಎಂದು ನಾನು ನನ್ನ ಅಕ್ಕಂದಿರು
ನಗಾಡುತ್ತಿದ್ದೆವು. ನನ್ನವ್ವ ಅಪ್ಪನಿಗೂ ಇದು ಸಮ್ಮತವೇ ಇರುತ್ತಿತ್ತು. ಏಕೆಂದರೆ ಅವರೂ
ನಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ವಾಸ್ತವವಾಗಿ ಬದುಕು ಕಷ್ಟಸಾಧ್ಯವಾಗಿತ್ತು.
ಪಡಸಾಲೆಯ ನೆಲದ ಮೇಲೆ ಜಮಖಾನ ಹಾಸಿ ಎಲ್ಲರೂ ಒಬ್ಬರ ಪಕ್ಕದಲ್ಲೊಬ್ಬರು ಮಲಗುತ್ತಿದ್ದೆವು.
ಆ ಮನೆಯಲ್ಲಿ ತುಂಬಿಕೊಳ್ಳುತ್ತಿದ್ದ ಹೊಗೆ ನಮ್ಮ ಅತಿ ದೊಡ್ಡ ಸಮಸ್ಯೆಯಾಗಿತ್ತು. ಚಿಕ್ಕ
ಕಿಟಕಿಯೊಂದರ ಹೊರತು ಅದಕ್ಕೊಂದು ಔಟ್ ಲೆಟ್ ಅಂತ ಇರಲಿಲ್ಲ. ಅದು ಅಲ್ಲೇ ಸುತ್ತಿ
ಮನೆಗೋಡೆಗಳು ಮಸಿಹಿಡಿದಿದ್ದವು. ನನ್ನವ್ವ ಪ್ರತಿನಿತ್ಯ ಅದನ್ನು ಶಪಿಸುತ್ತಿದ್ದಳು.
ಮನೆಯಲ್ಲಿ ಕತ್ತಲೆ ಸದಾ ಡೇರೆ ಹಾಕಿರುತಿತ್ತು.
ನನ್ನ ತಂದೆಯ ಸೋದರಮಾವಂದಿರಿಗೆ
ಪೇಟೆಯ ಉಪಬೀದಿಯಲ್ಲಿ ಸ್ವಂತ ಮನೆಗಳಿದ್ದವು, ಕಮೀಶನ್ ಏಜನ್ಸಿ ಇತ್ತು, ಸ್ಥಿತಿವಂತಿಕೆ
ಇತ್ತು. ಚನಬಸಪ್ಪ ಮತ್ತು ಅಪ್ಪಯ್ಯಪ್ಪ ಎಂಬ ಆ ಸೋದರಮಾವಂದಿರ ಪೈಕಿ ಹಿರಿಯವನಾದ
ಚನಬಸಪ್ಪ-ಅದಾಗಲೇ ಹಣ್ಣು ಹಣ್ಣು ಮುದುಕನಾಗಿದ್ದವ-ಹೊರಕೋಣೆಯಲ್ಲಿ ಒಬ್ಬನೇ ಇಸ್ಪೀಟ್
ಎಲೆಗಳನ್ನು ಹರವಿಕೊಂಡು ಅದೇನೋ ಆಡುತ್ತ ಕುಳಿತಿರುತ್ತಿದ್ದ. ಯಲಿಗಾರ್ ಮನೆತನದ
ಬಾಲಕನೊಬ್ಬ ತನ್ನ ತಾಯಿಯ ತವರೂರಾದ ಹುಣಸಿಕಟ್ಟೆಯಿಂದ ಬಂದು ಹಾಗೊಮ್ಮೆ ಭೆಟ್ಟಿಯಾದ
ಸಂದರ್ಭದಲ್ಲಿ ಚನಬಸಪ್ಪ ಅವನಿಗೆ ಹೇಳಿದ್ದು, "ತಮ್ಮಾ ನಿನಗೆ ವಿದೇಶಯೋಗವಿದೆ ಎಂಬ ಮಾತು.
ಅದು ಸತ್ಯವಾಯಿತು. ಮುಂದೆ ಕುಮಾರಸ್ವಾಮಿಗಳೆಂದು ಖ್ಯಾತರಾದ ಆ ಯೋಗಿ ದೇಶ ವಿದೇಶ
ಸುತ್ತಿ, ಪೋಪ್ ಜಾನ್ ಪಾಲ್ ರನ್ನು ವ್ಯಾಟಿಕನ್ ಸಿಟಿಯಲ್ಲಿ ಕಂಡು ಇಷ್ಟಲಿಂಗವನ್ನು
ಕೊಟ್ಟು ಬಂದರು. ಧಾರವಾಡದಲ್ಲಿ ತಪೋವನ ಸ್ಥಾಪಿಸಿದರು. ಇದನ್ನೆಲ್ಲ ನನ್ನ ತಂದೆ
ಹೇಳುತ್ತಿದ್ದರು. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಲ್ಲೂರ ಶೆಟ್ಟರ ಮನೆಯಲ್ಲಿ
ನಮಗೆ ನಿಯಮಿತವಾಗಿ ಆಮಂತ್ರಣವಿರುತ್ತಿದ್ದು ಆಗ ಊಟಕ್ಕೆ ನಮ್ಮ ತಂದೆ ನನ್ನನ್ನು
ಕರೆದುಕೊಂಡು ಹೋಗುತ್ತಿದ್ದುದು ಬಿಟ್ಟರೆ ಇನ್ನುಳಿದಂತೆ ಸಹಾಯ ಯಾಚಿಸಿಯಾಗಲಿ ಸುಮ್ಮನೇ
ಆಗಲಿ ಅವರಲ್ಲಿ ಹೋಗುತ್ತಿರಲಿಲ್ಲ.
ನಮ್ಮ ತಂದೆ ಬದುಕನ್ನು ಸ್ವೀಕರಿಸಿದ ರೀತಿಯೇ
ಅದ್ಭುತವಾಗಿತ್ತು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಗೋಕಾಕದಲ್ಲಿ ಇದ್ದಾಗಲೇ
ನನ್ನ ತಂದೆ ಮತ್ತು ಅವರ ತಮ್ಮ ಮಹಾಲಿಂಗಪ್ಪ ಶೆಟ್ಟರ್ ಇಬ್ಬರೂ ಪೂರ್ಣಪ್ರಮಾಣದಲ್ಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ರಾಷ್ಟ್ರೀಯವಾದ ನನ್ನ ತಂದೆಯ
ಆದರ್ಶವಾಗಿತ್ತು. ಅನಿಶ್ಚಿತತೆ, ಸಂಸಾರದ ತೊತ್ತಳದುಳಿತಗಳು ಅದಕ್ಕೆ ತಡೆಯಾಗಲಿಲ್ಲ.
ಯರವಡಾ, ಹಿಂಡಲಗಾ ಜೇಲುಗಳಲ್ಲಿಯ ತಮ್ಮ ವಾಸದ ಅವಧಿಯ ನೆನಪುಗಳನ್ನು ನಮ್ಮ ತಂದೆ
ನನ್ನೊಂದಿಗೆ ಹಲವು ಸಲ ಬಿಚ್ಚುತ್ತಿದ್ದರು. ಅದರಲ್ಲಿ ಒಂದು ಘಟನೆ ನನಗೆ ನನ್ನ ತಂದೆಯ
ನಿರ್ಧಾರದ ದಿಟ್ಟತನವನ್ನು ತೋರಿತ್ತು. ಹಾಗೆ ಒಮ್ಮೆ ಅವರು ಬ್ರಿಟಿಷ್ ಸರಕಾರದಿಂದ
ಶಿಕ್ಷೆಗೊಳಗಾಗಿ ಜೇಲಿನಲ್ಲಿದ್ದಾಗ ನನ್ನ ತಾಯಿಗೆ ಅವಳ ತವರಿನಲ್ಲಿ ಹೆರಿಗೆಯಾಗಿ, ಆ
ಸಂದರ್ಭದಲ್ಲಿ ನಮ್ಮ ತಂದೆಯವರನ್ನು ನೋಡಬೇಕೆನ್ನಿಸಿ ಪತ್ರ ಬರೆಸಿದ್ದರಂತೆ. ಜೇಲಿನ
ಆಡಳಿತ ಅವರನ್ನು ಪೆರೋಲ್ ಮೇಲೆ ಬಿಡಲು ಸಿದ್ಧವೂ ಆಯಿತು. ಆದರೆ ಅದಕ್ಕೊಂದು
ಪೂರ್ವಶರತ್ತು ಇತ್ತು. ಸತ್ಯಾಗ್ರಹದಲ್ಲಿ ತಾನು ಪಾಲ್ಗೊಂಡಿದ್ದು ತಪ್ಪು ಎಂದು ನನ್ನ
ತಂದೆ ಲಿಖಿತವಾಗಿ ಕ್ಷಮಾಪಣೆ ಕೋರಬೇಕಿತ್ತು. ನನ್ನ ತಂದೆ ಅದಕ್ಕೆ ಸಿದ್ಧರಾಗಲಿಲ್ಲ. ಅವರ
ಮನದಲ್ಲಿದ್ದ ಆಲೋಚನೆಗಳು ಬಹುಶ: ಎರಡು- ಮೊದಲನೆಯದು ಆದರ್ಶದ ಮಾತು. ನನ್ನ ತಂದೆ ಸ್ವತ:
ಗಾಂಧೀಜಿಯವರನ್ನು ಕಂಡು ಸತ್ಯಾಗ್ರಹದಲ್ಲಿ ಭಾಗವಹಿಸುವ ಇಚ್ಚೆಯನ್ನು ವ್ಯಕ್ತಗೊಳಿಸಿ
ಧುಮುಕಿದ್ದ ಆಂದೋಲನವಾಗಿತ್ತದು. (ಗಾಂಧೀಜಿಯನ್ನು ಮುಖತ: ಕಂಡು ವೈಯಕ್ತಿಕ
ಸತ್ಯಾಗ್ರಹದಲ್ಲಿ ಭಾಗವಹಿಸುವದಾಗಿ ಹೇಳಿ ಅವರ ಸಮ್ಮತಿ ಪಡೆದು ಬಂದದ್ದು ನನ್ನ ತಂದೆಯ
ಮಟ್ಟಿಗೆ ತಮ್ಮ ಬದುಕಿನ ಅತ್ಯಂತ ಸ್ಮರಣಾರ್ಹ ಘಟನೆಯಾಗಿತ್ತು). ಎರಡನೆಯದು ಸರಳ ತರ್ಕದ
ಮಾತು. ಹೇಗೂ ಕೂಸು ಬಾಣಂತಿ ಆರಾಮವಾಗಿದ್ದಾರೆ ಎಂದಿತ್ತು ಪತ್ರ. ಹಾಗಿದ್ದ ಮೇಲೆ ಹೋಗುವ
ಅಗತ್ಯವೇನು? ಸ್ವಾತಂತ್ರ್ಯ
ಹೋರಾಟದ ಅವಧಿಯಲ್ಲಿ ಚಿಂತನೆಯನ್ನು ವ್ಯಕ್ತಿತ್ವವನ್ನು ತೀವ್ರವಾಗಿ ಪ್ರಭಾವಿಸಿದ
ವಿಚಾರಗಳು ತತ್ತ್ವಗಳು ಸ್ವಾತಂತ್ರ್ಯಾನಂತರ ನನ್ನ ತಂದೆಯ ಬದುಕಿನ ಆದರ್ಶಗಳಾದವು. ನನ್ನ
ತಂದೆಯ ವ್ಯಕ್ತಿತ್ವಕ್ಕೊಂದು ಸರಳತೆ ಇತ್ತು, ಸಜ್ಜನಿಕೆ ಇತ್ತು. ಬಿಳಿಯ ಉದ್ದ ತೋಳಿನ
ಶರ್ಟು,ಕೋಟು,ಧೋತರ ಹಾಗೂ ಗಾಂಧೀ ಟೋಪಿ ಇವು ಜೀವನದುದ್ದಕ್ಕೂ ಅವರ ಉಡುಗೆಗಳು. ಸಭ್ಯತೆ
ಅವರ ವ್ಯಕ್ತಿತ್ವದ ಒಟ್ಟು ಸಾರ. ಯಾರೊಂದಿಗೂ ಅವರು ಕಲಹ ಮಾಡಿದ್ದಾಗಲಿ, ತಮಗೆ
ಸಂಬಂಧವಿರದ ವಿಷಯಗಳಲ್ಲಿ ತಲೆ ಹಾಕಿದ್ದಾಗಲಿ, ಅವರಿವರ ಬಗ್ಗೆ ಸಲ್ಲದ ಮಾತಾಡಿದ್ದಾಗಲಿ
ನಾನೆಂದೂ ನೋಡಲಿಲ್ಲ. ಯಾವ ವ್ಯಸನಗಳೂ ಇರಲಿಲ್ಲವಾಗಿ ಸ್ವಂತದ್ದೆನ್ನುವ ಖರ್ಚುಗಳೂ
ಇರಲಿಲ್ಲ. ವೇತನದ ಹಣವೆಲ್ಲವನ್ನೂ ಮನೆಗೆ ಕೊಡುತ್ತಿದ್ದರು. ಅವ್ವ ಮತ್ತು ನಮ್ಮ
ಹಿರಿಯಕ್ಕ, ಗೌರಕ್ಕ, ಹೇಗೋ ನಿಭಾಯಿಸುತ್ತಿದ್ದರು.
ಅಂಥ ದುರ್ಭರ ದಿನಗಳಲ್ಲೇ
ನನ್ನ ಹಿರಿಯ ಸೋದರಮಾವ ವೀರಣ್ಣ ಬಸವಂತಪ್ಪ ಮರಡಿಯನ್ನು ಸತ್ತೀಗೇರಿಯಲ್ಲಿ ಗುಂಡಿಟ್ಟು
ಕೊಲ್ಲಲಾಯಿತು. ತನ್ನ ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಆತ ನನ್ನ
ಹಿರಿಯಕ್ಕ ಗೌರಕ್ಕನನ್ನು ಮದುವೆಯಾಗಿದ್ದ. ಈ ಮದುವೆಯಾದ ಕೆಲವೇ ತಿಂಗಳಲ್ಲಿ ಈ ಕೊಲೆ
ನಡೆದುಹೋಗಿತ್ತು. ರಸಿಕತನ, ಆತ್ಮವಿಶ್ವಾಸ, ಅಚ್ಚುಕಟ್ಟಾದ ವೇಷಭೂಷಣ, ಹಾಗೂ ಸುಶಿಕ್ಷಿತ
ನಡಾವಳಿಗಳಿಂದ ಕೂಡಿದ ಆಕರ್ಷಕ ವ್ಯಕ್ತಿತ್ವದಿಂದಾಗಿ ಆತ ಸುತ್ತ ಫಾಸಲೆಯಲ್ಲಿ ಎದ್ದು
ಕಾಣುವ ಗರಿಮೆಯೊಂದನ್ನು ಹೊಂದಿದ್ದ. ಆತನ ವರ್ಚಸ್ಸು ಸಹಿಸದೇ ಆತನ ಗೆಳೆಯನೇ ಆಗಿದ್ದ ಊರ
ಗೌಡ ಆತನಿಗೆ ಗುಂಡಿಕ್ಕಿದ್ದ. ಆ ನನ್ನ ಸೋದರಮಾವ ಬೈಲಹೊಂಗಲಕ್ಕೆ ಬಂದಾಗ ಪಡಸಾಲೆಯ
ಗೋಡೆಯಲ್ಲಿದ್ದ ಗೂಟಕ್ಕೆ ತೂಗುಹಾಕಿರುತಿದ್ದ ಜೋಡುನಳಿಗೆಯ ಬಂದೂಕು ನಮಗೆ ಅಚ್ಚರಿಯ ಭಯದ
ವಸ್ತುವಾಗಿ ಕಾಣುತ್ತಿತ್ತು. ತನ್ನ ಅಣ್ಣನನ್ನು ಕೊಂದ ಪಾಟೀಲನನ್ನು ಗುಂಡಿಕ್ಕಿ ಕೊಂದು
ಸೇಡು ತೀರಿಸಿಕೊಳ್ಳಲೆಂದು ಈಗ ಧಾರವಾಡದಲ್ಲಿ ನೆಲೆಸಿರುವ ನನ್ನ ಕಿರಿಯ ಸೋದರಮಾವ
ಗುರುಸಿದ್ದಪ್ಪ ಮರಡಿ ಅದು ಹೇಗೋ ಒಂದು ಕಂಟ್ರಿ ಪಿಸ್ತೂಲು ಸಂಪಾದಿಸಿ ಅದು ಜಪ್ತಿಯಾಗಿ
ಪೋಲೀಸರು ಹುಡುಕತೊಡಗಿದಾಗ ತನ್ನ ಹೆಂಡತಿ (ನನ್ನ ಇನ್ನೊಬ್ಬ ಅಕ್ಕ ಶಾಂತಕ್ಕ) ಹಾಗೂ
ಮಗನನ್ನು ತಂದು ನಮ್ಮ ಮನೆಯಲ್ಲೇ ಇರಿಸಿ ತಾನು ತಲೆಮರೆಸಿಕೊಂಡ. ಈ ಹೆಚ್ಚುವರಿ
ಸದಸ್ಯರಿಂದಾಗಿ ಪರಿಸ್ಥಿತಿ ಮತ್ತಷ್ಟು ದುರ್ಭರವಾಗಿರಬೇಕು.
ಆದರೆ ನನ್ನ ತಂದೆ
ಚಿಂತಾಕ್ರಾಂತರಾಗಿ ತಲೆ ಮೇಲೆ ಕೈಹೊತ್ತು ಕುಳಿತದ್ದಾಗಲೀ, ಕೈಲಾಗದವರಂತೆ
ಸಿಡುಕಿದ್ದಾಗಲೀ, ಅಸಹನೆಯಿಂದ ವರ್ತಿಸಿದ್ದಾಗಲೀ,ಸಾಲ-ಸೋಲ ಮಾಡಿದ್ದಾಗಲೀ ನಮಗೆ
ಅನುಭವಕ್ಕೆ ಬರಲಿಲ್ಲ. ನಾನು ಈಗ ಯೋಚಿಸುವಂತೆ ನಾವಾಗ ಬದುಕಿದ್ದ ಪರಿಸರ ನಮ್ಮ ತಂದೆಯ
ಸುಸಂಸ್ಕೃತ ವ್ಯಕ್ತಿತ್ವಕ್ಕಾಗಲೀ ನಮ್ಮ ಕುಟುಂಬದ ಹಿನ್ನೆಲೆಗಾಗಲಿ
ಪ್ರಶಸ್ತವಾದುದಾಗಿರಲಿಲ್ಲ. ಬಸ್ ಸ್ಟ್ಯಾಂಡಿನ ಪಾರ್ಶ್ವದಲ್ಲಿ ಎರಡು ತೋಟಗಳ ನಡುವೆ
ನೇರವಾಗಿ ಸಾಗುವ ಬೀದಿಯ ಕೊನೆಯೇ ನಮ್ಮ ಓಣಿಯಾಗಿತ್ತು. ಅದನ್ನು ತಾಸೇದಾರ ಓಣಿ
ಎನ್ನುತ್ತಿದ್ದರು. ಅಲ್ಲಿಯ ಮನೆಗಳಲ್ಲಿ ಬಾಡಿಗೆಗೆ ಇದ್ದುದು ಬಹುಪಾಲು ಸಭ್ಯ ಜನರೇ.
ನಮ್ಮ, ಒಬ್ಬ ಉಡುಪಿ ಹೊಟೆಲ್ ಮಾಲೀಕನ, ಕೆಎಸ್ಸಾರ್ಟಿಸಿಯ ಒಬ್ಬ ಡ್ರೈವರನ, ಮತ್ತೊಬ್ಬ
ಕಂಡಕ್ಟರನ ಮನೆಗಳು, ಮತ್ತೆ ಕೆಲವು ಮುಸ್ಲಿಮರ ಮನೆಗಳು ಒಂದು ಸಾಲಿನಲ್ಲಿದ್ದವು.
ಕಿರಿದಾದ ರಸ್ತೆಯಾಚೆ ನಮಗೆದುರಾಗಿದ್ದ ಗಿರೆಣ್ಣವರ ಎಂಬುವರ ಮನೆಯ ಬಾಗಿಲು ವಾಸ್ತವವಾಗಿ
ಅವರ ಹಿತ್ತಿಲು ಬಾಗಿಲಾಗಿದ್ದು ಅಲ್ಲಿ ಪ್ರವೇಶಿಸಿ ತಲೆಬಾಗಿಲಿನಿಂದ ಹೊರಬಿದ್ದರೆ ಅದು
ರಾಣಿ ಕಿತ್ತೂರು ಚೆನ್ನಮ್ಮನನ್ನು ಬಂಧಿಸಿಟ್ಟ ಸೆರೆಮನೆಯ ಶಿಥಿಲ ಅವಶೇಷಗಳಿಗೆ ಮುಖ ಮಾಡಿ
ತೆರೆದುಕೊಳ್ಳುತ್ತಿತ್ತು. ಅದಕ್ಕೆ ಹೂಡೆ ಎನ್ನುತ್ತಿದ್ದರು. ಹೀಗಾಗಿ ಅದು
ಹೂಡೇದ ಓಣಿ. ಆ ಒಟ್ಟು ಪರಿಸರದಲ್ಲಿ ಕೆಲ ಮನೆಗಳಲ್ಲಿ ಬಟ್ಟಿ ಸಾರಾಯಿ
ತಯಾರಾಗುತ್ತಿತ್ತೆಂಬ ಕಾರಣಕ್ಕೆ ಆಗಾಗ ರೇಡ್ ಮಾಡುತ್ತಿದ್ದ ಪೋಲೀಸಿನವರು ಅಂಥವರ
ಮನೆಗಳನ್ನಷ್ಟೇ ಅಲ್ಲದೇ ನಮ್ಮ ಮನೆಯನ್ನು ಒಳಗೊಂಡು ಸಾಲು ಮನೆಗಳನ್ನು ಪ್ರವೇಶಿಸಿ
ಹಿತ್ತಲಿನ ತಿಪ್ಪೆಗಳನ್ನು ಕೋಲು ಚುಚ್ಚಿ ಪರೀಕ್ಷಿಸುತ್ತಿದ್ದರು. ಬಟ್ಟಿಸಾರಾಯಿಯನ್ನು
ಕದ್ದು ಮುಚ್ಚಿ ಕುಡಿಯಲು ಗಿರಾಕಿಗಳು ಅಲ್ಲಿಗೆ ಬರುತ್ತಿದ್ದುದು, ಕೆಲವರು ತಮ್ಮ
ಉಪಪತ್ನಿಯರನ್ನು ಅಲ್ಲಿಯ ಒಂದೆರಡು ಮನೆಗಳಲ್ಲಿ ನೆಲೆಗೊಳಿಸಿದ್ದು ಹೀಗೆ ಒಂದು ನಿಗೂಢತೆ
ಅಲ್ಲಿತ್ತೇನೋ. ಹಾಗೆ ನಮ್ಮ ಮನೆಯ ಹಿತ್ತಿಲನ್ನು ಪರೀಕ್ಷಿಸುತ್ತಿದ್ದ ಪೋಲಿಸರು ಕೊನೆಗೆ
ಅದು ಮೆಟಗುಡ್ ಅವರ ಮಿಲ್ಲಿನಲ್ಲಿ ಉದ್ಯೋಗಿಯಾಗಿದ್ದ ವೀರಪ್ಪ ಶೆಟ್ಟರೆಂಬ ಸಜ್ಜನನೊಬ್ಬನ
ಮನೆಯೆಂದು ಮನದಟ್ಟಾಗಿ ಹಾಗೆ ಮಾಡುವದನ್ನು ನಿಲ್ಲಿಸಿದರು.
ಅವರ ಪಾಡಿಗೆ ಬಿಟ್ಟಿದ್ದರೆ ನಮ್ಮ
ತಂದೆಯವರು ಸ್ವಂತದ್ದೆನ್ನುವ ಒಂದು ಜಾಗ, ಮನೆ ಇವುಗಳನ್ನು ಯಾವಾಗ
ಮಾಡಿಕೊಳ್ಳುತ್ತಿದ್ದರೋ. ಈ ವಿಷಯದಲ್ಲಿ ನನ್ನ ಅವ್ವನ ಪ್ರಯತ್ನಶೀಲತೆಯನ್ನು ಮೆಚ್ಚಬೇಕು.
ಕೃಷಿ ಸಂಶೋಧನಾ ಘಟಕದ ಹೊಲಗಳಿಗೆ ಹೋಗುವ ಮಾರ್ಗದ ಬಳಿ ಒಂದೆರಡು ಪ್ಲಾಟುಗಳು
ಮಾರಾಟಕ್ಕಿದ್ದುದು ನಮ್ಮ ತಾಯಿಯ ಗಮನಕ್ಕೆ ಬಂದು ಅಷ್ಟಿಷ್ಟು ದುಡ್ಡು ಕೂಡಿಡತೊಡಗಿದಳು.
ಇನ್ನೂ ಸ್ವಲ್ಪ ಹಣ ಕಡಿಮೆ ಬಿದ್ದಾಗ ತನ್ನ ಕೆಲವು ಹಳೆಯ ಬೆಲೆಬಾಳುವ ಸೀರೆಗಳ
ಅಂಚಿನಲ್ಲಿದ್ದ ಬಂಗಾರದ ಅಂಶವಿದ್ದ ಜರಿಗಳನ್ನು ಬೇರ್ಪಡಿಸಿ ಅದನ್ನು ಒಟ್ಟುಮಾಡಿ ಮಾರಿ
ಅಂತೂ ಒಂದೂಕಾಲು ಗುಂಟೆಯಷ್ಟು ಜಮೀನು ಕೊಳ್ಳಲು ಅಗತ್ಯವಿರುವ ಹಣ ಸಂಗ್ರಹ ಮಾಡಿದಳು.
ಹಾಗೆ ಖರೀದಿಸಿದ ಜಾಗೆಯಲ್ಲಿ ತಟ್ಟೀಗೋಡೆ, ನಾಡ ಹೆಂಚಿನ ಸಾಮಾನ್ಯ ಮನೆಯೊಂದನ್ನು
ಕಟ್ಟಿಸಿ ನಾವು ಸ್ಥಳಾಂತರಗೊಂಡೆವು. ಆಗ ಅಲ್ಲಿ ನಮ್ಮದೇ ಒಂದೆರಡು ಮನೆಗಳು. ಅನತಿ ದೂರ
ಮೇಲೆ ಹೋದರೆ ಒಡ್ಡರ ಓಣಿ. ವಿದ್ದ್ಯುದ್ದೀಪ ಇರಲಿಲ್ಲವಾಗಿ ರಾತ್ರಿ ಇಡೀ ಪ್ರದೇಶ
ಕತ್ತಲು. ನಮ್ಮ ಮನೆಗೆದುರಾಗಿದ್ದ ದೊಡ್ಡ ಮನೆಗೆ ಸ್ಥಳೀಯ ನ್ಯಾಯಾಲಯದ ಜಡ್ಜ್ ಒಬ್ಬರು
ವಾಸಕ್ಕೆ ಬಂದ ಮೇಲೆ ಪುರಸಭೆಯ ಆಳೊಬ್ಬ ಪ್ರತಿನಿತ್ಯ ಸಂಜೆ ಬಂದು ಕಂಬಕ್ಕೆ ಕಟ್ಟಿದ್ದ
ಲಾಂದ್ರದ ದೀಪಕ್ಕೆ ಸೀಮೆಣ್ಣೆ ಸುರಿದು ಬೆಳಕು ಹಚ್ಚಿ ಹೋಗುತಿದ್ದ. ಅದು ಅಲ್ಲಿನ ದಟ್ಟ
ಕತ್ತಲೆಯೊಂದಿಗೆ ಕ್ಷೀಣವಾಗಿ ಹೋರಾಡುತ್ತಿತ್ತು.
ನನ್ನ ತಾಯಿ ಸತ್ತಿಗೇರಿಯಲ್ಲಿ
ದೊಡ್ಡ ವಿಸ್ತಾರದ ಹಲವು ಜಮೀನುಗಳನ್ನು ಹೊಂದಿದ್ದ ಬಸವಂತಪ್ಪ ಮರಡಿ ಹಾಗೂ ಬಸವ್ವ ಎಂಬ
ದಂಪತಿಗಳ ಚೊಚ್ಚಲ ಮಗಳಾಗಿ ೧೯೨೦ ರಲ್ಲಿ ಜನಿಸಿದವಳು.ನನ್ನ ತಂದೆ ಮದುವೆಗಾಗಿ ಹೆಣ್ಣು
ಅಂತ ನೋಡಿದ್ದು ಅವಳೊಬ್ಬಳನ್ನೇ. ಮದುವೆಯಾಗುವದಾದರೆ ಅವಳನ್ನೇ ಆಗುತ್ತೇನೆಂದು
ಹಿರಿಯರಿಗೆ ಹೇಳಿ ಅವಳನ್ನೇ ಆದವರು. ಅವಳೂ ಪರಿಸ್ಥಿತಿಗೆ ಹೊಂದಿಕೊಂಡು ಬಾಳಿದಳು. ನನ್ನ
ತಂದೆಯ ಆದರ್ಶಗಳನ್ನು ಗೌರವಿಸಿದಳು. ಒಮ್ಮೊಮ್ಮೆ ನನ್ನ ತಂದೆಯ ಜೊತೆಗೆ ಅವಳಿಗೆ
ಕೆಲಸಕ್ಕೆ ಬಾರದ ತಕರಾರುಗಳಿರುತ್ತಿದ್ದವು. ಅವುಗಳಲ್ಲೊಂದೆಂದರೆ ನಮ್ಮ ತಂದೆಗೆ
ಯಾವುದಾದರೂ ಕ್ಯಾಲೆಂಡರ್ ಚಿತ್ರ ಇಷ್ಟವಾದರೆ ಅದಕ್ಕೆ ಫ್ರೇಮ್ ಹಾಕಿಸಿಕೊಂಡು ಬಂದು
ಗೋಡೆಗೆ ತೂಗುಹಾಕುವ ಅಭ್ಯಾಸ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ನೆಹರೂ
,ರಾಧಾಕೃಷ್ಣನ್, ದೇವದೇವತೆಗಳು, ಸಿನಿಮಾ ನಟಿ ಜಮುನಾ..., ಯಾವುದಾದರೂ ಆದೀತು. Gaudy
ವರ್ಣಗಳ ಆ ಫೋಟೋಗಳು ಎರಡು ಮೂರು ಸಾಲುಗಳಲ್ಲಿ ಪಡಸಾಲೆ-ನಡುಮನೆಯ
ಗೋಡೆಗಳೆಲ್ಲವನ್ನಲಂಕರಿಸಿದ್ದವು. ಅವುಗಳ ಹಿಂದೆ ತಿಗಣೆಗಳು ಸಂಸಾರ ಹೂಡಿರುತ್ತಿದ್ದವು.
ಅವುಗಳಿಗೆ ನಮ್ಮ ತಂದೆ ಹಣ ವ್ಯಯಿಸುವದು ನಮ್ಮವ್ವನಿಗೆ ಇಷ್ಟವಾಗುತ್ತಿರಲಿಲ್ಲ. ನನ್ನ
ತಂದೆಗೆ ಅರವತ್ತು ವರ್ಷಗಳಾದ ಮೇಲೆ ನಶ್ಯ ಏರಿಸುವ ಚಟ ಅಂಟಿಕೊಂಡಿತು. ಅದೂ ತಕರಾರಿನ
ವಿಷಯವಾಗಿತ್ತು. ಅವಳ ಟೀಕೆಗಳಿಗೆ ಬೇಸತ್ತು ಒಮ್ಮೆ ಪಂಢರಪುರಕ್ಕೆ ಹೋದಾಗ ಆ ಚಟವನ್ನು
ಶಾಶ್ವತವಾಗಿ ತ್ಯಜಿಸಿ ಬಂದ ನಮ್ಮ ತಂದೆ ಅ ಮೇಲೆ ಕೆಲ ವರ್ಷ ಬಿಟ್ಟು (ಮನೆಯಲ್ಲಿನವರಿಗೆ
ಗೊತ್ತಾಗದಂತೆ)ಬೀಡಿ ಸೇದತೊಡಗಿದರು. ನಂತರ ಸಿಗರೇಟಿಗೆ ಬಡ್ತಿ ಹೊಂದಿದರು. ಆಮೇಲೆ ನಮಗೆ
ಗೊತ್ತಾದಂತೆ ಅದು "ಸಿಗರೇಟ್ ಅಥವಾ ಬೀಡಿ ಸೇದ್ರೀ ಶೆಟ್ರ ಎದ್ಯಾಗಿನ ಕಫಾ ಕರಗತೈತಿ"
ಎಂದು ಅವರ ಸಹೋದ್ಯೋಗಿಯೊಬ್ಬ ಕೊಟ್ಟ ಉಪದೇಶಾಮೃತದ ಫಲವಾಗಿ ಅಂಟಿಕೊಂಡ ಚಟವಾಗಿತ್ತು.
ಅದನ್ನು ನಮ್ಮ ತಂದೆ ಹೆಚ್ಚೂ ಕಡಿಮೆ ಬದುಕಿನ ಕೊನೆಯ ವರ್ಷಗಳ ವರೆಗೆ ಜಾರಿಯಲ್ಲಿಟ್ಟರು.
ನಮ್ಮವ್ವ ಭರ್ತ್ಸನೆಯ ಮೂಡ್ ನಲ್ಲಿದ್ದಾಗ ಬಳಸಿಕೊಳ್ಳುತ್ತಿದ್ದ ವಿಷಯಗಳಲ್ಲಿ ಅದಕ್ಕೆ
ಪ್ರಮುಖ ಸ್ಥಾನವಿತ್ತು.
ನನ್ನವ್ವನಿಗೆ ಮಧ್ಯವಯಸ್ಸಿನಿಂದಲೇ ರಕ್ತದೊತ್ತಡವಿತ್ತು.
ಕೆಲ ವರ್ಷಗಳ ನಂತರ ಒಂದು ಪ್ರವೃತ್ತಿ ಶುರುವಾಯಿತು. ಮುಂಜಾನೆ ಹಾಸಿಗೆಯಿಂದೇಳುತ್ತಲೇ
ಅದೇನು ಪಿತ್ತೋದ್ರೇಕವೋ ಯಾರಾದರೊಬ್ಬರನ್ನು ಟಾರ್ಗೆಟ್ ಮಾಡುತ್ತಿದ್ದಳು. ಹಾಗೆ
ಟಾರ್ಗೆಟ್ ಆದವರ ತಪ್ಪು ಗುರುತರವಾದದ್ದಾಗಿರಬೇಕೆಂಬ ನಿಯಮವೇನೂ ಅವಳಿಗೆ ಇರಲಿಲ್ಲ.
ನನ್ನಕ್ಕಂದಿರ ಪೈಕಿ ಒಬ್ಬಳು ಒಂದು ಕಪ್ ಒಡೆದದ್ದಾಗಿರಬಹುದು, ನಾನು ಕೈ ತೊಳೆಯದೆ ಒಂದು
ಪಾತ್ರೆ ಮುಟ್ಟಿದ್ದಾಗಿರಬಹುದು, ನನ್ನವ್ವ ಪರಿಪರಿಯಾಗಿ ಟೀಕೆ-ದೂಷಣೆಗೆ
ತೊಡಗುತ್ತಿದ್ದಳು. ನನ್ನ ತಂದೆ ಅಪಾರ ತಾಳ್ಮೆಯ ಮನುಷ್ಯ. "ಇರ್ಲಿ ಬಿಡ
ಇನ್", "ಛೇ ಸುಮ್ ಆಗಿನ್ನs", "ಮುಗಿಸಿ ಬಿಡ ಇನ್ನs" ಹೀಗೆ ಅವನು ನಲ್ವತ್ತು-ಐವತ್ತು
ಸಲ ಹೇಳುತ್ತಿದ್ದನೆಂದರೆ ನನ್ನವ್ವ ಎಂಥ ಕೆಲಸಕ್ಕೆ ಬಾರದ ವಿಷಯಗಳಿಗೆ ಎಷ್ಟು ಹೊತ್ತು
ಟೆನ್ಸ್ ಆಗಿರುತಿದ್ದಳೆಂಬ ಅಂದಾಜು ಸಿಕ್ಕೀತು. ಅಂಥ ಅದ್ಭುತ ತಾಳ್ಮೆಯ ನನ್ನ ತಂದೆಯೂ
ಅಪರೂಪಕ್ಕೊಮ್ಮೆ ಸಹನೆ ಕಳೆದುಕೊಂಡು ಅಂತಿಮ ಅಸ್ತ್ರವಾಗಿ ಕೆಳಗೆ ಕುಳಿತಿದ್ದ
ಅವಳಿಗೆದುರಾಗಿ ನಿಂತು ಎಡಗೈಯಿಂದ ಅವಳ ಹಿಂದಲೆ ಹಿಡಿದು ಮುಂಬಾಗಿಸಿ ಬಲಗೈ ಮುಷ್ಟಿ ಮಾಡಿ
ವ್ಯವಸ್ಥಿತವಾಗಿ ಬೆನ್ನಿಗೆ ನಾಲ್ಕಾರು ಗುದ್ದು ಕೊಡುತ್ತಿದ್ದ. "ಅಯ್ಯಯ್ಯವ್ವಾ
ಕೊಲ್ತಾನs ನನ್ನs" ಎಂದು ಅವಳನ್ನುತ್ತಿದ್ದರೆ ನಾವು ಏನೂ ಹೇಳುತ್ತಿರಲಿಲ್ಲ. ಬಿಡಿಸಲೂ
ಹೋಗುತ್ತಿರಲಿಲ್ಲ. ನಾಲ್ಕು ಗುದ್ದು ಕೊಟ್ಟು ಅವನೂ ಸುಮ್ಮನಾಗುತ್ತಿದ್ದ.
ಗುದ್ದಿಸಿಕೊಂಡು ಅವಳೂ ಸುಮ್ಮನಾಗುತಿದ್ದಳು. ಇದು ಆ ಪ್ರಸಂಗಗಳ ಒಟ್ಟು ಸಾರವೆಂಬುದು
ನಮಗೆ ಪರಿಚಿತವೇ ಇರುತ್ತಿತ್ತು. ಮೂರೋ ನಾಲ್ಕೋ ವರ್ಷಗಳಲ್ಲೊಮ್ಮೆ ಈ ದೃಶ್ಯ ನಮಗೆ
ನೋಡಸಿಗುತ್ತಿತ್ತು. ಮುದ್ದಣ ಮನೋರಮೆಯರ ಮಾದರಿಯ ಅವರ ಸಲ್ಲಾಪ ಆಗಾಗ ನೋಡಸಿಗುತ್ತಿತ್ತು.
ನನ್ನ
ತಂದೆಯ ಶಿಕ್ಷಣದ ಬಗ್ಗೆ ಹೇಳಿರುವೆ. ನನ್ನವ್ವ ಮೂರನೇ ಇಯತ್ತೆ ವರೆಗೆ ಕಲಿತಿದ್ದೇನೆ
ಎಂದು ಹೇಳಿಕೊಳ್ಳುತ್ತಿದ್ದಳು. ಅದನ್ನು ಸಾಬೀತು ಮಾಡಲು ಸಂಯುಕ್ತ ಕರ್ನಾಟಕ ಪತ್ರಿಕೆಯ
ಶೀರ್ಷಿಕೆಯ ದೊಡ್ಡಕ್ಷರಗಳನ್ನು ಕಷ್ಟಪಟ್ಟು ಓದಿ, ಇಲ್ಲವೆ ಸೊಟ್ಟಕ್ಷರಗಳಲ್ಲಿ ಈರವ್ವ
ಎಂದು ಬರೆದು ತೋರಿಸುತ್ತಿದ್ದಳು, ಎಲ್ಲ ಸಮಸ್ಯೆಗಳ ನಡುವೆಯೂ ಎಲ್ಲ ಮಕ್ಕಳಿಗೂ ಪ್ರಾಥಮಿಕ
ಶಿಕ್ಷಣದ ವ್ಯವಸ್ಥೆಯನ್ನು ನನ್ನ ತಂದೆ ಮಾಡಿದ್ದರು. ನನ್ನಣ್ಣ ಬೈಲಹೊಂಗಲದಲ್ಲಿ
ಹೈಸ್ಕೂಲ್ ಮುಗಿಸಿ ಅಲ್ಲಿ ಆಗ ಕಾಲೇಜು ಇರಲಿಲ್ಲವಾದ್ದರಿಂದ ೬೦ ರ ದಶಕದ ಮಧ್ಯದ
ಸುಮಾರಿಗೆ ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಹೋದ. ಅಲ್ಲಿ ಒಂದು ಕೋಣೆಯನ್ನು ಬಾಡಿಗೆ
ಪಡೆದು ಇದ್ದ. ನನ್ನವ್ವ-ಅಕ್ಕ ಬೆಳಗ್ಗೆ ಎದ್ದು ಅಡಿಗೆ ಮಾಡುತ್ತಿದ್ದರು. ಮುಂಜಾನೆ
ಬೆಳಗಾವಿಗೆ ಹೋಗುವ ಬಸ್ಸಿನಲ್ಲಿ ಅವನಿಗೆ ಊಟದ ಡಬ್ಬಿ ಇಟ್ಟು ಕಳಿಸುತ್ತಿದ್ದೆವು. ನನ್ನ
ತಂದೆ, ನಾನು ಅಥವ ನನ್ನ ಅಕ್ಕಂದಿರು ಹಾಗೆ ಡಬ್ಬಿ ಕೊಟ್ಟು ಬರುವದು ರಾತ್ರಿ
ಬೈಲಹೊಂಗಲಕ್ಕೆ ಬರುವ ಬಸ್ಸಿನಲ್ಲಿ ನನ್ನಣ್ಣ ಇಟ್ಟು ಕಳಿಸಿದ ಖಾಲಿ ಡಬ್ಬಿಯನ್ನು ಬಸ್
ಸ್ಟ್ಯಾಂಡಿಗೆ ಹೋಗಿ ತೆಗೆದುಕೊಂಡು ಬರುವದು ದೈನಂದಿನ ಚಟುವಟಿಕೆಯಾಯಿತು. ಅವನ ರೂಂ
ಬಾಡಿಗೆ,ಫೀ,ಪುಸ್ತಕ,ಬಟ್ಟೆ-ಬರೆ ಹೀಗೆ ಹೆಚ್ಚುವರಿ ಖರ್ಚಿನ ಬಾಬತ್ತುಗಳಿರುತ್ತಿದ್ದವು.
ಸಂಪಾದನೆಯ ಅನ್ಯ ಮಾರ್ಗ ಅಗತ್ಯವಿತ್ತು. ನಾವು ಮನೆಯ ಭಾಗವನ್ನೇ ಕೊಂಚ ಪರಿವರ್ತಿಸಿ ಒಂದು
ಸಣ್ಣ ಕಿರಾಣಿ ಅಂಗಡಿ ಸುರು ಮಾಡಿದೆವು. ಉದ್ರಿ ಗಿರಾಕಿಗಳೇ ಜಾಸ್ತಿ. ದೀರ್ಘ ಕಾಲದ
ವರೆಗೆ ಹಣ ಕೊಡದೇ ತಪ್ಪಿಸುತ್ತಿದ್ದ ಆ ಉದ್ರಿ ಮಂದಿ ಅಕಸ್ಮಾತ್ ದಾಟಿ ಹೋಗುವದು ಕಂಡರೆ
ನನ್ನಕ್ಕ ಅವರನ್ನು ತಡೆದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಅವರು- ಸಾಮಾನ್ಯವಾಗಿ
ಒಡ್ಡರು,ಝಾಡಮಾಲಿ-ಭಂಗಿಗಳು,ರೈತಾಪಿಗಳು- ತಮ್ಮ ಅಡಚಣಿ, ಅನಾನುಕೂಲಗಳನ್ನು ಪರಿಪರಿಯಾಗಿ
ಹೇಳಿಕೊಳ್ಳುತ್ತಿದ್ದರು. ನನ್ನ ಅವ್ವ ತುಂಬ ಕರುಣಾಮಯಿ. ಬಡಬಗ್ಗರ ಕುರಿತು ಅವಳಿಗೆ ತುಂಬ
ಪ್ರಾಮಾಣಿಕವಾದ ಒಂದು ಅಂತ:ಕರಣವಿತ್ತು. ಆ ಮಂದಿ ಉದ್ರಿ ಹಣ ಕೊಡುವದು ದೂರ ಉಳಿಯಿತು,
ನಮ್ಮವ್ವನೇ ಅವರಿಗೆ ತಿನ್ನಲು-ಉಣ್ಣಲು ಕೊಟ್ಟು ಮತ್ತೊಂದಿಷ್ಟು ಅವರ ಕೂಸು ಕುನ್ನಿಗಳಿಗೂ
ಕೊಟ್ಟು ಕಳಿಸುತ್ತಿದ್ದಳು. ಅಂಗಡಿಯ ವ್ಯಾಪಾರ ಊರ್ಜಿತವಾಲಿಲ್ಲವೆಂದು ಬೇರೆ
ಹೇಳಬೇಕಿಲ್ಲ. ಆದರೆ ವ್ಯಾಪಾರಕ್ಕಿಂತ ಅತ್ತೆಗೆ ಗೊತ್ತಾಗದಂತೆ ಸೊಸೆಯಂದಿರು,
ರೈತಾಪಿಗಳು, ಚಿಕ್ಕ ಪುಟ್ಟ ತುಡುಗರು ಸೋವಿ ದರಕ್ಕೆ ನಮಗೆ ಮಾರುತಿದ್ದ ಕಾಳುಕಡ್ಡಿಗಳು
ನಮ್ಮ ಕುಟುಂಬದ ಆಹಾರ ನಿರ್ವಹಣೆಯ ಭಾರವನ್ನು ಕೊಂಚ ತಗ್ಗಿಸುತ್ತಿದ್ದವು.
ಶೇಂಗಾ
ಸುಗ್ಗಿಯಲ್ಲಿ ನಮ್ಮ ಮನೆಯ ಚಿತ್ರವೇ ಬದಲಾಗುತಿತ್ತು. ಬೆಳೆದು ನಿಂತ ಶೇಂಗಾಬಳ್ಳಿ
ಕಿತ್ತು ಕಾಯಿ ಹರಿದು ಕೂಲಿಗಳು ಒಟ್ಟು ಹಾಕಿದ ಕಾಯಿಗಳನ್ನು ಹೊಲದೊಡೆಯ ಒಂದು ನಿಶ್ಚಿತ
ಸಂಖ್ಯೆಯ ಸಮಪ್ರಮಾಣದ ಗುಂಪುಗಳಾಗಿ ವಿಂಗಡಿಸಿ ಅದರಲ್ಲೊಂದು ಗುಂಪನ್ನು ಆ ಕೂಲಿಗಳಿಗೆ
ಅವರ ಕೆಲಸದ ಪ್ರತಿಫಲವಾಗಿ ಕೊಡುತ್ತಿದ್ದರು. ಅವುಗಳನ್ನು ಆ ಕೃಷಿಕೂಲಿಗಳು-ಸಾಮಾನ್ಯವಾಗಿ
ಒಡ್ಡರು- ತಂದು ನಮಗೆ ಮಾರುತ್ತಿದ್ದರು.ದೊಡ್ಡ ಪ್ರಮಾಣದ ಸಂಗ್ರಹವಿದ್ದರೆ ಒಡ್ಡರ
ಓಣಿಗೇ ಹೋಗಿ ಅವ್ವ-ಅಕ್ಕ ಚೀಲಗಳನ್ನು ಹೊತ್ತು ರೊಜ್ಜು ರಾಡಿ ದಾಟಿಕೊಂಡು ಮನೆಗೆ
ತರುತ್ತಿದ್ದರು. ಆ ಕೃಷಿಕೂಲಿಗಳಿಗೆ
ಕೊಡಬೇಕಾದ ಮೊತ್ತವನ್ನು ೩ ಅಥವಾ ೪ ಸೇರಿಗೊಂದು ರೂಪಾಯಿಯ ಲೆಕ್ಕದಲ್ಲಿ ಗುಣಿಸಿ ನನ್ನ
ತಂದೆ ಬರೆಯುವದು, ಕಮೀಶನ್ ಏಜಂಟರಿಂದ ಮುಂಗಡವಾಗಿ ತಂದ ೧, ೨, ೫ ರ ಗರಿಗರಿ ನೋಟುಗಳನ್ನು
ಎಣಿಸಿ ನಾನು ಆ ಕೂಲಿಗಳಿಗೆ ವಿತರಿಸುವದು, ಇದು ಪ್ರತಿವರ್ಷ ಕೆಲವು ತಿಂಗಳು ನಮ್ಮ ಮನೆಯ
ಮುಖ್ಯ ಚಟುವಟಿಕೆಯಾಯಿತು. ಹಾಗೆ ಸಂಗ್ರಹವಾದ ಮಣ್ಣುಮೆತ್ತಿದ ಶೇಂಗಾಕಾಯಿಗಳು ನಮ್ಮ
ಮನೆಯಲ್ಲಿ ಸ್ಥಳಾವಕಾಶ ಕೊರತೆಯಾಗುವಂತೆ ಎಲ್ಲೆಂದರಲ್ಲಿ ರಾಶಿ ಬೀಳುತ್ತಿದ್ದವು,
ನಮ್ಮನ್ನೆಲ್ಲ ಕರೆದುಕೊಂಡು ನಮ್ಮ ತಾಯಿ ಪ್ರತಿನಿತ್ಯ ಅವುಗಳನ್ನು ಮನೆಯೆದುರು ಹರಡಿ,
ಬಿಸಿಲಿಗೆ ಒಣಗಿಸಿ, ಮಣ್ಣು ಬಡಿದು, ತೂರಿ ಖರೀದಿಗಾರರಿಂದ ಒಳ್ಳೆಯ ರೇಟು ಪಡೆಯಲು ಅವು
ಅರ್ಹವಾಗುವಂತೆ ಚೆಂದಗೊಳಿಸುತ್ತಿದ್ದಳು. ಸಂಗ್ರಹವಾದ ಕಾಯಿಗಳನ್ನು ಪ್ರತಿನಿತ್ಯ ನಾಲ್ಕೋ
ಆರೋ ಗೋಣಿಚೀಲಗಳಲ್ಲಿ ತುಂಬಿ ಬಾಯಿ ಹೊಲಿದು ನಮ್ಮಕ್ಕ ಅವುಗಳ ಮೇಲೆ ಬಣ್ಣದ ಇಂಕಿನಿಂದ
ನಮ್ಮ ಹೆಸರು ಬರೆದಾದ ಮೇಲೆ ರೈತನೊಬ್ಬನ ಚಕ್ಕಡಿಗೆ ಹೇರಿ ಕೃಷಿ ಹುಟ್ಟುವಳಿ ಮಾರುಕಟ್ಟೆಯ
ದಲ್ಲಾಳಿಗಳ ಮಳಿಗೆಗಳಿಗೆ ನಾನು ಕೊಂಡೊಯ್ಯುತ್ತಿದ್ದೆ. ಹೀಗೆ ಹೈಸ್ಕೂಲು ಕಾಲೇಜು
ಓದುತ್ತಲೇ ನಮ್ಮ ಮನೆಯ ಅರ್ಥವ್ಯವಸ್ಥೆಯ ನಿರ್ವಹಣೆಯ ಕೆಲವು ಪಾತ್ರಗಳನ್ನು ನಾನು
ಹೊತ್ತೆ. ಅದು ಅನಿವಾರ್ಯವೂ ಆಗಿತ್ತು. ಅದರಲ್ಲಿ ದೊಡ್ಡ ಪಾತ್ರ ನನ್ನ ಅವ್ವ ಮತ್ತು
ಹಿರಿಯಕ್ಕನದು. ಮದುವೆಯಾದ ಹೊಸದರಲ್ಲೇ ವಿಧವೆಯಾಗಿ ಮರುಮದುವೆಯಾಗಲು ನಿರಾಕರಿಸಿ
ಮನೆಯಲ್ಲಿಯೇ ಉಳಿದ ನಮ್ಮ ಗೌರಕ್ಕ ಗಂಡುಮಗನಂತೆ ದುಡಿದಳು. ಮನೆಯ ಪ್ರತಿಯೊಂದು ವ್ಯಾಪಾರ
ವ್ಯವಹಾರ, ಖರ್ಚು-ವೆಚ್ಚ, ಸಂಬಂಧಿಕರೊಂದಿಗಿನ ಸಂಬಂಧದ ಸ್ವರೂಪ ಹೀಗೆ ಒಟ್ಟಾರೆ ಕುಟುಂಬದ
ನೀತಿನಿರ್ಧಾರಕರು ನನ್ನ ಅವ್ವ ಅಕ್ಕ ಇವರೇ ಆಗಿದ್ದರು.
ಇದೆಲ್ಲದರ ನಡುವೆ ನಮ್ಮ
ತಂದೆ ಮಿಲ್ ನ ಲೆಕ್ಕ ಪತ್ರ ಬರೆಯುವ ತಮ್ಮ ಕೆಲಸ ನೋಡಿಕೊಂಡು ಹೋಗುತ್ತಿದ್ದರು. ಈ ಮಧ್ಯೆ
ಅವರ ವೇತನ ತಿಂಗಳಿಗೆ ೨೫೦ ರೂಪಾಯಿ ಆಗಿತ್ತು. ಅವರದು ನಿಯಮಿತವಾದ ದಿನಚರಿ. ಮುಂಜಾನೆ
ಸ್ನಾನ ತಿಂಡಿ ಮುಗಿಸಿ ೯ ಗಂಟೆಗೆ ಮಿಲ್ ಗೆ ಹೋಗುವದು, ಮಧ್ಯಾಹ್ನ ಬಂದು ಊಟ ಮಾಡಿ
ಸ್ವಲ್ಪ ವಿಶ್ರಮಿಸಿ ಮಿಲ್ ಗೆ ಹೋಗಿ ರಾತ್ರಿ ೮ ಗಂಟೆಗೆ ಮನೆಗೆ ಬರುವದು. ಹಿತಮಿತವಾದ
ಊಟ. ನನ್ನ ತಾಯಿ ಮಹಾ ದೈವಭೀರು. ನನ್ನ ತಂದೆ ಆಸ್ತಿಕರೇ ಆಗಿದ್ದರೂ ಪೂಜೆ-ಪುನಸ್ಕಾರ
ಎಂದು ಸಮಯ ವ್ಯಯಿಸಿದ್ದು ನಾನು ನೋಡಿಲ್ಲ. ಅಮಾವಾಸ್ಯೆ- ಹಬ್ಬದಂಥ ಸಂದರ್ಭಗಳಲ್ಲಿ ತಾವೇ
ಪೂಜೆ ಮಾಡುತ್ತಿದ್ದರಾದರೂ ತಾಸುಗಟ್ಟಲೆ ಪೂಜೆ ಮಾಡುತ್ತ ಕುಳಿತಿರುವದು ಅವರ
ದೃಷ್ಟಿಯಲ್ಲಿ ಅವ್ಯಾವಹಾರಿಕವಾಗಿತ್ತು. ಉಲ್ಲಅಸಿತರಾಗಿದ್ದಾಗ "ಪರಮಪ್ರಭುವೇ ನಿಮ್ಮ
ಸ್ಮರಣೆಯೊಳೆನ್ನ ಮನ ಸ್ಥಿರವಾಗಿ ನಿಂತು ಧ್ಯಾನಿಸುತಿರಲಿ, ಕರಿಗೆ ಕೇಸರಿ ವೈರಿಯೆಂತೆನ್ನ
ದುರಿತಕ್ಕೆ ಹರ ನಿಮ್ಮ ನಾಮವು ಹಗೆಯಾಗಲಿ" ಎಂಬ ಪದ್ಯವನ್ನು ಹಾಡಿಕೊಳುತ್ತಿದ್ದರು.
ನಿಜಗುಣ ಶಿವಯೋಗಿಗಳ "ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ" ಎಂಬುದು ಅವರ
ಇಷ್ಟದ ಇನ್ನೊಂದು ಗೀತೆಯಾಗಿತ್ತು.
ಏನೇ ತೊಂದರೆ ತಾಪತ್ರಯಗಳಿದ್ದರೂ ಕುಟುಂಬದ
ಅಸ್ತಿತ್ವಕ್ಕೊಂದು ನೆಮ್ಮದಿ ಇದ್ದೇ ಇತ್ತು. ಅಪ್ಪನಿಗೆ ಕುಟುಂಬದ ಬಗ್ಗೆಯೂ ಗಮನ
ಇರುತ್ತಿತ್ತು. ಆಯಾಯ ಸೀಜನ್ನಿನಲ್ಲಿ ಬರುವ ಹಣ್ಣುಗಳನ್ನು ಧೋತರದ ಉಡಿಯಲ್ಲಿ
ಇಟ್ಟುಕೊಂಡು ತರುತ್ತಿದ್ದರು. ಕಾರ್ಯನಿಮಿತ್ತ ಹೊರ ಊರುಗಳಿಗೆ ಹೋದಾಗ ಕುಂದಾ, ಗೋಕಾಕ
ಕರದಂಟು ಇತ್ಯಾದಿ ತರುತ್ತಿದ್ದರು. ಅಪ್ರಾಮಾಣಿಕತೆ ಎಂಬುದು ಅವರ ಚಿಂತನೆಯಲ್ಲೇ
ಇರಲಿಲ್ಲ. ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಓದುವದು, ನಿಯಮಿತವಾಗಿ ಅಣ್ಣನಿಗೆ,
ಅಕ್ಕಂದಿರಿಗೆ, ಅಳಿಯಂದಿರಿಗೆ ಪತ್ರಗಳನ್ನು ಬರೆಯುವದು, ಉದ್ದನೆಯ ಕೋಲಿಗೆ ಕಟ್ಟಿದ
ಪೊರಕೆಯಿಂದ ಮನೆಯ ಮೂಲೆ ಮೂಲೆಯ ಜೇಡನ ಬಲೆಗಳನ್ನು ನಾಶಗೊಳಿಸುವದು, ಬಲೆಯಲಿ ಬಿದ್ದ
ಇಲಿಗಳನ್ನು ದೂರ ಬಿಟ್ಟುಬರಲು ಕೊಂಡೊಯ್ಯುವದು, ಮಂಚದ ಕಬ್ಬಿಣದ ಕಾಲು, ಕಟ್ಟಿಗೆಯ
ಹಲಗೆಗಳನ್ನು ಬಿಸಿಲಿಗೆ ಇಟ್ಟು ತಿಗಣೆ -ಚಿಕ್ಕಾಡುಗಳನ್ನು ನಿವಾರಿಸುವದು, ಏನೂ
ಕೆಲಸವಿಲ್ಲವೆಂದರೆ ಕೊನೆಗೆ ನಾಲ್ಕು ಗೋಣಿಚೀಲಗಳ ಹೊಲಿಗೆಯನ್ನು ಬಿಚ್ಚಿ ಅವುಗಳ
ಅಂಚುಗಳನ್ನು ಸೇರಿಸಿ ಡಬ್ಬಣ ಹುರಿ ತೆಗೆದುಕೊಂಡು ಮತ್ತೆ ಹೊಲಿದು ಹಾಸಿಕೊಳ್ಳಲು
ತಟ್ಟುಗಳನ್ನು ತಯಾರಿಸುವದು..., ಒಟ್ಟಿನಲ್ಲಿ ಸದಾ ಏನಾದರೂ ಮಾಡುತ್ತಿದ್ದರು. ರಾತ್ರಿ
ಊಟವಾದ ಮೇಲೆ ಮಕ್ಕಳೊಂದಿಗೆ ಕವಡೆ ಆಟ ಹೂಡುತ್ತಿದ್ದರು. ಮನೆಗೆ ದಿನಪತ್ರಿಕೆ
ತರುತಿದ್ದರು. ಅವುಗಳಲ್ಲಿ ಬರುವ ಧಾರಾವಾಹಿಗಳನ್ನು ಗೌರಕ್ಕ ಗಟ್ಟಿಯಾಗಿ ಓದುತ್ತಿದ್ದಳು,
ನಮ್ಮ ತಂದೆ ತಾಯಿ ನಾವು ಮಕ್ಕಳೆಲ್ಲ ಅಲ್ಲದೇ ಶ್ರೋತೃಗಣದಲ್ಲಿ ನೆರೆಹೊರೆಯವರೂ
ಸೇರುತ್ತಿದ್ದರು. ನಮ್ಮವ್ವ ನಮ್ಮ ಬೇಡಿಕೆಗೆ ಸ್ಪಂದಿಸಿ ಒಂದು ರೇಡಿಯೊ ತರಿಸಿದ ಮೇಲೆ
ಮನೆಯಲಿ ವಿವಿಧ ಭಾರತಿ, ಸಿಲೋನ್ ಕಾರ್ಯಕ್ರಮಗಳ ಧ್ವನಿ ಮೊಳಗತೊಡಗಿದವು. ನಮ್ಮ ಗೌರಕ್ಕ
ಮತ್ತು ನೆರೆಮನೆಯಲ್ಲಿದ್ದ ನಮ್ಮ ಚಿಕ್ಕಮ್ಮ ಗಂಗಕ್ಕ ಅಂಗಡಿಗೆ ವ್ಯಾಪಾರಕ್ಕೆ
ಬರುತ್ತಿದ್ದ, ಬೀದಿಯಲ್ಲಿ ಹೋಗುವಾಗ ಸ್ವಲ್ಪ ನಿಂತು ಲೋಕಾಭಿರಾಮದ ನಾಲ್ಕು
ಮಾತಾಡಿಹೋಗುತ್ತಿದ್ದ , ಓಣಿಯಲ್ಲಿ ಕೂಲಿ- ನಾಲಿ ಮಾಡುತ್ತಿದ್ದ ಜನರ ಥರಾವರಿ ಭಾಷೆ,
ಉಚ್ಛಾರ,ಆಂಗಿಕ ಚಲನೆಗಳಲ್ಲಿನ ವಿಶಿಷ್ಟ ಲಕ್ಷಣಗಳನ್ನು ಥೇಟ್ ಹಾಗೆಹಾಗೇ
ಪುನರುತ್ಪಾದಿಸುವದನ್ನು ದಿನಾರ್ಧದಲ್ಲಿ ಸಾಧಿಸಿ ಮಿಮಿಕ್ರಿ ಮಾಡಿ ರಂಜಿಸಿದಾಗ ನಮ್ಮ
ಹೆತ್ತವರೂ ಆ ತಮಾಷೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಓಣಿಯಲ್ಲಿ
ಹಲವು ಥರದ ಜನರಿದ್ದರು. ಕಲಹಗಳಾಗುತ್ತಿದ್ದವು.ಕುಡುಕರು ಅಶ್ಲೀಲವಾಗಿ ಬಯ್ದುಕೊಳ್ಳುತ್ತ
ತೂರಾಡುತ್ತ ಹೋಗುತ್ತಿದ್ದರು.ನಮ್ಮ ಕುಟುಂಬದವರು ಯಾರ ಉಸಾಬರಿಗೂ ಹೋಗದೇ ತಮ್ಮ ಪಾಡಿಗೆ
ತಾವಿರುತ್ತಿದ್ದರು.ಅತ್ತೆಯರು,ಸೊಸೆಯಂದಿರು,ಕೂಲಿ ನಾಲಿ ಮಾಡುವವರು ಹೀಗೆ ಬೀದಿಯಲ್ಲಿ
ಸಾಗಿ ಹೋಗುವ ಹಲವರಿಗೆ ನಮ್ಮ ಮನೆ ಕಷ್ಟ ಸುಖ ಹೇಳಿಕೊಳ್ಳಲು ಸ್ವಲ್ಪ ಹೊತ್ತಿನ ನಿಲ್ದಾಣ.
ನಮ್ಮವ್ವನಿಂದ ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆಂದಲ್ಲ. ಒಟ್ಟಿನಲ್ಲಿ "ಶೆಟ್ರ್
ಈರವ್ವಕ್ಕ"ನ ಮುಂದೆ ಹೇಳಿಕೊಂಡರೆ, ಅವಳಿಂದ ಸಾಂತ್ವನದ ನಾಲ್ಕು ಮಾತು ಕೇಳಿದರೆ ಅವರಿಗೆ
ಸಮಾಧಾನ.
ನಮ್ಮವ್ವನಿಗೆ ನಾನೇ ಒಂದು
ಚಿಂತೆಯಾಗಿದ್ದೆ. ನಾನು ಏಳನೇ ಕ್ಲಾಸಿನಲ್ಲಿದ್ದಾಗ ನನಗೆ ಈಜು ಕಲಿಸಲು ನಿರ್ಧರಿಸಿ ನನ್ನ
ತಂದೆ ಜೋಳದ ಅರವತ್ತು ಒಣ ದಂಟುಗಳನ್ನು ಸಮಾನ ಉದ್ದಕ್ಕೆ ತುಂಡರಿಸಿ ಅವುಗಳದೊಂದು ಪೆಂಡೀ
ಮಾಡಿ ಹಗ್ಗ ಬಿಗಿದು ಮುಂಜಾನೆ ಈಜುವ ಬಾವಿಗೆ ಕರೆದೊಯ್ದು ಅದನ್ನು ನನ್ನ ಬೆನ್ನಿಗೆ
ಕಟ್ಟಿ, ಹಿಡಿದು ಈಜಾಡಿಸತೊಡಗಿದರು. ಆ ಆಮೆ ವೇಗದ ಕಲಿಕೆಯಲ್ಲಿ ನಾನು ಆಸಕ್ತಿ
ಕಳೆದುಕೊಂಡೆ. ಮುಂದೆ ನಾವು ಮೂವರು ಗೆಳೆಯರು ಮನೆಯವರಿಗೆ ಗೊತ್ತಾಗದಂತೆ ಬಾವಿಗೆ ಹೋಗಿ
ಮೂಲೆಯ ಸೀಮಿತ ವ್ಯಾಪ್ತಿಯಲ್ಲಿ-ಮುಳುಗುವ ಪ್ರಸಂಗ ಬಂದರೆ ಗಬಕ್ಕನೇ ಮೆಟ್ಟಿಲ ಕಲ್ಲು
ಹಿಡಿಯಲನುಕೂಲವಾಗುವಂತೆ- ಈಜು ಬೀಳುತ್ತ ನಾಲ್ಕೇ ದಿನದಲ್ಲಿ ಈಜು ಕಲಿತೆವು. ಹೈಯರ್
ಸೆಕಂಡರಿಯ ಮೂರು ವರ್ಷ ನಮ್ಮ ಈಜಿನ ಅವಧಿ ವಿಶೇಷವಾಗಿ ರಜೆಯ ದಿನಗಳಲ್ಲಿ ಸೂರ್ಯೋದಯದಿಂದ
ಸೂರ್ಯಾಸ್ತದ ವರೆಗೆ ಎಂಬಂತಾಯಿತು. ಹಾಗೆ ನೋಡಿದರೆ ನಾವು ನಮ್ಮದೇ ರಜಾ ದಿನಗಳನ್ನು
ಸೃಷ್ಟಿಸಿಕೊಳ್ಳತೊಡಗಿದ್ದೆವು. ಮನೆಯವರ ತಿಳಿವಳಿಕೆಯಲ್ಲಿ ನಾವು ಮ್ಯುನಿಸಿಪಲ್ ಜಾಕ್ಸನ್
ಹೈಸ್ಕೂಲಿನ ನಂನಮ್ಮ ಕ್ಲಾಸ್ ರೂಮ್ ಗಳಲ್ಲಿರುತ್ತಿದ್ದೆವು. ಆದರೆ ನಾವು ವಾಸ್ತವವಾಗಿ
ಬೆಲ್ಲದ್ ಅಥವಾ ಮೆಟಗುಡ್ ಅವರ ಕಬ್ಬಿನ ತೋಟಗಳ ಮಧ್ಯೆ ಇದ್ದ ಈಜುವ ಬಾವಿಗಳ ಜಲಚರಗಳಾಗಿ
ಹೋಗಿದ್ದೆವು. ಯಾವಾಗಲಾದರೂ ಬಾವಿಯಲ್ಲಿ ಯಾರೋ ಮುಳುಗಿ ಹೆಣ ತೇಲಿದ್ದು ನೋಡಿದಾಗ ಭಯದಿಂದ
ನಾಲ್ಕಾರು ದಿನ ಹೋಗುವದು ಬಿಡುತ್ತಿದ್ದೆವಷ್ಟೆ. ನನ್ನ ಅವ್ವನಿಗೆ ನಾನು ಗೊತ್ತು ಗುರಿ
ಇಲ್ಲದೆ ಬೆಳೆಯುತ್ತಿದ್ದಂತೆನ್ನಿಸಿರಬೇಕು. ಅದಕ್ಕಿಂತ ನನ್ನ ಕಿಡಿಗೇಡಿತನ
ಅತಿಯಾದುದಾಗಿತ್ತು. ನನ್ನ ಸಲುವಾಗಿ ಅವಳು ಹಲವು ಸಲ ಕಣ್ಣೀರಿಟ್ಟಳು. ನಾಲ್ಕಾರು ತಾಸು
ನಾನು ಮನೆಗೆ ಬಾರದೇ ಹೋದರೆ ಕಳವಳ ಪಟ್ಟು ಸುತ್ತಲಿನ ಓಣಿ ಬೀದಿಗಳಲ್ಲಿ ಅವರಿವರನ್ನು
ಕೇಳುತ್ತ ಹುಡುಕುತ್ತ ಹೋಗುತ್ತಿದ್ದಳು. ಅತಿಯಾದ ಕೋಪ ಬಂದಾಗ ಹೊಡೆಯುತ್ತಿದ್ದಳಾದರೂ
ಅದರಿಂದ ಅವಳಿಗೇ ನೋವಾಗುತ್ತಿತ್ತು ಅಥವಾ ಮೇಲೇರಿಸಿದ ಬಳೆ ಹೊಡೆಯುವ ಭರದಲ್ಲಿ
ಮುಂಗೈಗಿಳಿದು ಒಡೆದು ಅವಳ ಕೈ ರಕ್ತವೇ ಜಿನುಗುತ್ತಿತ್ತು. ನಾನು ನಗುತ್ತಿದ್ದೆ. ಅದು
ಅವಳಿಗೆ ಇನ್ನಷ್ಟು ಕಿರಿಕಿರಿಯಾಗುತ್ತಿತ್ತು. ಸೋತು ಕೈಚೆಲ್ಲಿ ಕೊನೆಗೆ ಅವಳು "ಈವೊತ್ತ್
ಅವರ ಮಿಲ್ಲಿನಿಂದ ಮನೀಗಿ ಬರ್ಲಿ ನಿಂದ್ರ್, ನಿಂದೆಲ್ಲಾ ಹೇಳ್ತೇನ. ಇಕೇನ್ ಹೇಳ್ತಾಳ್
ಬಿಡ ಅಂತ ತಿಳ್ಕೊಂಡೀಯೇನ್ ನೀ ಎಲ್ಲ್ಯೋ,ಇವೊತ್ತ್ ನಿಂದೆಲ್ಲಾ ಹೇಳದಿದ್ದರ ನಮ್ಮಪ್ಪನ
ಮಗಳs ಅಲ್ಲ ನಾ" ಎಂದೆಲ್ಲ ತಾನೇ ಆಣೆ-ಪ್ರಮಾಣ ಹಾಕಿಕೊಂಡು ತನ್ನ ನಿರ್ಧಾರದ ದೃಢತೆಯನ್ನು
ಬಿಂಬಿಸಿ ಹೆದರಿಸುತ್ತಿದ್ದಳು. ಹಾಗೆ ಅವಳು ನನ್ನ ತಂದೆಯ ಮುಂದೆ ಹೇಳಿದಾಗ ನನಗೆ ಉಗ್ರ
ಶಿಕ್ಷೆಯಾಗುತ್ತಿತ್ತೆಂದು ಯಾರೂ ಭಾವಿಸಬೇಕಿಲ್ಲ. ಅವಳು ಹೇಳುವದನ್ನೆಲ್ಲಾ ಕೇಳಿಯಾದ
ಮೇಲೆ ನಮ್ಮ ತಂದೆ "ಹಂಗೆಲ್ಲಾ ಮಾಡಬಾರದೋ,ಶಾಣ್ಯಾ ಆಗಬೇಕಪಾ" ಎನ್ನುತ್ತಿದ್ದರು ಅಷ್ಟೇ.
ಅವರು ಮಕ್ಕಳನ್ನು ಹೊಡೆದದ್ದಾಗಲಿ "ಎಲಾ ಲಫಂಗಾ" ಎಂಬುದಕ್ಕಿಂತ ಉಗ್ರವಾಗಿ ಬೈದದ್ದಾಗಲಿ
ನನಗೆ ಗೊತ್ತೇ ಇಲ್ಲ.
ಎಸ್ಸೆಸ್ಸೆಲ್ಸಿಯಲ್ಲಿ ನಾನು ಫೇಲಾದೆ. ಗಣಿತದಲ್ಲಿ
ಫೇಲಾಗುವೆನೆಂದುಕೊಂಡಿದ್ದೆ. ಆದರೆ ಸೈನ್ಸ್ ನಲ್ಲಿ ಫೇಲಾಗಿದ್ದೆ. ಹೀಗಾಗಿ ಸಮಾಧಾನವೇ
ಆಗಿತ್ತು. ಮುಂದೆ ಅಕ್ಟೋಬರ್ ಪೂರಕ ಪರೀಕ್ಷೆಯ ಫಲಿತಾಂಶ ಹೊರಬರಲಿದ್ದ ದಿನ ಅಪ್ಪ
ಹೇಳಿದರು: "ಪಾಸಾಗಲಿ ನಪಾಸಾಗಲಿ, ರಿಸಲ್ಟ್ ನೋಡಿಕೊಂಡ ಸೀದಾ ಮನಿಗೇ ಬಾ". ಆ ಮೇಲೆ ನನ್ನ
ಪ್ರಥಮ ಪಿಯುಸಿ ಫಲಿತಾಂಶ ಸೆಕೆಂಡ್ ಕ್ಲಾಸ್ ಆಗಿತ್ತು. ಹಾಗಂತ ನಮ್ಮ ತಂದೆಗೆ ಹೇಳಿದಾಗ
"ಒಟ್ ಪಾಸಾತಿಲ್ಲೋ" ಎಂದಿದ್ದರವರು! ನಮ್ಮ ತಾಯಿಗೂ ಮಗ "ಹಾದಿಗೆ ಹತ್ತಿದನಲ್ಲ" ಎಂದು
ಸಮಾಧಾನವಾಗಿತ್ತು. ಆ ನಡುವೆ ನಾನೊಮ್ಮೆ ಧಾರವಾಡಕ್ಕೆ ಬಂದು ಮುರುಘಾಮಠದ ಹತ್ತಿರವಿದ್ದ
ನಮ್ಮ ಒಬ್ಬ ಅಕ್ಕನ ಮನೆಯಲ್ಲಿ ತಿಂಗಳೊಪ್ಪತ್ತು ಇದ್ದು ಹೋಗಿದ್ದೆನಾಗಿ ನಮ್ಮವ್ವನ
ತರ್ಕದಲ್ಲಿ ಮುರುಘಾಮಠದ ಅಪ್ಪಗಳ ಕೃಪೆಯಿಂದ ನಾನು ಬದಲಾಗಿದ್ದೆ. ಅವಳ ನಂಬುಗೆಯಲ್ಲಿ
ತಥ್ಯವಿರಲಿಲ್ಲ. ಆದರೆ ಹಾಗೆ ನಂಬಿ ಆಕೆ ಪಟ್ಟುಕೊಳ್ಳುತ್ತಿದ್ದ ಸಮಾಧಾನದಿಂದ ಅವಳನ್ನು
ಎರವಾಗಿಸುವ ಅಗತ್ಯ ನನಗೂ ಕಾಣಲಿಲ್ಲ. ಒಮ್ಮೊಮ್ಮೆ
ನಮ್ಮವ್ವನ ತರ್ಕಗಳು ಅಸಂಗತವೆನಿಸುವಷ್ಟು ತಮಾಷೆಯಾಗಿರುತ್ತಿದ್ದವು. ಒಂದು ಸಲ
ಅವಳಿಗೊಂದು ಎಮ್ಮೆ ಸಾಕುವ ಯೋಚನೆ ಬಂತು. ಮನೆಯಲ್ಲಿ ಯಾರಿಗೂ ಆ ಕುರಿತು
ಉತ್ಸಾಹವಿರಲಿಲ್ಲ. ಸಹಾನುಭೂತಿಯಂತೂ ಮೊದಲೇ ಇರಲಿಲ್ಲ. ಎಲ್ಲ ವಾದಗಳನ್ನೂ ಹೂಡಿದಳು.
ಯಾವುದೂ ಫಲಿಸಲಿಲ್ಲ. ಅಂತಿಮವಾಗಿ ಆಕೆ ಹೇಳಿದ್ದು: "ಹಿತ್ತಲದಾಗ ಒಂದ್ ಚೀಲ ತೌಡ ಕೂಡಿ
ಬಿದ್ದೈತಿ, ಒಂದ್ ಎಮ್ಮಿ ಸಾಕಿದರ ಉಪೇಗ ಆಕ್ಕೈತಿಲ್ಲೋ ನೀವs ಹೇಳ್ರಿ.." ಒಂದು ಚೀಲ
ಹೊಟ್ಟು ಸಂಗ್ರಹವಾಗಿ ಮನೆಯಲ್ಲಿದೆ ಮತ್ತು ಅದು ಪ್ರಯೋಜನಕ್ಕೆ ಬರಲಿ ಎಂಬುದಕ್ಕೆ ಎಮ್ಮೆ
ಸಾಕಬೇಕೆನ್ನುವ ಅವಳ ವಾದಕ್ಕೆ ನಾವು ಮನಸಾರೆ ನಕ್ಕೆವು. ತಾನೂ ನಕ್ಕಳು. ನಮ್ಮವ್ವನ ನಗೆ
ತುಂಬ ಚೆಂದ. ಅವಳ ಯೋಜನೆಗೆ ಪ್ರಮುಖವಾಗಿ ಕಲ್ಲು ಹಾಕುವವ ನಾನೇ ಆದ್ದರಿಂದ ಆಕೆ ಆ
ಎಮ್ಮೆಯ ಹಾಲು ಕುಡಿದು ನಾನು ಸ್ವಲ್ಪ ಮೈ ಹಚ್ಚಬಹುದೆಂದು ಹೇಳಿ ನನ್ನನ್ನೇ
ಪುಸಲಾಯಿಸಿದಳು. ಆ ಎಮ್ಮೆ ಈದು ಹಾಲು ಕೊಡತೊಡಗಿದ ಹೊತ್ತಿಗೆ ನಾನು ಧಾರವಾಡಕ್ಕೆ ಓದಲು
ಹೋದ ಕಾರಣ ವಾಸ್ತವವಾಗಿ ಆಗಲೇ ಸಾಕಷ್ಟು ಮೈ ಹಚ್ಚಿದ್ದ ನನ್ನ ತಮ್ಮ ಆ ಹಾಲಿನ
ಫಲಾನುಭವಿಯಾದ.
೧೯೭೫ರಲ್ಲಿ ಪದವಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಹೋಗುವದಾಗಿ
ನಾನು ಹಟ ಹಿಡಿದೆ. ಅದು ನನ್ನ ತಂದೆಗೆ ಸಮಸ್ಯೆಯಾಯಿತು. ಆದರೆ ನನ್ನ ಹಟವೂ
ದೃಢವಾದುದಾಗಿತ್ತು. ಅದಕ್ಕೆ ಕಾರಣವೂ ಇತ್ತು. ದ್ವಿತೀಯ ಪಿಯುಸಿ ಯಲ್ಲಿದ್ದಾಗ ಒಮ್ಮೆ
ಶುಲ್ಕದಿಂದ ವಿನಾಯ್ತಿ ಕೇಳಲೆಂದು ಪ್ರಾಚಾರ್ಯರನ್ನು ಭೇಟಿಯಾಗಿದ್ದೆ. ವಿಜಾಪುರ ಮೂಲದ,
ಗೌರವರ್ಣದ, ಎಳೆಬಿಸಿಲಿನಲ್ಲಿ ವಿಜಯ ಸೋಸಿಯಲ್ ಕ್ಲಬ್ ನ ಲಾನ್ ನಲ್ಲಿ ಬೆವೆಯುತ್ತ
ಟೆನ್ನಿಸ್ ಆಡುತ್ತಿದ್ದ ಎತ್ತರದ ವ್ಯಕ್ತಿ ಎನ್.ಜಿ.ಬಿರಾದಾರ್ ಪಾಟೀಲ್ ಸ್ಟ್ರಿಕ್ಟ್
ಪ್ರಿನ್ಸಿಪಾಲ್ ಎಂದು ಖ್ಯಾತಿ ಪಡೆದಿದ್ದರು. "ಆಯ್ತು ಕೊಡೋಣ, ನಿನ್ನ ತಂದೆಯವರನ್ನು
ಕರೆದುಕೊಂಡು ಬಾ" ಎಂದರು. ನಾನು ಮನೆಗೆ ಬಂದಾಗ ಊಟಕ್ಕೆ ಕುಳಿತಿದ್ದ ನನ್ನ ತಂದೆ
ಊಟವನ್ನು ಅರ್ಧಕ್ಕೇ ನಿಲ್ಲಿಸಿ ಕೈ ತೊಳೆದು ನನ್ನೊಂದಿಗೆ ಕಾಲೇಜಿಗೆ ಬಂದರು. ನನ್ನ
ತಂದೆಯನ್ನು ಮುಂದೆ ಕೂಡ್ರಿಸಿಕೊಂಡು " ನಿಮ್ ಮಗಾ ಮಿಸ್ ಚೀವ್ಹಸ್ ಅದಾನ. ಇಂಥವ್ರಿಗೆ
ರಿಯಾಯ್ತಿ ಕೊಡಲಾಗುವದಿಲ್ಲ" ಎಂದು ಪ್ರಿನ್ಸಿಪಾಲರು ಹೇಳಿದ್ದು ಕೇಳಿ ನಾನು
ಅಪ್ರತಿಭನಾದೆ. ಅದರಲ್ಲಿ ಸತ್ಯದ ಒಂದಂಶವೂ ಇರಲಿಲ್ಲ. ಹಾಗಂತ ಅವರಿಗೆ ಹೇಳಿದೆ. ನನ್ನ
ಸಮಸ್ಯೆ ಆ ಪ್ರಿನ್ಸಿಪಾಲ್ ಗೆ ನನ್ನ ಒಳ್ಳೇತನ ನಿರೂಪಿಸುವದಾಗಿರಲಿಲ್ಲ. ಆ ಶತಪ್ರತಿಶತ
ಮಿಥ್ಯಾರೋಪವನ್ನು ನನ್ನ ತಂದೆಯ ಸಮ್ಮುಖದಲ್ಲಿ ಹೊರಿಸಲಾಗಿತ್ತು. ಅದರಿಂದ ನನ್ನ ತಂದೆಗಾದ
ನೋವನ್ನು ಹೇಗೆ ತೊಡೆದುಹಾಕುವದು? ನಿರುಪಾಯವಾಗಿ ಮನೆಗೆ ಮರಳಿದೆವು. ನನ್ನ ತಂದೆ ಒಂದೇ
ಒಂದು ಮಾತು ಹೇಳಲಿಲ್ಲ, ದೂಷಿಸಲಿಲ್ಲ. ಆಮೇಲೆ ತಿಳಿದು ಬಂದಂತೆ ಎನ್.ಸಿ.ಸಿ ಕೆಡೆಟ್ ಗಳ
ಗುಂಪಿನಲ್ಲೊಬ್ಬ ವಿದ್ಯಾರ್ಥಿ ಏನೋ ಉಲಕೋಚಿತನ ಮಾಡಿದ್ದು ಅವನೇ ನಾನೆಂದು ಪ್ರಿನ್ಸಿಪಾಲ್
ಮಹಾಶಯರು ಭಾವಿಸಿದ್ದರು. ಹಾಗೆಂದು ನನಗೆ ಹೇಳಲಾಯಿತು. ಆದರೆ ಪಿಯುಸಿ ಮುಗಿದ ಮೇಲೆ ಈ
ಕಾಲೇಜಿನ ಋಣವೂ ಮುಗಿಯಿತೆಂದು ನಾನು ನಿರ್ಧರಿಸಿಯಾಗಿತ್ತು. ತಿಂಗಳೊಪ್ಪತ್ತಿನಲ್ಲಿ
ಪರೀಕ್ಷೆ ಮುಗಿದು ಫಲಿತಾಂಶವೂ ಬಂದು ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆ. ಆಯಾಯ
ವರ್ಗಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಚಿಕ್ಕ
ಕಾರ್ಯಕ್ರಮವೊಂದು ಪ್ರಿನ್ಸಿಪಾಲ್ ರ ಛೇಂಬರ್ ನಲ್ಲಿ ಏರ್ಪಾಡಾಗಿತ್ತು. ಅಲ್ಲಿ ನನ್ನನ್ನು
ಕಂಡು ಪ್ರಿನ್ಸಿಪಾಲರಿಗೆ ಆಶ್ಚರ್ಯವೇ ಆಯಿತು.ನಾನು ಅಲ್ಲಿಯೇ ಪದವಿ ವ್ಯಾಸಂಗ
ಮುಂದುವರಿಸುವೆನೆಂಬ ಗ್ರಹಿಕೆಯಲ್ಲಿ ಮಾತಾಡಿದ ಪ್ರಾಚಾರ್ಯರಿಗೆ ನಾನು ಅಲ್ಲಿ
ಕಲಿಯುವದಿಲ್ಲವೆಂದೆ. ಅವರು ಕಾರಣ ಕೇಳಿದಾಗ ಅಲ್ಲಿ ಇತಿಹಾಸವನ್ನು ಪ್ರಧಾನ ವಿಷಯವಾಗಿ
ಆಯ್ದುಕೊಳ್ಳುವ ಅವಕಾಶವಿಲ್ಲದ್ದರಿಂದ ನಾನು ಧಾರವಾಡಕ್ಕೆ ಹೋಗುವೆ ಎಂದೆ.(ಮುಂದೆ ನಾನು
ಎಂ.ಎ ಓದುತ್ತಿದ್ದಾಗ ಕಾಲೇಜಿನ ಕೆಲಸಗಳಿಗೆಂದು ಅವರು ವಿಶ್ವವಿದ್ಯಾಲಯಕ್ಕೆ ಬಂದಾಗ
ನನ್ನನ್ನು ಕಂಡರೆ ನಿಂತು ಮಾತಾಡಿಸಿ ಹೋಗುತ್ತಿದ್ದರು. ಆದರೆ ಆ ಪ್ರಕರಣದ ಬಗ್ಗೆ ನನ್ನ
ಮನಸಿನಲ್ಲಿ ಬಹುದಿನಗಳ ವರೆಗೆ ಒಂದು ವಿಷಾದ ಉಳಿದುಕೊಂಡಿತ್ತು.)
ನಾನು
ಧಾರವಾಡಕ್ಕೆ ಹೋಗುವದು ನನ್ನ ತಂದೆಗೆ ಸಮ್ಮತವಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ
ಆರ್ಥಿಕವಾದುದಾಗಿತ್ತು. ಈ ನಡುವೆ ನನ್ನಣ್ಣ ಧಾರವಾಡ ಕೃಷಿ ಕಾಲೇಜಿನಲ್ಲಿ ಎಂ.ಎಸ್ಸಿ
ಮುಗಿಸಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನೆಂದು ನಿಯುಕ್ತನಾಗಿದ್ದರೂ
ಆತನ ವಿವಾಹವಾಗಿದ್ದು ಮನೆ ಹೂಡಿದ್ದರಿಂದ ತನ್ನ ಕುಟುಂಬದ ಖರ್ಚು ವೆಚ್ಚಗಳಿಗೆ ಅವನ ವೇತನ
ವಿನಿಯೋಗವಾಗಿ ಅವನಿಂದ ನಮಗೆ ವಿಶೇಷ ಧನಸಹಾಯವೇನೂ ಇರಲಿಲ್ಲ. ಈ ಸ್ಥಿತಿ ನನಗೂ
ಗೊತ್ತಿತ್ತು. ಕೊನೆಗೆ ಪೋಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅಣ್ಣಿಗೇರಿ
ಎಂಬುವವರೊಂದಿಗೆ ವಿವಾಹವಾಗಿ ಧಾರವಾಡದಲ್ಲಿದ್ದ ನನ್ನ ಕಿರಿಯ ಅಕ್ಕ ಪ್ರಭಾವತಿಯ
ಮನೆಯಲ್ಲಿದ್ದುಕೊಂಡು ನಾನು ಓದುವದೆಂದಾಯಿತು. ಪ್ರತಿ ತಿಂಗಳು ತಾವು ೫೦ ರೂಪಾಯಿ
ಕಳಿಸುವದಾಗಿಯೂ ಅದರಲ್ಲಿ ೧೦ ರೂಪಾಯಿ ನಾನಿಟ್ಟುಕೊಂಡು ೪೦ ರೂಪಾಯಿಗಳನ್ನು ನನ್ನಕ್ಕನಿಗೆ
ಕೊಡಬೇಕೆಂದೂ ಹೇಳಿ ನನ್ನ ತಂದೆ ಸಮ್ಮತಿಸಿದರು. ಕರ್ನಾಟಕ ಕಾಲೇಜಿಗೆ ಪ್ರವೇಶವೇನೋ
ದೊರೆಯಿತು. ಆರಂಭಿಕ ಶುಲ್ಕ ಸಂದಾಯ ಮಾಡಲು ಹಣ ಬೇಕಿತ್ತು. ಊರಿಗೆ ಹೋದೆ. ನನ್ನ ತಾಯಿ
ತನ್ನ ಕೊರಳಲ್ಲಿದ್ದ ಗುಂಡಿನ ಸರ ತೆಗೆದು ಹಿರಿಯಕ್ಕನ ಕೈಲಿಟ್ಟಳು. ಮಟಮಟ ಮಧ್ಯಾಹ್ನ
ನಾನೂ ಗೌರಕ್ಕನೂ ಹೋಗಿ ಲೇವಾದೇವಿ ಮಾಡುತ್ತಿದ್ದ ವಕೀಲನೊಬ್ಬನ ಬಳಿ ಅದನ್ನು ಒತ್ತೆ
ಇಟ್ಟು ಹಣ ತೆಗೆದುಕೊಂಡು ಬಂದೆವು. ನಾನು ಧಾರವಾಡಕ್ಕೆ ಬಂದು ಕಾಲೇಜಿಗೆ ಪ್ರವೇಶ ಪಡೆದೆ. ಪ್ರಿನ್ಸಿಪಾಲರು
ಹೊರಿಸಿದ ಮಿಥ್ಯಾಪವಾದ ನಾನು ಬೈಲಹೊಂಗಲ ತೊರೆಯಲು ತತ್ ಕ್ಷಣದ ಕಾರಣವಾಗಿದ್ದ
ಹೊರತಾಗಿಯೂ ಇತಿಹಾಸವನ್ನು ಓದಬೇಕೆಂಬ ಆಶೆ ನನಗಿತ್ತು. ಅದಕ್ಕೆ ವಿಶೇಷವಾಗಿ ನನ್ನ
ತಂದೆಯೇ ಕಾರಣ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ನನ್ನ ತಂದೆ ಆ ಕಾಲಘಟ್ಟದ
ರಾಜಕೀಯ ವಿದ್ಯಮಾನಗಳಲ್ಲಿ ಆಳದ ಆಸಕ್ತಿಯನ್ನಿಟ್ಟುಕೊಂಡವರು. ನನಗೆ ದ್ವಿತೀಯ ಮಹಾಯುದ್ಧದ
ಕುರಿತು ಹೇಳುತ್ತಿದ್ದರು. ಗಾಂಧಿ,ನೆಹರೂ,ಜಿನ್ನಾ,ಹಿಟ್ಲರ್,ಸ್ಟಾಲಿನ್,ಮಹಾಜನ್
ಆಯೋಗ,ಇಂದಿರಾ ಗಾಂಧಿ, ಮೊರಾರ್ಜಿ, ವೈ.ಬಿ.ಚವಾಣ್...!! ತಂದೆಯಂತಿರದೇ ಸ್ನೇಹಿತನಂತಿದ್ದ
ಅವರು ಇಂಥ ವಿಷಯಗಳ ಕುರಿತು ಆಗಾಗ ಮಾತನಾಡುತ್ತಿದ್ದರು.
ನನ್ನ ಅವ್ವ ತುಂಬ ಕಳವಳ
ಪಟ್ಟದ್ದು ನಾನು ಎಂ.ಎ ಮುಗಿಸಿ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಒಂದು
ವರ್ಷ ಅರೆಕಾಲಿಕ ಉಪನ್ಯಾಸಕನಾಗಿದ್ದು ಅದೂ ಬೇಸರವಾಗಿ ೧೯೮೧ ರಲ್ಲಿ ಜವಾಹರಲಾಲ್ ನೆಹರೂ
ವಿಶ್ವವಿದ್ಯಾಲಯದಲ್ಲಿ ಓದಲೆಂದು ದೆಹಲಿಗೆ ಹೊರಟು ನಿಂತಾಗ. ಅವಳು
ಅತ್ತಳು,ಕರೆದಳು,ದಿಲ್ಲಿಗೆ ಹೋಗಬೇಡವೆಂದು ಹಲುಬಿದಳು. ಕೊನೆಗೆ "ಇನ್ ನಿನ ಮದಿವೀ
ಸುದ್ದೀ ತಗ್ಯೂದುಲ್ಲ ಬಿಡೋ, ನೀ ದಿಲ್ಲೀಗಿ ಹೋಗಬ್ಯಾಡಾ" ಎಂದಳು! (ನನ್ನ ಎಂ.ಎ
ಮುಗಿಯುತ್ತಲೇ ನನ್ನ ಮದುವೆಯ ಪ್ರಸ್ತಾಪಮಾಡತೊಡಗಿದ್ದ ಅವಳಿಗೆ "ನೀ ಹಿಂಗೆಲ್ಲಾ ಗಂಟ್
ಬಿದ್ರ ದಿಲ್ಲೀಗೆರs,ಮುಂಬೈಗೆರs ಹೋಗಿಬಿಡ್ತೇನ್ ನೋಡ" ಎಂದು ನಾನು ಹೆದರಿಸುತ್ತಿದ್ದೆ.
ನಾನು ದಿಲ್ಲಿಗೆ ಹೋಗುವದು ನಿಜವೇ ಎಂದಾದಾಗ ಅದು ಆ ಕಾರಣಕ್ಕೆ ಎಂದು ಅವಳು
ಭಾವಿಸಿದ್ದಳು!)."ಅದಕ್ಕಲ್ಲಬೇ, ಅಲ್ಲಿ ಸ್ಕಾಲರ್ ಶಿಪ್ ಸಿಕ್ಕರ ಒಂದ್ ನಾಲ್ಕೈದ್ ವರ್ಷ
ಇದ್ದ ಬರ್ತೇನ್ ಬಿಡಲಾ" ಎಂದೆ. ಅಲ್ಲಿ ಸ್ಕಾಲರ್ ಶಿಪ್ ಎಷ್ಟು ಕೊಡುತ್ತಾರೆಂದು ಅವಳು
ಕೇಳಿದಾಗ "ತಿಂಗಳಿಗೆ ನಾಲ್ಕೈದು ನೂರು ರೂಪಾಯಿ" ಎಂದೆ. " ಅಷ್ಟ್ ರೊಕ್ಕಾ ನಾನs
ಕೊಡ್ತೇನ್ ತಗೋ. ಮನ್ಯಾಗs ಕಿರಾಣಿ ಅಂಗಡೈತಿ. ಯಾಪಾರ ಮಾಡಿಕೊಂಡ್ ಸುಮ್ನ ನಮ್ಮ
ಕಣ್ಮುಂದs ಇರೋ ಯಪ್ಪಾ" ಎಂದಳು. ಸ್ವರ್ಣಪದಕ ಸಮೇತ ಎಂ.ಎ ಮುಗಿಸಿ,ಪ್ರತಿಷ್ಠಿತ
ಕಾಲೇಜೊಂದರಲ್ಲಿ ಒಂದು ವರ್ಷ ಪಾಠ ಮಾಡಿದ್ದ ನಾನು ಕಿರಾಣಿ ಸಾಮಾನು ಕಟ್ಟಿಕೊಡುತ್ತ
ವ್ಯಾಪಾರ ಮಾಡುವ ಚಿತ್ರ ಕಲ್ಪಿಸಿಕೊಂಡು ನಕ್ಕೆ. ಆದರೆ "ಹಾಲ ಮಾರಿದ್ದರಾಗ ಇಷ್ಟ್
ಉಳೀತಾವ, ಶೇಂಗಾ ಸುಗ್ಗ್ಯಾಗಂತೂ ಚಿಂತೇ ಇಲ್ಲ.." ಎನ್ನುತ್ತ ಆ ಐದುನೂರು ರೂಪಾಯಿ ತಾನು
ಹೇಗೆ ಜಮೆ ಮಾಡಬಲ್ಲಳೆಂದು ನನ್ನ ಅವ್ವ ಗಂಭೀರವಾಗಿ ವಿವರಿಸತೊಡಗಿದಾಗ ನನ್ನ ಕಣ್ಣು
ತುಂಬಿ ಬಂದಿದ್ದವು. ಕೊನೆಗೆ "ವಾರಾ ವಾರಾ ತಪ್ಪದs ಪತ್ರಾ ಬರಕೊಂತ ಇರ"ಬೇಕೆನ್ನುವ ಅವಳ
ಕರಾರಿಗೆ ಒಪ್ಪಿ ನಾನು ದಿಲ್ಲಿಗೆ ಹೊರಟೇಹೋದೆ. ಬದುಕಿನಲ್ಲಿ ನಾನು ನಿಯಮಿತವಾಗಿ ಐದು
ವರ್ಷ ಪತ್ರ ಬರೆದ ಒಂದೇ ಅವಧಿ ಅದು. ಈ ಮಧ್ಯೆ ನನ್ನ ತಮ್ಮನೂ ಡೆಲ್ಲಿ ಸ್ಕೂಲ್ ಆಫ್
ಇಕನಾಮಿಕ್ಸ್ ನ ಭಾಗವಾಗಿದ್ದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಓದಲೆಂದು ದೆಹಲಿಗೆ
ಬಂದು ನನ್ನೊಂದಿಗೇ ವಾಸಿಸತೊಡಗಿದ. ದಿಲ್ಲಿ ಎಂದರೆ ತನ್ನ ಇಬ್ಬರು ಗಂಡು ಮಕ್ಕಳು ಎಂದು
ಸಮೀಕರಿಸಿದ್ದ ನನ್ನ ತಾಯಿ ೧೯೮೪ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ದಿಲ್ಲಿಯಲ್ಲಿ
ಭುಗಿಲೆದ್ದ ವ್ಯಾಪಕ ಹಿಂಸಾಚಾರದ ವರದಿಗಳನ್ನು ಕೇಳಿ ಬೆಂಕಿಯ ಮೇಲೆ ನಿಂತಂತೆ
ಚಡಪಡಿಸಿದ್ದಳು.
ಈ ಎಲ್ಲ ಬೆಳವಣಿಗೆಗಳ ನಡುವೆ ನನ್ನ ತಂದೆ ಸ್ಥಿತಪ್ರಜ್ಞ. ಇದು
ಶಬ್ದದ ಚೆಲುವಿಕೆಗಾಗಿ ಹೇಳುತ್ತಿರುವ ಮಾತಲ್ಲ. ಭಗವದ್ಗೀತೆಯನ್ನು ಆಳವಾಗಿ
ಅಭ್ಯಸಿಸಿದವರಿದ್ದಾರೆ. ಅದರ ಕುರಿತು ಭಾಷಣ ಬಿಗಿಯುವವರಿದ್ದಾರೆ. ಆದರೆ ನನ್ನಪ್ಪ
ಭಗವದ್ಗೀತೆಯನ್ನು ಬದುಕಿದರು. ಅದರ ಸಂದೇಶ ಅವರ ಜೀವನದ ತತ್ವವಾಗಿತ್ತು. ನಾಗರೀಲಿಪಿಯ
ಸಂಸ್ಕೃತ ಪಠ್ಯದಲ್ಲಿ ನನ್ನ ತಂದೆ ಅದನ್ನು ತನ್ಮಯರಾಗಿ ಓದುತಿದ್ದರು.
ಫಲಾಪೇಕ್ಷೆಗಳಿಲ್ಲದ ಕರ್ತವ್ಯವಾಗಿ ಮಾಡುವ ಕರ್ಮದ ಕುರಿತಾದ ಅದರ ಸಂದೇಶ ನನ್ನ ತಂದೆಯ
ಅತ್ಯಂತ ಶ್ರದ್ಧೆಯ-ಪ್ರೀತಿಯ ಭಾಗವಾಗಿತ್ತು. ಟಿಳಕರ ಗೀತಾರಹಸ್ಯ ಎಂಬ ಮರಾಠಿ
ಕೃತಿಯನ್ನೊಳಗೊಂಡು ಭಗವದ್ಗೀತೆಯನ್ನು ಅರ್ಥೈಸುವ ಹಲವು ಪುಸ್ತಕಗಳು ನಮ್ಮ
ಮನೆಯಲ್ಲಿದ್ದವು. ತನ್ನೊಬ್ಬ ಮೊಮ್ಮಗಳಿಗೆ ನನ್ನ ತಂದೆ ಗೀತಾ ಎಂದು ಹೆಸರಿಟ್ಟರು.
"ಅಲ್ಲಪಾ ಕೃಷ್ಣಾ, ಯುದ್ಧಾ ಮಾಡೂ ಅಂತೀ, ಎದುರಿಗಿ ನಿಂತವರರs ಯಾರು? ನನಗ ವಿದ್ಯಾ
ಕಲಿಸಿದ ಗುರು,ನನ್ ಅಪ್ಪಗ ಒಡಹುಟ್ಟಿದವನ ಮಕ್ಕಳು,..ಇಂಥಾ ಯುದ್ಧ ಪಾಪ ಅಲ್ಲೇನೂ?" ಅಂತ
ಅರ್ಜುನ ಕೇಳಿದಾಗ ಕೃಷ್ಣ ಹೇಳ್ತಾನ, "ಇದು ಕರ್ತವ್ಯದ ಪ್ರಶ್ನೆ, ನೀ ಈಗ ಸ್ಥಿತಪ್ರಜ್ಞ
ಆಗಬೇಕು." "ಹಂಗಾರ ಸ್ಥಿತಪ್ರಜ್ಞ ಅಂದರ ಯಾರು? ಅವನ ಲಕ್ಷಣ ಏನು?" ಅಂತ ಅರ್ಜುನ
ಕೇಳಿದಾಗ ಕೃಷ್ಣ ಹೇಳತಾನ,"ಸುಖೇದು:ಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ..." ಹೀಗೇ
ಸಾಗುತ್ತಿತ್ತು ನನ್ನ ತಂದೆಯ ಮಾತು. ನನ್ನನ್ನು ಮುಂದೆ ಕೂಡ್ರಿಸಿಕೊಂಡು ಇದನ್ನೆಲ್ಲ
ಎಷ್ಟು ಸಲ ಹೇಳಿದರೂ ನನ್ನ ತಂದೆಗೆ ಬೇಸರವಿರಲಿಲ್ಲ. ಕೇಳಿ ಕೇಳಿ ನನಗೇ ಬಾಯಿಪಾಠವಾಗಿ
ಹೋಗಿತ್ತು. ನನ್ನಪ್ಪ
ಎಂಥ ಸ್ಥಿತಪ್ರಜ್ಞನೆಂಬುದನ್ನು ಕಾಣುವ ಸಂದರ್ಭವೂ ಬಂದಿತ್ತು. ೧೯೭೯ರ ಮೇ ತಿಂಗಳಾಂತ್ಯದ
ಒಂದು ದಿನ ನನ್ನ ಗೆಳೆಯ ರವಿ ಬೆಳಗೆರೆಯ ಮದುವೆಗೆಂದು ಬಳ್ಳಾರಿಗೆ ಹೋಗಲು ನಾನು
ಸಿದ್ಧನಾಗುತ್ತಿದ್ದಾಗ ಧಾವಿಸಿ ಬಂದ ನನ್ನ ಸೋದರಳಿಯ ಒಂದು ದಾರುಣ ವಾರ್ತೆ ತಂದಿದ್ದ. ಈ
ಮಧ್ಯೆ ಬೆಂಗಳೂರಿನಿಂದ ಧಾರವಾಡದ ಕೃಷಿ ಕಾಲೇಜಿಗೆ ಅಧ್ಯಾಪಕನಾಗಿ ಬಂದು ಸಾರಸ್ವತಪುರದ
ತನ್ನ ಮಾವನ (ಹೆಂಡತಿಯ ತಂದೆಯ) ಮನೆಯಲ್ಲಿ ನೆಲೆಸಿದ್ದ ನನ್ನ ಅಣ್ಣ ತನ್ನ ಅಧ್ಯಯನ
ವಿಭಾಗದಲ್ಲಿ ತಾನು ಅನುಭವಿಸುತ್ತಿದ್ದ ಉಪೇಕ್ಷೆ ಮತ್ತು ತಾರತಮ್ಯಗಳಿಂದ ನೊಂದು
ಅಂತರ್ಮುಖಿಯಾಗಿ ಕೊನೆಗೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡು ಮರಣವನ್ನಪ್ಪಿದ್ದ. ಅದು ನಮಗೆ
ಅತ್ಯಂತ ಅನಿರೀಕ್ಷಿತವಾದ ಘಟನೆ. ರಾತ್ರಿ ಎಂಟು ಗಂಟೆಯ ಹೊತ್ತಿಗೆ ನನ್ನ ಅಳಿಯ ತಂದಿದ್ದ
ಸೈಕಲ್ಲೇರಿ ನಾನು ಮರಣೋತ್ತರ ಶವಪರೀಕ್ಷೆ ನಡೆಯುತ್ತಿದ್ದ ಸಿವಿಲ್ ಆಸ್ಪತ್ರೆಗೆ
ಹೋಗುವಾಗ ಮಾರ್ಗಮಧ್ಯದಲ್ಲೇ APMC ಹತ್ತಿರ ಒಬ್ಬಂಟಿಯಾಗಿ ಬರುತ್ತಿದ್ದ ನನ್ನಪ್ಪ
ಸಿಕ್ಕರು. ನನಗಾದಿದ್ದ ಶಾಕ್ ನನ್ನ ತಂದೆಯ ಮುಖಭಾವದಲ್ಲೂ ಇತ್ತೆ? ಗೊತ್ತಾಗಲಿಲ್ಲ.
"ದವಾಖಾನ್ಯಾಗ ಅದೆಲ್ಲಾ ಮುಗೀಬೇಕಾದ್ರ ತಡಾ ಆಗ್ತೈತಿ. ನೀ ಒಂದ್ ಸ್ವಲ್ಪ ಏನರs ತಿಂದ ಚಾ
ಕುಡೀವಂತೀ ನಡೀ" ಎಂದರು. ನನ್ನ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು. ಒಂದೆಡೆ
ಸ್ವಲ್ಪ ಹೊತ್ತು ನಿಂತು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಹೇಳಿದರು: "ಯಾವಾಗ ಬಸವ
ಹಿಂಗಿಂಗ್ ಮಾಡಿಕೊಂಡಾನಂತ ಅವರ ಮಾವನ ಟೆಲಿಗ್ರಾಂ ಬಂದು ನನಗ ವಿಷಯ ತಿಳೀತೂ ಆವಾಗs ನಾ
ಬಸವನ್ನ ಮರತ ಬಿಟ್ನಿ". ಮೂವರು ಹೆಣ್ಣುಮಕ್ಕಳ ನಂತರ ಹುಟ್ಟಿದ ತಮ್ಮ ಪ್ರೀತಿಯ ಪುತ್ರ,
ಕುಟುಂಬದ ಹೆಮ್ಮೆಯ ಸದಸ್ಯ, ಯಾರ ಅಭ್ಯುದಯಕ್ಕಾಗಿ ಕುಟುಂಬದ ಎಲ್ಲರೂ ಹತ್ತಾರು ವರ್ಷ
ಶ್ರಮಿಸಿದ್ದೆವೋ ಆ ಜೀವ ಹೀಗೆ ತನ್ನನ್ನು ಕೊನೆಗೊಳಿಸಿಕೊಂಡ ಬಗ್ಗೆ ನನ್ನ ತಂದೆಗೆ ದು:ಖ
ಬೇಸರ ಇತ್ತೆ? ಇರಲಿಲ್ಲವೇ?
ಇದಾದ ಕೆಲ ದಿನಗಳ ನಂತರ ಬೈಲಹೊಂಗಲದ ನಮ್ಮ ಮನೆಯಲ್ಲಿ
ಹಿತ್ತಿಲ ಕಡೆಯಿಂದ ನನ್ನ ತಂದೆಯನ್ನು ರಟ್ಟೆ ಹಿಡಿದು ನಡೆಸಿಕೊಂಡು ಬಂದ ನಮ್ಮ ಗೌರಕ್ಕ
ನಡುಮನೆಯಲ್ಲಿದ್ದ ನನಗೆ ಹೇಳಿದಳು, "ಬಚ್ಚಲ ಕಟ್ಟೀ ಮ್ಯಾಲ ಕುಂತ ಅಪ್ಪಾ
ಅಳಾಕ್ಹತ್ತಿದ್ದ." ಬಹಳ ಹೊತ್ತಿನ ನಂತರ ಅಪ್ಪ ನನಗೆ ವಿವರಣೆ ಕೊಡುವ ರೀತಿಯಲ್ಲಿ
ಹೇಳಿದರು:"ಏನಿಲ್ಲ, ಆ ರೈಲಿನ ಗಾಲಿ ಬಸವನ ಶರೀರಾ ಜಗ್ಗಿಕೊಂಡ್ ಹಳೀಗುಂಟ ಓಡೂವಾಗ ಆ
ಶರೀರಕ್ಕ ಎಷ್ಟ ಹಿಂಸಾ ಆಗಿದ್ದೀತು ಅಂತ ವಿಚಾರ ಬಂದು ಮನಸೀಗಿ ದು:ಖಾತು".
ಇಂಥ
ನನ್ನ ತಂದೆ ಎಂಬತ್ತು ವರ್ಷ ವಯಸ್ಸಾಗುವ ವರೆಗೆ ಓಡಾಡಿಕೊಂಡೇ ಇದ್ದರು. ಆಮೇಲೆ ಕೀಲು
ನೋವಿನಿಂದ ಮನೆಯಲ್ಲಿಯೇ ಇರುವ ಸ್ಥಿತಿ ಬಂತು. ಮೂತ್ರವಿಸರ್ಜನೆಯ ತೊಂದರೆ ಉಂಟಾದಾಗ ಎರಡು
ಸಲ ಧಾರವಾಡದ ಡಾ.ರಾಮನಗೌಡರ್ ನರ್ಸಿಂಗ್ ಹೋಮ್ ಗೆ ಎಡ್ಮಿಟ್ ಮಾಡಿದೆವು. ವೈದ್ಯರ
ಸೂಚನೆಯ ಮೇರೆಗೆ ನನ್ನ ತಮ್ಮ ಬೆಳಗಾವಿಯಿಂದ ಡಾ. ಅಚರೇಕರ್ ಎಂಬುವವರನ್ನು ಕರೆದುಕೊಂಡು
ಬಂದನಾದರೂ ನನ್ನ ತಂದೆಯಲ್ಲಿ ಪಾರ್ಶ್ವವಾಯುವಿನ ಸೂಕ್ಷ್ಮ ಪರಿಣಾಮವನ್ನು ಗುರುತಿಸಿದ
ವೈದ್ಯರು ಶಸ್ತ್ರಚಿಕಿತ್ಸೆಗೆ ಅವರ ದೇಹಸ್ಥಿತಿ ಪೂರಕವಾಗಿಲ್ಲವೆಂದು ತಿಳಿಸಿ
ಕೆಥಟರೈಝೇಶನ್ ವ್ಯವಸ್ಥೆ ಮಾಡಿದರು. ಆ ವ್ಯವಸ್ಥೆಯಲ್ಲಿ ಇನ್ಫೆಕ್ಶನ್ ಆಗಿ ಜ್ವರ ಬರುವ
ಸಾಧ್ಯತೆಗಳಿರುತ್ತಿದ್ದುದರಿಂದ ತಿಂಗಳಿಗೊಮ್ಮೆ ಬೈಲಹೊಂಗಲಕ್ಕೆ ಹೋಗಿ ಅಲ್ಲಿಯ ವೈದ್ಯರ
ನೆರವಿನಿಂದ ಕೆಥೆಟರ್ ಬದಲಿಸಿ ಬರುತ್ತಿದ್ದೆವು. ಆಮೇಲಾಮೇಲೆ ಪೂರ್ತಿಯಾಗಿ ಹಾಸಿಗೆ
ಹಿಡಿದ ತಂದೆ ಬೆಡ್ ಸೋರ್ ಗಳಾಗಿ ತಿಂಗಳೊಪ್ಪತ್ತು ತುಂಬ ಯಾತನೆ ಅನುಭವಿಸಿ ಕೊನೆಗೆ ೮
ಜೂನ್ ೧೯೯೫ರಲ್ಲಿ ನಿದ್ರೆಯಲ್ಲಿದ್ದಾಗಲೇ ಕೊನೆಯುಸಿರೆಳೆದರು. ಈ ನಡುವೆ ನನ್ನ ತಾಯಿಗೆ
ಹೈಪೊಗ್ಲುಸೆಮಿಯಾ (ರಕ್ತದಲ್ಲಿ ಸಕ್ಕರೆ ಪ್ರಮಾಣದ ಇಳಿಕೆ) ಆಗಿ ಒಂದೆರಡು
ಸಲ ತಾತ್ಕಾಲಿಕ ವಿಸ್ಮೃತಿ ಉಂಟಾಯಿತು. ನನ್ನ ತಂದೆ ತೀರಿಹೋದ ಎರಡೇ ವರ್ಷಗಳಲ್ಲಿ ೪
ಏಪ್ರಿಲ್ ೧೯೯೭ ರಲ್ಲಿ ನಮ್ಮ ತಾಯಿಯೂ ಅನಿರೀಕ್ಷಿತವಾಗಿ ಸೆರೆಬ್ರಲ್ ಹೆಮರೇಜ್ ನಿಂದ
ನಮ್ಮೆಲ್ಲರ ಕಣ್ಮುಂದೆಯೇ ಕೊನೆಯುಸಿರೆಳೆದಳು.
ಬದುಕಿನ ಕೊನೆಯ ವರ್ಷಗಳಲ್ಲಿ ಅವರು
ಸೌಕರ್ಯದಿಂದಿರುವಂತೆ ನಾನು ಮತ್ತು ನನ್ನ ತಮ್ಮ ಅರವತ್ತೆಪ್ಪತ್ತು ಸಾವಿರ ರೂಪಾಯಿ
ಖರ್ಚು ಮಾಡಿ, ಹಳೆಯ ಮರಮುಟ್ಟುಗಳನ್ನೇ ಬಳಸಿ ಬೈಲಹೊಂಗಲದ ಮನೆಯನ್ನು ಪುನರ್ನಿರ್ಮಾಣ
ಮಾಡಿಸಿದೆವು.ಪ್ರತಿ ತಿಂಗಳು ಅವರಿಗೆ ನಿಶ್ಚಿತ ಮೊತ್ತದ ಹಣವನ್ನು ನಮ್ಮ ಖಾತೆಗಳಿಂದ
ವರ್ಗಾಯಿಸಲು ನಮ್ಮ ಬ್ಯಾಂಕಿನವರಿಗೆ ಸೂಚನೆ ಕೊಟ್ಟಿದ್ದೆವು. ಸ್ವಾತಂತ್ರ್ಯಯೋಧರಿಗೆ
ಕೊಡಮಾಡುತ್ತಿದ್ದ ಹಣವೂ ಬರುತ್ತಿದ್ದು ಆರ್ಥಿಕ ತೊಂದರೆ ಇರಲಿಲ್ಲ. ಅವರಿಗೆ ಅಗತ್ಯದ
ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಿದೆವು. ಅವರ ಪಾರ್ಥಿವ ಶರೀರಗಳನ್ನೇನೋ ಬೀಳ್ಕೊಟ್ಟೆವು.
ಅಂಥ ತಂದೆ-ತಾಯಿಯ ನೆನಪನ್ನು ಹೇಗೆ ಬೀಳ್ಕೊಟ್ಟೇವು? ಅವು ನಮ್ಮಲ್ಲಿ ಹಸಿರಾಗಿವೆ.
`ಋಜುಪಥವ ಹಿಡಿದೆ ಛಲ ಬಿಡದೆ
ರಾಜಿಯಾಗದೆ ನಿಜದ ನೇರಕೆ ನಡೆದೆ
ಬುದ್ಧದರ್ಶನಕೆ ಹುಲ್ಲು ಗೆಜ್ಜೆ ನಿನಾದಕೆ
ಮುಪ್ಪಿಲ್ಲ ಹಿಂಗಮಿರೆಯಿತ್ತ ಕಾವ್ಯಗೌರವಕೆ
ಮಣಿಹವಿದು ನೀ ಗೈದ ಸೃಷ್ಟಿ ಸಾಮರ್ಥ್ಯಕೆ`
ಕನ್ನಡದ ಖ್ಯಾತ ಕವಿ, ವಿಮರ್ಶಕ ಡಾ.ಬುದ್ದಣ್ಣ ಹಿಂಗಮಿರೆಯವರಿಗೆ ಅರ್ಪಿತವಾದ `ಜನಪರ`
(2011, ಸಂ: ಶಿವಾನಂದ ಗಾಳಿ) ಎಂಬ ಅಭಿನಂದನಾ ಗ್ರಂಥದಲ್ಲಿ ಪ್ರೊ. ಹಂಪನಾ ಅವರು ಬರೆದ
ಕವಿತೆಯೊಂದರ ಸಾಲುಗಳಿವು. ಹಿಂಗಮಿರೆಯವರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ಸಮನಾಗಿಯೇ
ಸಂದ ಹೃದಯಸ್ಪರ್ಶಿ ಶ್ರದ್ಧಾಂಜಲಿ ಇದು.
ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೃಷ್ಣಾ ನದಿ ತೀರದ ರಾಜಾಪುರ ಎಂಬ ಕುಗ್ರಾಮ ಹಿಂಗಮಿರೆ ಅವರ
ಹುಟ್ಟೂರು (ಜ: 1933). ಸ್ವಪ್ರಯತ್ನದಿಂದ ಶಿಕ್ಷಣ ಸಾಹಿತ್ಯದಂಥ ಸಂಸ್ಕಾರಗಳನ್ನು
ರೂಢಿಸಿಕೊಂಡ ಅವರು, ಖಾಸಗಿ ನೋವು-ಆಘಾತಗಳ ನಡುವೆಯೂ ಬದುಕಿನ ಕುರಿತು ಅಪಾರ
ಪ್ರೀತಿಯನ್ನು ಉಳಿಸಿಕೊಂಡು, ಎಲ್ಲರಿಗೂ ಪ್ರೀತಿಯನ್ನೇ ಹಂಚುತ್ತ, ತಾನೂ ಬೆಳೆದು
ಇತರರನ್ನೂ ಬೆಳೆಸಿದರು.
`ಸೋವಿಯೆತ್ ಲ್ಯಾಂಡ್ ನೆಹರು ಪ್ರಶಸ್ತಿ` ಪಡೆವವರೆಗೆ; ಸುಮಾರು ಕಾಲು ಶತಮಾನದಿಂದ ತಮ್ಮ
ಅಂತರಂಗದಲ್ಲಿ ರೂಪುಗೊಳ್ಳುತ್ತ ನಡೆದ ದರ್ಶನವೊಂದಕ್ಕೆ ಬದುಕಿನ ಇಳಿಸಂಜೆಯಲ್ಲಿ `ಬುದ್ಧ
ಕಾವ್ಯ ದರ್ಶನ`ವೆಂಬ ಮಹಾಕಾವ್ಯದ ರೂಪು ಕೊಟ್ಟು, ಅದನ್ನು ಪ್ರಕಟಿಸಿಯೇ ಈ ಲೋಕದಿಂದ
ನಿರ್ಗಮಿಸುವವರೆಗೆ ಬುದ್ದಣ್ಣ ಹಿಂಗಮಿರೆ ನಡೆದದ್ದು ನಿರಂತರ ಸಂಘರ್ಷದ ದಾರಿ.
ಅಥಣಿಯ ಹೈಸ್ಕೂಲೊಂದರಲ್ಲಿ ಮಾಸ್ತರ್ ಆಗಿದ್ದ ಹಿಂಗಮಿರೆಯವರ ಜ್ಞಾನದಾಹ ಅವರನ್ನು
ಸಾಂಗಲಿಯಲ್ಲಿದ್ದ ರಂ.ಶ್ರಿ.ಮುಗಳಿಯವರ ಬಳಿ ಕೊಂಡೊಯ್ದಿತು. ಮುಗಳಿಯವರ
ಮಾರ್ಗದರ್ಶನದಲ್ಲಿ ಪ್ರೌಢಪ್ರಬಂಧ ಬರೆದು ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ
ಪಡೆದು ನಿಪ್ಪಾಣಿ, ಹುಬ್ಬಳ್ಳಿ-ಧಾರವಾಡದ ಕಾಲೇಜುಗಳಲ್ಲಿ, ಕರ್ನಾಟಕ
ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಕನ್ನಡ ಎಂ ಎ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ
ವಿಶ್ವವಿದ್ಯಾಲಯದ ವಿದೇಶಿ ಭಾಷೆಗಳ ಅಧ್ಯಯನ ವಿಭಾಗದಲ್ಲಿ ರಷ್ಯನ್ ಭಾಷೆ-ಸಾಹಿತ್ಯದಲ್ಲಿ
ಸ್ವತಃ ತಾವೂ ಎಂ.ಎ ಮಾಡಿದರು. ಮಾಸ್ಕೋನಗರದ ಪುಷ್ಕಿನ್ ಪ್ರತಿಮೆಯ ಬಳಿ ಸಾರ್ವಜನಿಕವಾಗಿ
ಕವನವಾಚನ ಮಾಡುವವರೆಗೆ ಚಾಚಿಕೊಂಡ ಸುದೀರ್ಘ ಪಯಣವದು.
ವರಸೆಯಲ್ಲಿ ನನ್ನ ಭಾವ (ಚಿಕ್ಕಮ್ಮನ ಮಗಳ ಗಂಡ) ಆದರೂ 1964ರಲ್ಲಿ ನಾನು ಪ್ರಾಥಮಿಕ
ಎರಡನೆಯ ತರಗತಿಯಲ್ಲಿದ್ದಾಗ ಯಡೂರಿನಲ್ಲಿ ನಡೆದ ಅವರ ಮದುವೆಯ ಅಸ್ಪಷ್ಟ ನೆನಪುಗಳನ್ನು
ಹೊರತುಪಡಿಸಿದರೆ ಹಿಂಗಮಿರೆ ಎಂಬ ವ್ಯಕ್ತಿತ್ವದ ನಿಕಟ ಪರಿಚಯ ನನಗೆ ಇರಲೇ ಇಲ್ಲ. ಅವರ
ನಿಕಟ ಸಂಪರ್ಕ ಬಂದದ್ದು ನಾನು ಧಾರವಾಡದ ಕರ್ನಾಟಕ ಕಾಲೇಜಿಗೆ ಪದವಿ ವಿದ್ಯಾಭ್ಯಾಸಕ್ಕೆ
ಪ್ರವೇಶ ಕೋರಿ ಹೋದ ನಂತರವೇ.
ಆಗ ಅವರಲ್ಲಿ ಅಧ್ಯಾಪಕರು. ಅಲ್ಪ ಸ್ವಲ್ಪ ಸಾಹಿತ್ಯದ ಆಸಕ್ತಿ ಇದ್ದ ನನಗೆ ಹಿಂಗಮಿರೆ
ಅವರೊಂದಿಗೆ ಸಂಪರ್ಕ ಬೆಳೆಯಿತು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಹಿತ್ಯಾಸಕ್ತಿಗೆ
ನೀರೆರೆಯುವ ಅವರ ಆಸಕ್ತಿಯ ಫಲವಾಗಿ ವಿ.ಕೃ.ಗೋಕಾಕರ ಕಾಲದಿಂದ ಕರ್ನಾಟಕ ಕಾಲೇಜಿನ ಕನ್ನಡ
ಸಂಘದ ಭಾಗವಾಗಿದ್ದ `ಕಮಲ ಮಂಡಲ` ಪ್ರಕಾಶನವನ್ನು ಮರುಜೀವಗೊಳಿಸಿದ ಅವರು, `ಸ್ಪಂದನ`
ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಕವನಸಂಗ್ರಹ ಹೊರತಂದರು. ಅದರಲ್ಲಿ ನನ್ನ ಕವಿತೆಗಳೂ
ಸೇರಿದ್ದವು.
ಅದಕ್ಕೆ ಮೊದಲು, ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಲೂ
`ಸಾಹಿತ್ಯ ಮಂಟಪ` ಎಂಬ ವೇದಿಕೆ ರೂಪಿಸಿ ಸರಜೂ ಕಾಟಕರ, ಸತೀಶ ಕುಲಕರ್ಣಿ, ಗವಿಸಿದ್ಧ
ಬಳ್ಳಾರಿಯಂಥ ಕವಿಗಳು ಕಾವ್ಯಲೋಕವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು.
ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪರಿಣಾಮವಾಗಿ ನೆಲೆಸಿದ್ದ
ವಿಲಕ್ಷಣ ಮೌನದ ನಡುವೆಯೇ ಬಂಡಾಯ, ಸಮುದಾಯ, ರೈತ, ದಲಿತ ಮತ್ತಿತರ ಜನಪರ ಚಳವಳಿಗಳು
ಧಾರವಾಡದಲ್ಲಿ ತಲೆ ಎತ್ತತೊಡಗಿದ್ದ ದಿನಗಳವು. ಮಾರ್ಕ್ಸಿಸ್ಟ್ ಚಿಂತನೆಯ
ಪ್ರಭಾವಕ್ಕೊಳಗಾಗಿದ್ದ ನಾವು ಕೆಲವರು ಅದೇ ಒಲವಿನ ಹಿಂಗಮಿರೆ ಅವರೊಂದಿಗೆ ಒಡನಾಡುವದು
ಸಹಜವಾಗಿತ್ತು.
ಒಂದೆಡೆ ಚಂದ್ರಶೇಖರ್ ಪಾಟೀಲರಂಥ ಸೋಷಲಿಸ್ಟರು ತುರ್ತುಸ್ಥಿತಿಯ ವಿರುದ್ಧ ದನಿ
ಎತ್ತತೊಡಗಿದ್ದರೆ ಇನ್ನೊಂದೆಡೆ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ವಿಮರ್ಶಕ ಶಂಕರ
ಮೊಕಾಶಿ ಪುಣೇಕರ್ ಅಂಥವರು ತುರ್ತುಸ್ಥಿತಿಯನ್ನು ಸಮರ್ಥಿಸಿ ಇಂದಿರಾ ಭಜನೆ ಶುರು
ಹಚ್ಚಿಕೊಂಡಿದ್ದರು.
ಹಿಂಗಮಿರೆಯವರು ತುರ್ತುಪರಿಸ್ಥಿತಿಯನ್ನು ಸಮರ್ಥಿಸಿದ್ದರು ಎಂಬುದಕ್ಕಿಂತ ಅವರು
ಕಮ್ಯುನಿಜಂನಲ್ಲಿ ಆಸ್ಥೆಯುಳ್ಳವರಾಗಿದ್ದಕ್ಕೂ ಮತ್ತು ರಾಷ್ಟ್ರಮಟ್ಟದಲ್ಲಿ ಸಿಪಿಐ (ಭಾರತ
ಕಮ್ಯುನಿಸ್ಟ್ ಪಕ್ಷ ) ಇಂದಿರಾಗಾಂಧಿ ವಿಧಿಸಿದ್ದ ತುರ್ತುಸ್ಥಿತಿಯನ್ನು
ಬೆಂಬಲಿಸಿದ್ದಕ್ಕೂ ತಳಕು ಹಾಕಿ, ಹಿಂಗಮಿರೆಯವರನ್ನು ತುರ್ತುಸ್ಥಿತಿಯ ತಾತ್ವಿಕ
ಬೆಂಬಲಿಗರೆಂಬಂತೆ ಬಿಂಬಿಸುವ ಲೋಹಿಯಾವಾದಿ ಸೋಷಲಿಸ್ಟರ ರೆಟರಿಕ್ಕೇ ಹೆಚ್ಚಾಗಿತ್ತು.
ತಮ್ಮ ಕುರಿತು ತಾವೇ ದೊಡ್ಡದಾಗಿ ಮಾತನಾಡಿಕೊಳ್ಳುವ ಜಾಯಮಾನದವರಲ್ಲದ ಹಿಂಗಮಿರೆ
ತಮ್ಮಷ್ಟಕ್ಕೆ ತಾವು ಮೌನವಾಗಿ ಹಲವು ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದರು.
ಅಂತಸ್ಸತ್ವದಲ್ಲಿ ನಿಜಕ್ಕೂ ಬಂಡಾಯಗಾರನಾದ ಮತ್ತು ಆ ಆಶಯದ ಕಾವ್ಯದ ಉತ್ತಮ
ಪ್ರತಿನಿಧಿಯಾದ ಅವರು ಬಂಡಾಯ ಸಾಹಿತ್ಯ ಸಂಘಟಣೆಯ ವ್ಯಾಪ್ತಿಯೊಳಗೂ ಬರಲು ಬಯಸದೇ ತಮ್ಮ
ಪಾಡಿಗೆ ತಾವಿದ್ದರು.
ದಲಿತ ಹೋರಾಟವೆಂಬುದು ಕರ್ನಾಟಕದಲ್ಲಿ ಸಂಘಟಿತವಾಗಿ ರೂಪಗೊಳ್ಳುವ ಮೊದಲೇ ಹಿಂಗಮಿರೆಯವರು
ಚೆನ್ನಣ್ಣ ವಾಲೀಕಾರ್ ಮತ್ತು ಸೋಮಶೇಖರ್ ಇಮ್ರಾಪೂರ ಅವರನ್ನು ಜೊತೆ ಮಾಡಿಕೊಂಡು `ದಲಿತ`
ಎಂಬ ನಿಯತಕಾಲಿಕೆಯ ಹಲವು ಸಂಚಿಕೆಗಳನ್ನು 1974ರಿಂದಲೇ ಹೊರತಂದಿದ್ದರು. ತೆಲುಗಿನ
ದಿಗಂಬರ ಕಾವ್ಯ, ಮರಾಠಿ ದಲಿತಕಾವ್ಯ ಮತ್ತು ನಾಮದೇವ ಢಸಾಳರಂಥ ಪ್ರಖರ ದಲಿತ ಕವಿಗಳು
ಕನ್ನಡಕ್ಕೆ ಪರಿಚಯವಾದದ್ದೇ ಅದರ ಮೂಲಕ.
1977ರಲ್ಲಿ ಅವರ ಮೂರನೇ ಕವನ ಸಂಗ್ರಹ `ಹದ್ದುಗಳ ಹಾಡು` ಬಿಡುಗಡೆಯಾಯಿತು. ಆ ಮೊದಲು
`ಹುಲ್ಲುಗೆಜ್ಜೆ` (1962) ಹಾಗೂ `ಶಬ್ದ ರಕ್ತ ಮತ್ತು ಮಾಂಸ` ( 1968)
ಪ್ರಕಟವಾಗಿದ್ದವು. `ಹುಲ್ಲುಗೆಜ್ಜೆ`ಯಲ್ಲಿ `ಕಿವುಡು ಭೂಮಿ ಕುರುಡು ಗಾಳಿ/ ಹುಲ್ಲು-
ಗೆಜ್ಜೆ ನಿನದ/ ಒಮ್ಮೆ ಹಸಿರು ಒಮ್ಮೆ ಬರಡು/ ಸುಖ ದುಃಖದ ಮೋದ` ಎಂಬಂಥ ರೂಪಕಗಳು,
`ಅಗ್ನಿ-ಬಂಡೆ ಸುತ್ತುವರಿವ/ಇದೊ ಬದುಕಿನ ಭ್ರಮಣ/ ಸರಸ-ವಿರಸ ಸ್ವಪ್ನ ನೆಯ್ದು/
ಹಾಡುತ್ತಿಹ ಹರಣ` ಎಂಬಂಥ ಸಾಲುಗಳು ಶಕ್ತ ಕವಿಯೊಬ್ಬನ ಆಗಮನವನ್ನು ನಿಸ್ಸಂದೇಹವಾಗಿ
ಸಾರಿದ್ದವು. `ಶಬ್ದ ರಕ್ತ ಮತ್ತು ಮಾಂಸ`ದಲ್ಲಿ ನಿಗಿ ನಿಗಿ ಉರಿಯುವ ಗುಣವುಳ್ಳ ರೂಪಕ-
ಪ್ರತಿಮೆಗಳು, ಬಂಡುಕೋರ ಆಶಯಗಳು, ವಾಸ್ತವದ ಕ್ರೌರ್ಯಗಳು, ವಿಲಕ್ಷಣ ವ್ಯಂಗ್ಯ, ಸ್ಫೋಟಕ
ಸತ್ವ ದಟ್ಟವಾಗಿ ಮೇಳೈಸಿವೆ.
`ಸರಸ್ವತಿಯ ನಗ್ನಪುತ್ಥಳಿ ಸುತ್ತ ಹೂ ಸುರಿದು/ಸ್ವಚ್ಛಂದ ತುಳಿಯುತ್ತಿದ್ದೇವೆ ಹೊಸ ಲಯ,/
ಭಯ, ಶಂಕೆ, ಬಿರುಗಾಳಿ ಹೊರೆಕಟ್ಟಿ ತಂದು/ ಲಿಲಾವು ಮಾಡುತ್ತೇವೆ/ ರಕ್ತದಂಗಡಿ ಹೊಕ್ಕು
ಲೂಟಿ ಮಾಡುತ್ತೇವೆ ಪ್ರತಿಮೆಗಳ` ಮುಂತಾದ ಸಾಲುಗಳು ಅಥವಾ `ಶ್ರದ್ಧೆ ಬಚ್ಚಲಲ್ಲಿ ತೊಯ್ದ
ಭ್ರಮಿಷ್ಟರು ನಾವಲ್ಲ/... ... .../ ಅಂಧೇರನಗರಿಯಾಳ್ವ ಅಪ್ರಾಮಾಣಿಕ ಗಣಕ್ಕೆ/ ಇದೋ
ಎತ್ತಿದ್ದೇವೆ ಕಪ್ಪುಧ್ವಜ`ದಂಥ ಸಾಲುಗಳು ಹಿಂಗಮಿರೆಯೆಂಬ ಕವಿಯೊಳಗೆ ಕುದಿಯುತ್ತಿದ್ದ
ಅನುಭವ ಹಾಗೂ ಅದರ ಅಭಿವ್ಯಕ್ತಿಯ ಒತ್ತಡವನ್ನು ಸೂಚಿಸುತ್ತವೆ.
`ಹದ್ದುಗಳ ಹಾಡು` ನವ್ಯತೆಯಿಂದ ಕಳಚಿಕೊಂಡು ಆನಂತರ ಎಂಬತ್ತರ ದಶಕದುದ್ದಕ್ಕೂ ಕನ್ನಡ
ಕಾವ್ಯಲೋಕದಲ್ಲಿ ಸ್ವಲ್ಪ ವಾಚ್ಯವಾಗಿ ರಾರಾಜಿಸಿದ ದಲಿತ, ಬಂಡಾಯ ಇತ್ಯಾದಿ ನಾಮಾಂಕಿತ
ಪ್ರವೃತ್ತಿಗಳ ಮುನ್ಸೂಚನೆಯಂಥ ಪದ್ಯಗಳನ್ನು ಒಳಗೊಂಡು ಪ್ರಕಟವಾಯಿತು. ಇಲ್ಲಿಯ
ಪದ್ಯಗಳಲ್ಲಿ `ನೆಲದ ಹಾಡು` ಎಂಬುದು ಮುಖ್ಯವಾದುದು. ಅಡಿಗರ ಭೂಮಿಗೀತಕ್ಕಿಂತ ತೀರ
ಭಿನ್ನವಾದ ನೆಲೆಯ ದರ್ಶನವನ್ನು ಈ ಕವಿತೆ ಪ್ರಕಟಿಸಿತು.
70-80ರ ದಶಕಗಳಲ್ಲಿ ಹಿಂಗಮಿರೆಯವರು ಬಹಳಷ್ಟು ಕಾವ್ಯ ಹಾಗೂ ವಿಮರ್ಶೆಯ ಕೃಷಿಯನ್ನು
ಮಾಡಿದರು. ಪುಣೆ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ಪದವಿ ದೊರಕಿಸಿ ಕೊಟ್ಟ ಅವರ
ಮಹಾಪ್ರಬಂಧ `ಕನ್ನಡದಲ್ಲಿ ಶೋಕಕಾವ್ಯ` 1976ರಲ್ಲಿ ಮೈಸೂರು ವಿ.ವಿ. ಕನ್ನಡ ಅಧ್ಯಯನ
ಸಂಸ್ಥೆಯಿಂದ ಪ್ರಕಟವಾಯಿತು. ನವ್ಯಕಾವ್ಯ ವಿಮರ್ಶೆಯ ಕುರಿತಾದ ಇವರ ಕೃತಿ `ಹೊಸಕಾವ್ಯ
ಹೊಸದಿಕ್ಕು`.
ಹಿಂಗಮಿರೆಯವರ ಸಂಪಾದಿತ ಕಾವ್ಯಕೃತಿಗಳೂ ಹಲವಾರಿವೆ. ಅವರು ಸಂಪಾದಿಸಿದ
ಕಾವ್ಯಕೃತಿಗಳಲ್ಲಿ ಬಹುಮುಖ್ಯವಾದುದು `ಹೊಸ ಜನಾಂಗದ ಕವಿತೆಗಳು` ಎಂಬ ಪ್ರಾತಿನಿಧಿಕ
ಅಂಥಾಲಾಜಿ. ಇದು 1970ರಲ್ಲಿ ಪಿ.ಲಂಕೇಶ್ ಸಂಪಾದಿಸಿದ `ಅಕ್ಷರ ಹೊಸ ಕಾವ್ಯ`ಕ್ಕೆ
ಪ್ರತ್ಯುತ್ತರವಾಗಿ ಪ್ರಕಟವಾದದ್ದು.
ಲಂಕೇಶ್ ಸಂಪಾದಿತ ಕೃತಿಯಲ್ಲಿ ಅಡಕವಾದ ಕವಿತೆಗಳು ಸಂಪಾದಕರ ವೈಯಕ್ತಿಕ ಇಷ್ಟಾನಿಷ್ಟಗಳ
ನೆಲೆಯಲ್ಲಿ ಆಯ್ಕೆಯಾದ ಕವಿಗಳ ಕವಿತೆಗಳೆಂಬುದು ಸ್ಪಷ್ಟವಿತ್ತು. ಅಲ್ಲಿದ್ದುದು ಆಯಾ
ಕವಿಗಳ ಪ್ರಾತಿನಿಧಿಕ ಕವಿತೆಗಳಲ್ಲ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ಸಶಕ್ತ
ಕವಿಗಳಿಗೆ ಅದರಲ್ಲಿ ಪ್ರಾತಿನಿಧ್ಯ ದೊರೆತಿಲ್ಲವೆಂಬ ಕಾರಣಕ್ಕೆ ಹಿಂಗಮಿರೆಯವರು
ಪಿ.ಲಂಕೇಶ್ ಅಕಾರಣವಾಗಿಯೋ ಸಕಾರಣವಾಗಿಯೋ ಹೊರಗಿಟ್ಟ ಕವಿಗಳ ಪೈಕಿ 29 ಕವಿಗಳ
ಪ್ರಾತಿನಿಧಿಕವೆನ್ನಬಹುದಾದ ಕವಿತೆಗಳನ್ನು ಅದರ ಮರುವರ್ಷವೇ (1971) ಪ್ರಕಟಿಸಿದರು.
ವರ್ತಮಾನದ ಕಾವ್ಯದ ಕುರಿತ ಸಂಪಾದಕರ ನಿರ್ದಿಷ್ಟ ಪ್ರಶ್ನೆಗಳಿಗೆ ಈ ಎಲ್ಲ ಕವಿಗಳ
ಅನಿಸಿಕೆಗಳನ್ನು ಪ್ರತಿನಿಧಿಸುವ ಉತ್ತರಗಳು ಮತ್ತು ಸಂಪಾದಕೀಯ ಪ್ರಸ್ತಾವನೆಯೊಂದಿಗೆ
ಪ್ರಕಟವಾದ ಈ ಸಂಕಲನದ ಕವಿಗಳಲ್ಲಿ ಹಲವರು ಇಂದಿಗೂ ಸೃಜನಶೀಲ ಜೀವಂತಿಕೆ
ಉಳಿಸಿಕೊಂಡಿದ್ದಾರೆ.
ನಾಟಕ ಹಿಂಗಮಿರೆಯವರು ಸಾಕಷ್ಟು ಕೃಷಿಗೈದ ಇನ್ನೊಂದು ಕ್ಷೇತ್ರ. ತೀರ್ಪು, ನೀಲಾಂಜನೆ,
ಅಹಲ್ಯೆ, ಸಂಗೊಳ್ಳಿ ರಾಯಣ್ಣ ಅವರ ರಂಗಕೃತಿಗಳು. ಕಲಘಟಗಿ ಪರಿಸರದ ಗ್ರಾಮೀಣರ
ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಗೈದ, ಕರ್ನಾಟಕ ಶಾಸನಸಭೆಗೂ ಆಯ್ಕೆಯಾಗಿದ್ದ ಫಾದರ್
ಜೇಕಬ್ ಅವರನ್ನು ಆದರ್ಶೀಕರಿಸಿ `ದೀನದಲಿತರ ನಾಯಕ` ಎಂಬ ನಾಟಕವನ್ನು ಬರೆದರು.
ರಷ್ಯನ್ ಭಾಷೆಯ ಕಾವ್ಯದ ಅನುವಾದ ಮತ್ತು ರೂಪಾಂತರ ಹಿಂಗಮಿರೆ ಅವರ ಇನ್ನೊಂದು ಕೊಡುಗೆ.
ಅಕ್ಷರ ಪ್ರಕಾಶನದಿಂದ ಹಿಂಗಮಿರೆಯವರ `ರಷ್ಯನ್ ಹೊಸ ಕವಿತೆಗಳು` (1973) ಪ್ರಕಟವಾಯಿತು.
ಪುಷ್ಕಿನ್ ಅವರು ಜಿಪ್ಸಿಗಳ ಕುರಿತು ಬರೆದ ಖಂಡಕಾವ್ಯವೊಂದನ್ನು ನಾಟಕಕ್ಕೆ ರೂಪಾಂತರಿಸಿ
`ಅಲೆಮಾರಿಗಳು` ಶೀರ್ಷಿಕೆಯಡಿ ಪ್ರಕಟಿಸಿದರು.
ಅವರ ಸೃಜನಶೀಲ ತುಡಿತಗಳ ಶಿಖರಪ್ರಾಯ ಕೃತಿಯಾಗಿ `ಬುದ್ಧ ಕಾವ್ಯ ದರ್ಶನ` ಮಹಾಕಾವ್ಯ
(2003) ಪ್ರಕಟವಾಯಿತು. ಹಿಂಗಮಿರೆ ಆ ಕಾವ್ಯದ ಉದ್ದೇಶವನ್ನು ಹೇಳಿದ್ದು ಹೀಗೆ: `ಕಾಳು
ತುಂಬಿ ಹೊಡೆಯೆತ್ತಿ ನಿಂತ ಹೊಳಿಸಾಲ ಭೂಮಿಯಂತೆ/ ತುಂಬಿ ಹರಿಯುವಾ ಕೃಷ್ಣೆ-ತುಂಗೆಯರ
ತುಂಬು ಪಾತ್ರದಂತೆ/ ಬುದ್ಧಕಾವ್ಯ ರುಚಿ ಕಲ್ಲುಸಕ್ಕರೆಯ ಅಚ್ಚ ಹರಳಿನಂತೆ/ ಕೊರಡ
ಕೊನರಿಸುವ ಭಾವ ಚಿಮ್ಮಿಸುವ ಜೀವಸತ್ವದಂತೆ...`.
ಸಾವಿರದೈನೂರು ಚತುಷ್ಪದಿಗಳಿಂದ ಕೂಡಿ ಅರವತ್ತು ಅಧ್ಯಾಯಗಳಲ್ಲಿ ಬುದ್ಧನ ಬದುಕು ಸಂದೇಶದ
ದರ್ಶನ ಮಾಡಿಸುವ ಈ ಛಂದೋಬದ್ಧ ಕೃತಿ ಎಚ್.ಆರ್. ಅಮರನಾಥ ಗುರುತಿಸಿದಂತೆ- `ಮತಪ್ರಚಾರದ
ಆವೇಶವಿಲ್ಲದ, ತತ್ಕಾಲೀನತೆಯ ತೆವಲಿಲ್ಲದ, ಜಾನಪದೀಯ ಸತ್ವವನ್ನೂ, ಭಾವಗೀತಾತ್ಮಕತೆಯನ್ನೂ
ಹೊಂದಿದ, ಪೌರಾಣಿಕತೆಯನ್ನು ಕಳಚಿ ಇತಿಹಾಸ ಪ್ರಜ್ಞೆಯಿಂದ ನಿರ್ವಹಿಸಲ್ಪಟ್ಟ ಕಾವ್ಯ`.
ಹಿರಿಯ ಮಗಳ ಬದುಕಿನ ಏರುಪೇರುಗಳ ದುಃಖ, ಇದ್ದ ಎರಡೂ ಗಂಡುಮಕ್ಕಳ ಅಕಾಲಿಕ ಮರಣದಂಥ ದುಃಖ
ದುಮ್ಮಾನಗಳ ನಡುವೆಯೂ ತಮ್ಮ ಕ್ರಿಯಾಶೀಲತೆಯನ್ನು ಸತತವಾಗಿ ಉಳಿಸಿಕೊಂಡು ಕನ್ನಡ
ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ಹಿಂಗಮಿರೆ ಅವರು ಕೊಟ್ಟಿದ್ದಾರೆ. ಹಲವು
ಪ್ರಶಸ್ತಿಗಳು ಅವರಿಗೆ ಸಂದಿವೆ.
`ಪುಷ್ಕಿನ್ ಕವಿತೆಗಳು` ಕೃತಿಗೆ ಸೋವಿಯೆಟ್ ಲ್ಯಾಂಡ್ ನೆಹರೂ ಪಾರಿತೋಷಕ, `ಹೊಸಕಾವ್ಯ
ಹೊಸದಿಕ್ಕು` ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಮೈಸೂರು
ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ
ಗೌರವ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ ಹಿಂಗಮಿರೆಯವರ ಚಿಂತನೆ, ಬರವಣಿಗೆ ಕನ್ನಡ ಸಾಹಿತ್ಯ
ವಿಮರ್ಶೆಯಲ್ಲಿ ಎಷ್ಟರ ಮಟ್ಟದಲ್ಲಿ ಚರ್ಚೆಯಾಯಿತು ಎಂಬುದನ್ನು ನೋಡಿದರೆ
ನಿರಾಶೆಯಾಗುತ್ತದೆ.
ಕನಿಷ್ಠ ಪಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ-ಸಾಹಿತ್ಯ ಪರಿಷತ್ತಿನಂಥ
ಸಾರ್ವಜನಿಕ ಸಂಸ್ಥೆಗಳು ಹಿಂಗಮಿರೆಯವರು ತಮ್ಮ ಹಣ ಹಾಕಿ ತಮ್ಮದೇ `ಯುಗಧ್ವನಿ
ಪ್ರಕಾಶನ`ದಿಂದ ಹೊರತಂದ ಸಹಸ್ರಾರು ಪುಟಗಳಷ್ಟಿರುವ ಸಾಹಿತ್ಯವನ್ನು ಸಮಗ್ರವಾಗಿ
ಪ್ರಕಟಿಸುವ, ಅವರ ಸಾಹಿತ್ಯದ ಕುರಿತ ವಿಚಾರ-ವಿಮರ್ಶೆಗೆ ಚಾಲನೆಕೊಡುವ, ಅವರ
`ಬುದ್ಧಕಾವ್ಯದರ್ಶನ` ಮಹಾಕಾವ್ಯದ ಜನಪ್ರಿಯ ಆವೃತ್ತಿಯನ್ನು ಪ್ರಕಟಿಸಿ ವಿತರಿಸುವ
ಕೆಲಸಗಳನ್ನು ಕರ್ತವ್ಯಪ್ರಜ್ಞೆಯಿಂದ ಮಾಡಬೇಕಿದೆ.
(ಪ್ರಜಾವಾಣಿ, Sunday, 16 September, 2012)
ಕಣ್ಣು ನೆಟ್ಟಿವೆ ಒಣಗಿ ಬಿರಿದ ಭೂಮಿಯ ಮೇಲೆ
ಕಣ್ಣು ನೆಟ್ಟಿವೆ ಮೇಲೆ ಆಕಾಶದತ್ತ
ಉಳುಮೆಯಾಗಿದೆ ಹರಗಿ ಸಿದ್ಧವಾಗಿದೆ ಮಣ್ಣು
ಹನಿಯೊಡೆಯಬಹುದೆಂದು ಮುಗಿಲ ಕಡೆ ಕಣ್ಣು
ಗಾಳಿ ತಂಪೆರಚಿ ಗುಡುಗು ಗದ್ದರಿಸಿ
ಸಿಡಿಸಿಡಿಲ್ ಸಿಡಿದು ಸಿಡಿಲು
ಕೋಲ್ಮಿಂಚು ಫಳಫಳಿಸಿ ಬಿದ್ದ ಬೆಳಕಲ್ಲಿ ಹನಿಯೂ ಇತ್ತೆ?
ಇರಲಿಲ್ಲ ಮೋಡ
ಬೇಸರ ಬೇಡ,ಒಪ್ಪಿದೆ
ಸುಣ್ಣಾ ಕೊಡತೇನ ಸುರಿಯಲೇ ಮಳೆಯೇ
ಎಂದು ಈಗ ಮಕ್ಕಳು ಕುಣಿದು ಕುಪ್ಪಳಿಸುವದಿಲ್ಲ
ಜಾಕ್ ಅಂಡ್ ಜಿಲ್ ರನ್ನು ನೀರು ತರಲು ಬೆಟ್ಟಕ್ಕಟ್ಟಿ ಬಂದು
ಇಗೋ ಈಗ ಕಂಪ್ಯೂಟರ್ ಮುಂದೆ ಧ್ಯಾನದಲ್ಲಿವೆ
ಇಳಿಬಿದ್ದ ಕಿವಿಯೋಲೆ ಮೂಗುತಿಯ ಥಳಕಿನಲೆ
ಉಟ್ಟಿರುವ ಉಡುಗೆಯಲಿ ನೂರು ಕನ್ನಡಿ ಚೂರು
ಲಂಬಾಣಿ ಹೆಣ್ಣುಗಳು ಗುಂಪಾಗಿ ತಿರುಗುತ್ತ ಬಾಗುತ್ತ ಏಳುತ್ತ
ಚಪ್ಪಾಳೆ ತಟ್ಟುತ್ತ ಕರೆಯುತ್ತಿದ್ದರು ಆಗ
ಸೋನೇರೇ ಸುರೀ ಮಳೀ ರಾಜಾ
ಅವರ ಬದುಕೂ ಈಗ ಮಗ್ಗಲು ಬದಲಿಸಿದೆ
ಇಳಿದು ಬಾ ತಾಯಿ ಇಳಿದು ಬಾ ಎಂದು
ಕೊರಳೆತ್ತಿ ಕರೆವವನು ಅವನೊಬ್ಬನಿದ್ದ ಅಂಬಿಕಾತನಯ
ಅವನೀಗ ಇಲ್ಲ
ಜನ ಅಹಂಕಾರದಲ್ಲಿ ಮುಳುಗಿದ್ದಾರೆ
ಅದನ್ನೇ ಹಾಸಿ ಹೊರುತ್ತಿದ್ದಾರೆ
ನೀರು ಗಾಳಿ ಬೆಳಕು ಗಿಡ ಕಲ್ಲು ಗುಡ್ಡ ಕಾಡು
ಎಲ್ಲಾನೂ ಭೋಗಿಸಲು ಗುತ್ತಿಗೆ ಹಿಡಿದು ಬೋಳಿಸುತ್ತಿದ್ದಾರೆ
ರೊಕ್ಕದ ಸಪ್ಪಳದಲ್ಲಿ ಲೀನವಾಗಿದ್ದಾರೆ
ಯಾರ ಬೇಸರ ಯಾರ ಮೇಲೆ,ಮೋಡಗಳೇ
ನೆಲದ ಮಕ್ಕಳ ಮುಖ ನೋಡಿ
ಓಡದಿರಿ ಮೋಡಗಳೇ ದಟ್ಟೈಸಿ ನಿಲ್ಲಿ
ಈ ಸೀಮೆಯಲಿ ಸ್ವಲ್ಪ ಮಳೆ ಸುರಿಸಿ ಹೋಗಿ
( ಜೇಮ್ಸ್ ಕೆಮರೂನ್ ನಿರ್ದೇಶಿತ ಟೈಟಾನಿಕ್ ಚಲನಚಿತ್ರ ತೆರೆಕಂಡ ಹೊಸತರಲ್ಲಿ ನಾನು ಬರೆದ ಈ ನನ್ನ ಕವಿತೆ ಮೊದಲು ೧೯೯೮ ಅಗಸ್ಟ್ ೨ರಂದು "ಪ್ರಜಾವಾಣಿ"ಯಲ್ಲಿ ಪ್ರಕಟಗೊಂಡಿತ್ತು. ನಂತರ ೨೦೦೭ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನನ್ನ "ಕ್ಷಮಿಸು ತಂದೆ" ಸಂಕಲನದಲ್ಲಿ ಸೇರಿತ್ತು. ಟೈಟಾನಿಕ್ ಎಂಬ ಹಡಗು ಮುಳುಗಿ ಇಂದಿಗೆ ನೂರು ವರ್ಷವಂತೆ..ಹಾಗಾಗಿ .., ಓದಿಕೊಳ್ಳಿ.)
ಪ್ರೇಮದೇವತೆ ಎಷ್ಟು ಬ್ರಹ್ಮವರ್ಷ ಬಚ್ಚಿಟ್ಟು
ಪ್ರಣಯೋನ್ಮಾದಕ್ಕೊಪ್ಪಿಸಿದ ಏಂಜೆಲ್
ಹೊಳೆವ ಹೊಂಗೂದಲ ಮುಗ್ಧ ಉದ್ಧಟ ರೋಸ್
ಅವಳಂತರಂಗದ ನೆರಳುಗಳಲ್ಲಿ
ಮೈಯ್ಯ ಹೊರಳುಗಳಲ್ಲಿ ಜಾಕ್
ಕಿತ್ತೆಸೆದ ಐಸಿರಿಯ ನೊಗಗಳ ಧಡಕಿಯಲ್ಲಿ
ಲಂಗ ನಸು ಮೇಲೆತ್ತಿ ಕುಣಿದ ಹೆಜ್ಜೆಯ ಲಯ ಜಾಕ್ ಓ ಜಾಕ್..
ಹುರಿದು ಮುಕ್ಕುವ ಪೋಲಿ ಕಂಗಳ ಜಾಕ್
ಉಸಿರ ಬಿಸಿ ತಾಗಬೇಕು, ಮೈಯ್ಯ
ಮಂಜುಗಡ್ಡೆಗಳು ಕರಗಿ ತೊಡುಗೆ ತೋಯ್ದು
ಅಂಗೈ ತುಂಬಿ ಹೊನ್ನ ಹೊಳಪಿನ ಬೆತ್ತಲೆ
ಬೆರಳುಗಳ ನಡುವೆ ಉಬ್ಬಿ
ತೊಟ್ಟು ಬಿಗಿಗೊಳ್ಳಬೇಕು; ಮೊಗ ಸಣ್ಣಗೆ ಬೆವರಿ ಹೊರಳೆ ಹಿಗ್ಗಿ
ಚೆಂದುಟಿಗಳರೆ ಬಿರಿದು
ಬಾಯ್ದೆರೆದ ಸೀಳು ಬಿರುಸ ಹಂಬಲಿಸುತ್ತ
ಕಣ್ಣಪಾಪೆಗಳಲ್ಲಿ ರಾಗರತಿ ಹೊಯ್ದಾಡಿ
ಲಜ್ಜೆಗೆಟ್ಟು ತುಂಬುವಲ್ಲಿ ತುಳುಕುವಲ್ಲಿ
ಜಲಗಾನ ಹಿಮ್ಮೇಳದಲ್ಲಿ
ವಿಧಿಯೇ! ಘಟನೆ ಘಟಿಸಿದೆ..
ಶಾಪಗ್ರಸ್ತ ಕೋಮಲ ಕೆಳೆತನದ ಜಲಸಮಾಧಿಯ ರಾತ್ರಿ
ನೀರೂ ಮಿಂಚದ ನಿಶಾಂಧಕಾರ
ಎಲ್ಲರೂ ಕೂಗುತ್ತಿರುವಲ್ಲಿ ಯಾರ ಕೂಗಿಗೂ ಆಕಾರವಿಲ್ಲ
ಸಾರ್ಥಕಗೊಳ್ಳುತ್ತಿರುವ ಎರಡು ಹರೆಯಗಳ ಸುತ್ತ
ಸಾವಿನ ಭಾರ ಹೊತ್ತ ಶಬ್ದಗಳ ಹುತ್ತಗಟ್ಟಿ ದಿಕ್ಕೆಟ್ಟು ಚಲಿಸುತ್ತಿವೆ
ಮಾನವಾಕೃತಿಗಳೆ? ಸಾವಿನ ನೆರಳುಗಳೆ?
ಚೀತ್ಕಾರಗಳಿಗೆ ಆಕ್ರಂದನಗಳ ಸಾಂತ್ವನ ನಿರ್ದಯೆಯ ಸಾಕ್ಷಿ
ಚಂದ್ರ ಹೇಡಿ ತಾರೆಗಳ ಬೆಳಕಿಗೆ ತಾಕತ್ತಿಲ್ಲ
ಕಾವಳದಲ್ಲಿ ಕಣ್ಣು ಹಿಗ್ಗಿದಷ್ಟೂ ಆಶೆ ಕುಗ್ಗಿ
ದೇವರೇ, ದಿಗ್ದೆಸೆಗಳಲ್ಲೆಲ್ಲೂ ಸಾವಿಗೂ ಬದುಕಿಗೂ ದಡಗಳೇ ಇಲ್ಲ
ಮೊನ್ನೆ ನಿನ್ನೆಯ ಚಂದ ನೀಲಜಲ ವಿಸ್ತಾರ
ಸಾವಿನ ಜಲಶಯ್ಯೆ ಅಟ್ಲಾಂಟಿಕ್
ನುಂಗಿ ನೊಣೆಯಲು ಹೊಂಚಿ ಶಕ್ತಿಗಳು ಕುಳಿತಂತೆ
ತಳದಿಂದ ಕೇಕೆಗಳು..ಟೈಟಾನಿಕ್ ಟೈಟಾನಿಕ್
ಅಂತಸ್ತಿನ ಅಗೋಚರ ಗೋಡೆಗಳ ಕುಸಿತದಲ್ಲಿ ಪ್ರೇಮ ಚಿಗುರಬೇಕು
ಸಾವಿಂದ ಬದುಕ ಬೇರ್ಪಡಿಸುವ ಗೋಡೆಗಳೊಡೆಯುತ್ತಿವೆ
ನೀರಿನ್ನೂ ನುಗ್ಗಿರದ ಇಂಚಿಂಚು ಸ್ಥಳ ಸ್ವರ್ಗ
ಇನ್ನರೆಗಳಿಗೆ ಬದುಕ ಬರಸೆಳೆದು ಬಿಗಿದಪ್ಪಿ ಎದೆಗವಚಿ
ಇನ್ನೊಂದರೆಗಳಿಗೆ ಸಾವನೊದ್ದು ಬದಿಗೆ ತಳ್ಳಿ ಹಿಂದೆ ನೂಕಿ
ನನ್ನ ಸಂಕಟ
ಚಲನಚಿತ್ರವೆ? ಜೀವನದರ್ಶನವೆ?
ಘಟಿಸಿದವಘಡ ಅರಿವಿಗೆ ದಕ್ಕುವ ನಡುವಿನವಧಿಯ ಅಂತರ
ಕಾಲದ್ದೆ? ಭ್ರಮೆ-ವಾಸ್ತವಗಳದ್ದೆ?
ಅಮಾನುಷ ವೈಶಾಲ್ಯದಲ್ಲಿ
ಮಕ್ಕಳಾಟದ ದೋಣಿಗೆ ಸಮ ಕ್ಷುದ್ರಗೊಂಡು
ಮುಳುಗಿದ್ದು ಹಡಗೆ?
ಅಥವ.. ... ....
ಹಲವಾರು ವೈವಿಧ್ಯಮಯ ಕಂಪನಿಗಳ ಆಫೀಸ್ ಗಳು ಕೇಂದ್ರೀಕೃತಗೊಂಡಿದ್ದ ಬಹುಮಹಡಿ ಕಟ್ಟಡವೊಂದರಲ್ಲಿ ತನ್ನ ಬಾಸ್ ಹೇಳಿದ್ದ ಕೆಲಸ ಮುಗಿಸಿಕೊಂಡು ಹೊರಬಿದ್ದು ಲಿಫ್ಟ್ ಬಳಿ ಸಾರಿ ಸ್ವಿಚ್ ಅದುಮಿ ಅದು ಮೇಲಂತಿಸ್ತಿನಿಂದ ಬರುವದನ್ನು ಮೊಬೈಲ್ ನಲ್ಲಿ ಮಾತಾಡುತ್ತಲೇ ಕಾಯುತ್ತಿದ್ದವಳಿಗೆ ಲಿಫ್ಟ್ ಬಂದದ್ದು, ಅದರ ಬಾಗಿಲು ತೆರೆದುಕೊಂಡದ್ದು ಅಷ್ಟೇ ಗೊತ್ತು..ಫೋನ್ ನಲ್ಲಿ ಮಾತಾಡುತ್ತಲೇ ಒಳಪ್ರವೇಶಿಸಿದ್ದಳು. ಒಳಗೆ ಆಗಲೇ ಒಂದು ವ್ಯಕ್ತಿ ಇದೆ ಎಂಬುದು ಅರಿವಿಗೇನೋ ಬಂದಿತ್ತು, ಅವನ ಮುಖವನ್ನು ಅವಳಿನ್ನೂ ನೋಡನೋಡುತ್ತಿರುವಂತೆಯೇ ಒಂದೆರಡು ಅಂತಸ್ತು ಕೆಳಮುಖ ಚಲಿಸಿದ ಲಿಫ್ಟ್ ಸಣ್ಣದಾಗಿ ಜೆರ್ಕ್ ಆಗಿ ಒಳಗಿನ ಬೆಳಕು ನಂದಿ ನಸುಕತ್ತಲಾಗಿ ನಿಂತು ಬಿಟ್ಟಿತು. ನಿಂತೇ ಬಿಟ್ಟಿತು. ಮೇಲೂ ಇಲ್ಲ, ಕೆಳಗೂ ಇಲ್ಲ. ಎರಡು ಅಂತಸ್ತುಗಳ ಮಧ್ಯೆ..ಎರಡು ನಿಮಿಷ, ಐದು ನಿಮಿಷ, ಹತ್ತು ನಿಮಿಷ.. ನಡು ಮಧ್ಯಾಹ್ನದ ಶಕೆ. ಬೆಳಕಿಲ್ಲ, ಗಾಳಿಯಿಲ್ಲ. ಅವನ ಉಸಿರು ಬಂದು ತನಗೇ ತಾಗುತ್ತಿದೆ ಎನ್ನಿಸಿ ಹಿಂಸೆಯಾಗತೊಡಗಿತು., ಅವನೂ ಚಡಪಡಿಸುತ್ತಿದ್ದ. ಅವನು ಮೇಲೆ ನೋಡುವ, ಅವಳು ಎಡಕ್ಕೆ ನೋಡುವಳು, ಅವನು ಉಫ್ ಎನ್ನುತ್ತ ಕೆಳಗೆ ನೋಡುವ ಅವಳು ಮೇಲೆ ನೋಡುವಳು. "ಉಫ್ ಇಟ್ ಇಸ್ ಸೋ ಸಫೋಕೇಟಿಂಗ್.."ಅವನೆಂದ. ಲಿಫ್ಟ್ ಸ್ಥಗಿತವಾಗಿ ನಿಂತು ಆಗಲೇ ಇಪ್ಪತ್ತು ನಿಮಿಷ ಕಳೆದಿತ್ತು. ಪರ್ಯಾಯ ವಿದ್ಯುತ್ ಪೂರೈಕೆ ವ್ಯವಸ್ಥೆಗೇನಾಗಿದೆ ರೋಗ ಎಂದು ಯೋಚಿಸಿದ ಅವಳು ಆ ಕತ್ತಲೆ,ನಿರ್ವಾತ ಹಾಗೂ ಶಾಖದಿಂದ ಕುದ್ದು ಹೋಗುತ್ತೇನೆನ್ನಿಸಿ "ಇಟ್ ಇಸ್ ಸಫೋಕೇಟಿಂಗ್" ಎಂದಳು. ಮತ್ತೆ ಸಮಯ ಕಳೆಯಿತು.
ನಾಲ್ಕಾರು ಅಡಿಯ ಆ ವಿಸ್ತಾರದಲ್ಲೇ ದೃಷ್ಟಿಗೆ ದೃಷ್ಟಿ ತಾಗದ ಹಾಗೆ ಕಾಳಜಿ ವಹಿಸಿದಂತೆ ಅವನು ಅತ್ತ ನೋಡುವ ಇವಳು ಇನ್ನೆಲ್ಲೋ ನೋಡುವಳು.."ನನಗೆ ಉಸಿರು ಕಟ್ಟಿದಂತಾಗುತ್ತಿದೆ" ಅವಳೆಂದಳು. ಮತ್ತೆ ಸ್ವಲ್ಪ ಹೊತ್ತು ಕಳೆಯಿತು..."ಉಫ್, ಉಸಿರು ಕಟ್ಟಿದಂತಾಗುತ್ತಿದೆ ನನಗೆ.." ಎಂದನವ. ಪರಸ್ಪರ ಕಿತ್ತಾಡಿಕೊಂಡಾಗೆಲ್ಲ ಇದೇ ಮಾತನ್ನು ನೂರಾರು ಸಲ ಅಂದಿದ್ದರವರು ತಮ್ಮ ವಿವಾಹ ವಿಚ್ಛೇದನಕ್ಕೆ ಮುಂಚಿನ ಹತ್ತಾರು ತಿಂಗಳುಗಳ ಅವಧಿಯಲ್ಲಿ.
ಹಾಡು ನರ್ತನ ಕುಣಿತ ಕುಡಿತ
ಕಿವಿಗಡಚಿಕ್ಕುವ ಸದ್ದು ಸಂಗೀತ, ನಡುವೆ
ಸುದ್ದಿಮಾಧ್ಯಮ.. ಅಲ್ಲಿ,
ಎಂತೆಂಥವೋ ಸಾವು
ಉತ್ತರ ಹಿಂದುಸ್ತಾನದಲ್ಲಿ ಮೈ ಕೊರೆವ ಚಳಿಗೆ
ನಿನ್ನೆ ವರೆಗೆ
ಸತ್ತವರು ನೂರಿಪ್ಪತ್ತು ,ಅತ್ತವರ
ಲೆಕ್ಕ ಇಲ್ಲ ಯಾವ ಸರಕಾರಿ ಆಡಿಟ್ ನಲ್ಲೂ
ಮನುಷ್ಯದೇಹಗಳು ಅಂಕಿಗಳಾಗುತ್ತ ಸಂಖ್ಯೆಗಳಾಗುತ್ತ
ಇಂದು ಸಂಖ್ಯೆ ನೂರೈವತ್ತು.,ದಯವಿಟ್ಟು
ಅವು ಚಳಿಗಾಳಿಯ ಸಾವುಗಳೆನ್ನದಿರಿ
ಸತ್ಯವಾಗಿ
ಬಡತನದ ಸಾವುಗಳೆನ್ನಿ
ಸುಂದರ ಸುಸಂಸ್ಕೃತ ಭಾರತಕ್ಕೆ ಬೇಡದ ಕಿರಿಕಿರಿಗಳ ಸಾವುಗಳೆನ್ನಿ
ಕರುಳ ತುಂಬ ವಿದೇಶಿ ಮದ್ಯ ಹನಿಸಿಕೊಂಡು
ಹತ್ತಿಪ್ಪತ್ತು ಚಪಾತಿ ತಿಂದು
ಹಾಸಿಗೆ ತುಂಬ
ಹೊರಳಿ ಕಾಮದಾಟ ಆಡಿ ತಣಿದು ಮೈ ತುಂಬ
ರಜಾಯಿ ಹೊದ್ದು ಮಲಗುವವರು ಚಳಿಗೆ ಸಾಯರು,
ಅದಕ್ಕೆ
ದಿಟವಾಗಿ ಅವುಗಳ ಗಟ್ಟಿ ಹೊದ್ದಿಕೆ ಇಲ್ಲದೆ ಸೆಟೆದ ದೇಹಗಳ ಸಾವೆನ್ನಿ
ಸ್ವತಂತ್ರ ಭಾರತದ ನಿರೀಕ್ಷೆಗಳ ಸಾವೆನ್ನಿ
ಮನುಷ್ಯರ ನಮ್ರ ಕನಸುಗಳ ಸಾವು, ಸಣ್ಣ-ಪುಟ್ಟ ಆಶೆಗಳ ಸಾವು
ಕೊನೆಗೆ ಯಾರಿಗೂ ಏನನ್ನೂ ಹೇಳಿಕೊಳ್ಳಲಸಾಧ್ಯವಾದ ಸ್ಥಿತಿಯ
ಮುಖ ಮುಚ್ಚಿ ಅತ್ತ ಭಾಷೆಯ ಸಾವೆನ್ನಿ, ದಯವಿಟ್ಟು...
ಹಸಿವಿನ ಸಾವೆನ್ನಿ
ಕೇಳಿಸಿಕೊಳ್ಳಿ ಕ್ಷೀಣವಾಗಿ ಬಹಳ ಧ್ವನಿಗಳಿವೆ
ಕೊನೆಯುಸಿರೆಳೆಯುತ್ತ ಅವು ಹಾರೈಸುತ್ತಿರಬಹುದು.., ಕೇಳಿಸಿಕೊಳ್ಳೋಣ,
"ಹೊಸ ವರ್ಷ ನಿಮಗೆ ಹರುಷ ತರಲಿ.. .. ..".
ಚರಿತ್ರೆಯ ವಿದ್ಯಮಾನಗಳನ್ನು ತೆಳುವಾದ ಗ್ರಹಿಕೆಗಳಲ್ಲಿ ಸರಳಗೊಳಿಸಿ ಆತುರಾತುರದ ತೀರ್ಮಾನಗಳನ್ನು ಹರಿಬಿಡುವ ಪ್ರವೃತ್ತಿ ಈಗ ಸಾಮಾನ್ಯರಲ್ಲಷ್ಟೆ ಅಲ್ಲ, ವಿದ್ವಜ್ಜನರಲ್ಲೂ ಸಾಮಾನ್ಯ. ಮೊದಲೆಲ್ಲ ಚರಿತ್ರೆಯ ಹೊಸ ಶೋಧ ವಿದ್ವತ್ಪತ್ರಿಕೆಗಳ ಪುಟಗಳಲ್ಲಿ ಪರಿಣತರ ನಡುವಿನ ಸಂವಾದವಾಗಿ, ಗಹನವಾದ ಚಿಂತನ-ಮಂಥನವಾಗಿ ಅಧಿಕೃತತೆಯನ್ನು ಪಡೆದುಕೊಳ್ಳುತಿತ್ತು. ಈಗ ಮಾಧ್ಯಮಗಳ ಭರಾಟೆ. ಮಾಧ್ಯಮಗಳು ರಂಜನೀಯವಾಗಿ ವಿಷಯವನ್ನು ಹಿಗ್ಗಿಸಿ ಸಂಬಂಧಪಟ್ಟವರನ್ನು (ಪಡದವರನ್ನೂ) ಮಾತಿಗೆಳೆಯುತ್ತವೆ, ಮಾತಿಗೆಳೆಯಲ್ಪಟ್ಟವರು ಮಾತಾಡುತ್ತ ಹೋಗುತ್ತಾರೆ. ಮಾತನಾಡಬೇಕಾದ ವಿಷಯದ ಕುರಿತ ಮೂಲಮಾಹಿತಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆಯೇ ಎಂಬ ಪ್ರಶ್ನೆ ಅವರನ್ನು "ಅನಗತ್ಯ"ವಾಗಿ ಬಾಧಿಸಿ ವಿಚಲಿತಗೊಳಿಸುವದಿಲ್ಲ.
ಕಳೆದ ವರ್ಷ (೨೦೧೦) ಆಗಸ್ಟ್ ಮಾಸಾಂತ್ಯದಲ್ಲಿ ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಲಸದ ಮೇಲೆ ಹೋದ ಸಂದರ್ಭ ನನಗೆ ಕನ್ನಡದ ವಾರ್ತಾವಾಹಿನಿಯೊಂದರಿಂದ ಫೋನ್ ಬಂತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ಅಲ್ಲಿಯ ಪುರಸಭೆಯವರು ಆಗಸ್ಟ್ ೨೮ರ ಶನಿವಾರದಂದು ಚರಂಡಿಯೊಂದನ್ನು ಅಗಲಗೊಳಿಸಲು ಅಗಸಿ ಓಣಿಯಲ್ಲಿ ಅಗೆಯುತ್ತಿದ್ದಾಗ ಇಪ್ಪತ್ತಕ್ಕಿಂತ ಹೆಚ್ಚು ಮಾನವ ತಲೆಬುರುಡೆಗಳು ಸಿಕ್ಕಿದ್ದಾಗಿಯೂ ನಂತರ ೩೧ರಂದು ಮಂಗಳವಾರ ಮತ್ತಷ್ಟು ತಲೆಬುರುಡೆಗಳು ಸಿಕ್ಕು ಅವುಗಳ ಸಂಖ್ಯೆ ಸರಿ ಸುಮಾರು ನೂರನ್ನು ಮುಟ್ಟಿದ್ದಾಗಿಯೂ ಆ ಕುರಿತು ಒಂದು ಚರ್ಚೆಯನ್ನು ಆ ಚಾನೆಲ್ ನ (ಸುವರ್ಣ ಟಿವಿ ಅಥವಾ ಟಿವಿ 9 ಯಾವುದೆಂದು ಖಚಿತವಾಗಿ ನೆನಪಿಲ್ಲ) ಸ್ಟುಡಿಯೋದಲ್ಲಿ ಇಟ್ಟುಕೊಂಡಿರುವದಾಗಿಯೂ ನಾನು ಬರಬೇಕೆಂದೂ ಅವರು ಹೇಳಿದರು. ನಾನಿರುವದು ಕೋಣನಕುಂಟೆಯಲ್ಲಿ ಎಂದಾಗ ವಾಹನ ಕಳಿಸುತ್ತೇವೆ ಎಂದರು. ಅಣ್ಣಿಗೇರಿಯಲ್ಲಿ ಜನ ಭಯಭೀತರಾಗಿದ್ದಾರೆಂದರು, ಆದಕಾರಣ ನಾನು ಬರಬೇಕೆಂದರು.
ಇದ್ದಕ್ಕಿದ್ದಂತೆ ನೂರಾರು ತಲೆಬುರುಡೆ ಒಂದೇ ಕಡೆ ಸಿಕ್ಕರೆ ಯಾರಿಗೆ ಭಯವಾಗುವದಿಲ್ಲ? ಆದರೆ ನಾನು ವಿಶ್ವವಿದ್ಯಾಲಯದಲ್ಲಿ ನನ್ನ ಕೆಲಸವನ್ನು ಇನ್ನೂ ಬಾಕಿ ಉಳಿಸಿದ್ದೆ, ಅಂದೇ ರಾತ್ರಿ ಧಾರವಾಡಕ್ಕೆ ಮರಳುವದೂ ಇತ್ತು. ಅದಕ್ಕಿಂತ ಹೆಚ್ಚಾಗಿ ಅಗೆದು ಹೊರತೆಗೆದ ಬುರುಡೆಗಳ ತಲೆ ಬುಡ ಗೊತ್ತಿಲ್ಲದೆ ಬರೀ ಅವುಗಳ ವಿಜುಅಲ್ಸ್ ನೋಡಿ ಊಹಾಪೋಹಕ್ಕಿಂತ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಿರಲಿಲ್ಲ. (ಆಮೇಲೆ ಧಾರವಾಡಕ್ಕೆ ಮರಳಿದ ನಂತರ ಆ ವಾಹಿನಿಯಲ್ಲಿ ಪ್ರಸಾರವಾದ, ನನ್ನ ಶಿಷ್ಯೋತ್ತಮ ಡಾ.ಎಸ್.ಕೆ.ಅರುಣಿ ಮತ್ತಿತರರು ಭಾಗವಹಿಸಿದ್ದ, ಚರ್ಚೆಯಲ್ಲಿ ಆದದ್ದು ಮತ್ತು ನಂತರ ಕೂಡ ವರ್ಷಗಟ್ಟಲೇ ಆಗುತ್ತ ಬಂದದ್ದು ಊಹಾಪೋಹವೇ.)
ಊಹಾಪೋಹಕ್ಕಿಂತ ಹೆಚ್ಚಿನ ಅರ್ಥಪೂರ್ಣತೆಯ ಆಯಾಮ ಈ ವಿಷಯಕ್ಕೆ ದಕ್ಕಬೇಕೆಂದರೆ ಮೊದಲು ಆಗಬೇಕಾಗಿದ್ದುದು ಅವುಗಳ ಕಾಲನಿಷ್ಕರ್ಷೆ. ಅದೇ ಆಗಿರಲಿಲ್ಲ. ಅದರ ಗೈರುಹಾಜರಿಯಲ್ಲಿ ಹಲವರು ಗಾಳಿಯಲ್ಲೇ ಕೈಕಾಲು ಬೀಸತೊಡಗಿದ್ದರು. ಗಂಡಹೆಂಡತಿ ಜಗಳ, ಯಾವನೋ ಪುಡಿಕಳ್ಳನನ್ನು ನಾಲ್ಕಾರು ಜನ ಹಿಡಿದು ತದಕುವದೇ ಮೊದಲಾದ ಸಾಮಾನ್ಯ ವಿಷಯಗಳನ್ನೇ ರೋಚಕಗೊಳಿಸಿ ಮುಕ್ಕಾಲು ಗಂಟೆ ಪ್ರಸ್ತುತ ಪಡಿಸುವ ಸುದ್ದಿಮಾಧ್ಯಮಗಳು ನಿಜಕ್ಕೂ sensational ಆದ ಈ ವಿಷಯದ ಬೆನ್ನುಬಿದ್ದದ್ದು ಸೋಜಿಗವೇ? ತರಹೇವಾರಿ ಕಥೆಗಳೂ ವಿವರಣೆಗಳೂ ಓಲಾಡಿ ತೇಲಾಡತೊಡಗಿದವು. ಸರ್ವಪ್ರಥಮವಾಗಿ ರಂಗಪ್ರವೇಶ ಮಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯ ಪ್ರಭಾರಿ ನಿರ್ದೇಶಕ ರು.ಮ.ಷಡಕ್ಷರಯ್ಯನವರು ಈ ಬುರುಡೆಗಳ ಚರಿತ್ರೆಗೊಂದು ಗತಿಕಾಣಿಸುವ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡು ಚಾಲುಕ್ಯ ಚೋಳರ ಮಧ್ಯೆ ಕೊಪ್ಪಳದ ಬಳಿ ನಡೆದ ಕದನವೊಂದರಲ್ಲಿ ಹಲವಾರು ಜನರು ಕೊಲ್ಲಲ್ಪಟ್ಟಿದ್ದರೆಂದು ನಂಬಲು ಬೇಕಾದಷ್ಟು ಕಾರಣಗಳಿವೆ ಎಂದೂ ಆ ಸಂದರ್ಭದಲ್ಲಿ ಅಣ್ಣಿಗೇರಿಯಲ್ಲಿ ಒಂದು ದೇವಾಲಯ ಅಗ್ನಿಗಾಹುತಿಯಾಗಿತ್ತೆಂದೂ ಸ್ಮಶಾನದಿಂದ ಸಂಗ್ರಹಿಸಲ್ಪಟ್ಟ ಈ ಮಾನವ ತಲೆ ಬುರುಡೆಗಳು ವಾಮಾಚಾರಕ್ಕೆ ಅಥವಾ ಮಾಟ-ಮಂತ್ರದಂಥ ಉದ್ದೇಶಗಳಿಗೆ ಬಳಕೆಯಾಗಿದ್ದವು ಎಂದೂ ಅರೆ ಇತಿಹಾಸ ಅರೆ ಪುರಾಣಭರಿತ ವಿವರಣೆಯೊಂದನ್ನು ನೀಡಿ ಹಸನ್ಮುಖರಾದರು. ಈಗಿನ ಯುಗಧರ್ಮಕ್ಕನುಗುಣವಾಗಿ ಮಾಟ ಮಂತ್ರಗಳ ಈ ವಿವರಣೆ ವಿದ್ಯುನ್ಮಾನ ಮಾಧ್ಯಮಗಳ ಕಿವಿಗೂ ಬಲು ಇಂಪಾಗಿ ಕೇಳಿಸಿತು. ಮಾಟ ಮಂತ್ರಗಳಿಗೆ ಅವು ಬಳಕೆಯಾಗಿದ್ದವೆಂಬುದಕ್ಕೆ ಏನು ಆಧಾರ? ಷಡಕ್ಷರಯ್ಯನವರು ಹೇಳುತ್ತಿದ್ದಾರಲ್ಲ, ಅದೇ ಆಧಾರ! ಅವರಿಗೆ ಅವರೇ ಪ್ರಮಾಣು!! ಜಿಲ್ಲಾಧಿಕಾರಿಗಳಿಗೆ ಅವರೊಂದು ವರದಿಯನ್ನೂ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲು ಕೊಟ್ಟರು. ಮಾಧ್ಯಮದವರು ಕೇಳಿದಾಗ ಜಿಲ್ಲಾಧಿಕಾರಿ ದರ್ಪನ್ ಜೈನ್ ಅವರು ತಾವು ಅಂಥ ವರದಿಯನ್ನು ಸಿದ್ಧಪಡಿಸುವಂತೆ ಯಾರನ್ನೂ ಕೇಳಿಲ್ಲವೆಂದೂ ಸ್ವಯಂಪ್ರೇರಿತರಾಗಿ ಅವರೇ ವರದಿಯನ್ನು ಸಲ್ಲಿಸಿದ್ದಾರೆಂದೂ ಹೇಳಿದರು!
ಧಾರವಾಡ ಜಿಲ್ಲಾಧಿಕಾರಿಗಳು ಅವುಗಳ ಕಾಲನಿಷ್ಕರ್ಷೆಯ ಸಾಧ್ಯತೆಯ ಕುರಿತು ಹೈದರಾಬಾದಿನ CDFD ಯನ್ನು (ಸೆಂಟರ್ ಫಾರ್ ಡಿ.ಎನ್.ಎ ಫಿಂಗರ್ ಪ್ರಿಂಟಿಂಗ್ ಎಂಡ್ ಡೈಗ್ನಾಸ್ಟಿಕ್ಸ್) ಸಂಪರ್ಕಿಸಿದಾಗ ತಲೆಬುರುಡೆಗಳ ಕಾಲನಿಷ್ಕರ್ಷೆಯಲ್ಲಿ ಕಾರ್ಬನ್ ಡೇಟಿಂಗ್ ಟೆಸ್ಟ್ ಪ್ರಕ್ರಿಯೆಗೆ ಅಗತ್ಯವಾದ ಸಾಮರ್ಥ್ಯ ತನಗಿಲ್ಲ ಎಂದು ಆ ಸಂಸ್ಥೆ ನಿವೇದಿಸಿಕೊಂಡಿತು. ಈ ಮಧ್ಯೆ ಕರ್ನಾಟಕದ ಪುರಾತತ್ವ ಹಾಗೂ ವಸ್ತುಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕ ಆರ್.ಗೋಪಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ತಲೆಬುರುಡೆಗಳು ದೊರೆತ ಸ್ಥಳವನ್ನು ಸಂರಕ್ಷಿತ ಸ್ಥಳವಾಗಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅನುಮತಿ ದೊರೆತ ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ.ಎಸ್.ಕೃಷ್ಣಮೂರ್ತಿ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಹಾಗೂ ಶಾಸನಶಾಸ್ತ್ರ ವಿಭಾಗದ ಡಾ.ಎಸ್.ವಿ.ಪಾಡಿಗಾರ್ ಮತ್ತು ಪುರಾತತ್ವ ಇಲಾಖೆಯ ಕೆಲವರ ಒಂದು ತಂಡ ರಚಿಸಿ, ಈ ವರ್ಷದ ಜನವರಿಯಲ್ಲೆಂದು ಕಾಣುತ್ತದೆ, ಉತ್ಖನನ ಕೈಗೊಂಡರು. ಆ ಅಗೆತದಲ್ಲಿ ಒಂದೇ ದಿನದಲ್ಲಿ ಮತ್ತೆ ನಾನೂರೈವತ್ತಕ್ಕಿಂತ ಹೆಚ್ಚು ತಲೆಬುರುಡೆಗಳು, ಇತರೆ ಅವಯವಗಳ ಅವಶೇಷಗಳು ಆ ಪರಿಸರದಲ್ಲಿ ದೊರೆತು ಇಡೀ ಪ್ರಕರಣದ ರೋಚಕತೆ ಹಾಗೂ ನಿಗೂಢತೆ ಮತ್ತಷ್ಟು ವೃದ್ಧಿಸಿ ಮಾಧ್ಯಮಗಳು ಪ್ರಶ್ನೆಗಳನ್ನು ಕೇಳಿದ್ದೇ ಕೇಳಿದ್ದು. ಉತ್ಖನನ ಮುಗಿದಾದ ಮೇಲೆ ಜಿಲ್ಲಾಧಿಕಾರಿಯವರು ೧೫.೬ ಮೀ. ಉದ್ದ ಹಾಗೂ ೧.೭ಮೀ. ಅಗಲದ ಸ್ಥಳದಲ್ಲಿ ೪೭೧ ತಲೆಬುರುಡೆಗಳು ದೊರೆತಿದ್ದಾಗಿಯೂ, ಮಾನವ ಬುರುಡೆಗಳು ಕೆಳದವಡೆಗಳಿಲ್ಲದೆ ಬರೀ ಮೇಲ್ಭಾಗದಿಂದ ಕೂಡಿದ್ದುದಾಗಿಯೂ ವಿವಿಧ ದಿಕ್ಕುಗಳಿಗಭಿಮುಖವಾಗಿ ಅವುಗಳನ್ನು ನೀಟಾಗಿ ಜೋಡಿಸಿಟ್ಟಂತೆ ಇದ್ದುದಾಗಿಯೂ, ಒಂದು ಸಾಲು ಕಣ್ಮರೆಯಾಗಿದ್ದು ಅದು ಗಟಾರಕ್ಕಾಗಿ ಅಗೆಯುವ ಪ್ರಕ್ರಿಯೆಯಲ್ಲಿ ಆಗಿರಬಹುದೆಂದೂ ವಿವರಗಳನ್ನು ನೀಡಿದ್ದರು. ಒಟ್ಟು ಆ ನೆಲೆಯಲ್ಲಿ ಸುಮಾರು ೬೦೦ ತಲೆಬುರುಡೆಗಳು ಇರುವದಾಗಿ ಅಂದಾಜು ಮಾಡಲಾಯಿತು.
ಈ ನಡುವೆ ಇತಿಹಾಸದ ಪುಸ್ತಕಗಳನ್ನು, ಗೆಝೆಟಿಯರಗಳನ್ನು ತಿರುವಿಹಾಕಿ, ಶಾಸನಗಳನ್ನು ಹುಡುಕಿ ನೋಡಿ ಅಣ್ಣಿಗೇರಿಯನ್ನು ಕೇಂದ್ರವಾಗಿಸಿಕೊಂಡು ಆ ಪ್ರದೇಶದಲ್ಲಿ ನಡೆದ ಯುದ್ಧ-ಕಾಳಗ-ಬಂಡಾಯದ ವಿವರಗಳನ್ನು ಕಲೆಹಾಕಿ ಈ ಬುರುಡೆಗಳಿಗೂ ತಾವು ಹುಡುಕಿ ತೆಗೆದ ವಿವರಗಳಿಗೂ ತಾಳೆ ಹಾಕುವ ಕೆಲಸದಲ್ಲಿ ಸ್ಥಳೀಯ ವಿದ್ವಾಂಸರು, ಕಾಲೇಜು ವಿಶ್ವವಿದ್ಯಾಲಯಗಳ ಕೆಲ ಕನ್ನಡ ಅಧ್ಯಾಪಕರುಗಳು ನಿರತರಾಗಿದ್ದರು. ಒಬ್ಬರು ಚಾಲುಕ್ಯರ ಕಾಲದ ಯುದ್ಧಗಳಿಗೆ ತಳಕು ಹಾಕಿದರು, ಇನ್ನ್ಯಾರೋ ಬ್ರಿಟಿಷ್ ವಿರೋಧಿ ಬಂಡಾಯಕ್ಕೆ ಜೋಡಿಸಿದರು, ಮತ್ತ್ಯಾರೋ ಕೆಲ ಶತಮಾನಗಳ ಹಿಂದೆ ಪ್ಲೇಗ್ ರೋಗಕ್ಕೆ ಬಲಿಯಾದವರ ರುಂಡಗಳೆಂದರು. ಇದು ಒಂದು ಅಂತರ್-ಶಿಸ್ತೀಯ ಅಧ್ಯಯನದ ನೆಲೆಯಲ್ಲಿ ಚರ್ಚಿತವಾಗಬೇಕಾದ ನಿರ್ಣಿತವಾಗಬೇಕಾದ ವಿಷಯವೆಂಬುದು, ತಲೆಬುರುಡೆಗಳ ಕಾಲ ನಿರ್ಣಯ ವೈಜ್ಞಾನಿಕವಾಗಿ ಅತ್ಯಂತ ಸುಸಜ್ಜಿತ ಪ್ರಯೋಗಶಾಲೆಗಳಲ್ಲಿ ನಡೆದು ತೀರ್ಮಾನವಾಗಬೇಕೆಂಬುದು, ಮೊದಲಾಗಿ ಆ ವಿಷಯ ತೀರ್ಮಾನವಾದ ನಂತರವಷ್ಟೇ ನಿಖರವಾಗಿ ಏನನ್ನಾದರೂ ಹೇಳಲು ಸಾಧ್ಯವೆಂಬುದು ಈ ಪಂಡಿತರನ್ನು "ಅನಗತ್ಯವಾಗಿ" ಬಾಧಿಸಿ ವಿಚಲಿತಗೊಳಿಸಲಿಲ್ಲ. ದಿನಕ್ಕೊಂದರಂತೆ ದಿನಕ್ಕೊಬ್ಬರು ಹೇಳಿಕೆ ಕೊಡುತ್ತ ಅಣ್ಣಿಗೇರಿ "ತಲೆಬುರುಡೆಗಳ ಇತಿಹಾಸ"ವೆಂಬುದು "ಬುರುಡೆಪುರಾಣ"ವಾಗುತ್ತ ಹೋಯಿತು.
ಅವು ದೊರೆತ ಆರಂಭ ಹಂತದಿಂದಲೂ ಅಗೋಚರ ಪ್ರವಾಹದಂತೆ "ಇಂಥ"ದೊಂದು ಗ್ರಹಿಕೆ ಇದ್ದೇ ಇತ್ತಲ್ಲ. ಉತ್ಖನನದಲ್ಲಿ ಭಾಗಿಯಾಗಿದ್ದ ಡಾ. ಕೃಷ್ಣಮೂರ್ತಿಯವರು ಈ ತಲೆಬುರುಡೆಗಳ ಶೋಧವನ್ನು ಒಂದು ನರಮೇಧವೆಂದು ವ್ಯಾಖ್ಯಾನಿಸಿದರು. ಅಂಗಾಂಗಗಳ ವಿಚ್ಛಿನ್ನತೆ ನೋಡಿದರೆ ಇದು ಸೇಡಿನಿಂದ ಕೂಡಿದ ಸಾಮೂಹಿಕ ಹತ್ಯೆ ಎಂಬುದನ್ನು ಸೂಚಿಸುತ್ತದೆ ಎಂದರು. ದಿನಪತ್ರಿಕೆಗಳಲ್ಲಿ ಈ ರುಂಡಗಳು ಸಾಮೂಹಿಕ ನರಮೇಧದ ಪುರಾವೆ ಎಂಬ ವರದಿಗಳು ಬರತೊಡಗಿದವು.
ಜಿಲ್ಲಾಧಿಕಾರಿಗಳು ಅದು ಸ್ಮಶಾನ (burial ground) ಆಗಿರುವದು, ಅಷ್ಟು ದೊಡ್ಡ ಸಂಖ್ಯೆಯಲ್ಲಿ ತಲೆಬುರುಡೆಗಳು ಆ ಸ್ಥಳದಲ್ಲಿ ದೊರೆತಿರುವದು, ವ್ಯವಸ್ಥಿತವಾಗಿ ಅವುಗಳನ್ನು ಹೂಳಲಾಗಿರುವದು, ಬರೀ ರುಂಡಗಳಷ್ಟೇ ಇರುವದು ಇವೆಲ್ಲ ಒಂದು ಸಮೂಹಹತ್ಯೆಯ ಸಾಧ್ಯತೆಯತ್ತ ಬೆರಳು ಮಾಡುತ್ತದೆ ಆದರೆ ಅದು ಯಾವಾಗ ಆಯಿತು, ಅದು ಯಾರದ್ದು, ಹಾಗೆ ರುಂಡ ಕಡಿದ ಸಂದರ್ಭ ಏನಾಗಿತ್ತು ಈ ಕುರಿತು ನಾವು ನಿಖರವಾಗಿ ಹೇಳುವದು ಈಗ ಅಸಾಧ್ಯ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಎಪ್ರಿಲ್ ೨೦ರಂದು ಇದನ್ನು ಟಿವಿ 9 ಬಿತ್ತರಿಸಿತು. ಅಣ್ಣಿಗೇರಿಯಲ್ಲಿ ಧಾರ್ಮಿಕ ನರಮೇಧವೊಂದು ನಡೆದ ಕ್ರಿ. ಶ.೧೩ನೇ ಶತಮಾನದಿಂದ ಹಿಡಿದು ಆದಿಲ್ ಶಾಹಿ ಸೈನ್ಯ ಇಲ್ಲಿ ನೂರಾರು ಜನರನ್ನು ಕೊಂದ ೧೫ನೇ ಶತಮಾನದ ಒಂದು ತೇದಿಯವರೆಗೆ ನಮಗೆ ಹಲವಾರು ಪುರಾವೆಗಳಿವೆ ಎಂದು ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕರು ಹೇಳಿದ್ದಾಗಿ ಪತ್ರಿಕೆಗಳು ವರದಿ ಮಾಡಿದವು. ಆದರೆ ನೂರಾರು ವರ್ಷಗಳ ಹಿಂದೆ ಏನಾಗಿತ್ತು ಎಂದು ಊಹಾಪೋಹ ಮಾಡುವ ಬದಲು ರೇಡಿಯೋಕಾರ್ಬನ್ ಕಾಲನಿಷ್ಕರ್ಷೆ ವಿಧಾನದ ವರದಿ ಬರುವವರೆಗೆ ಕಾಯುವದನ್ನು ತಾವು ಇಷ್ಟಪಡುವದಾಗಿ ನಿರ್ದೇಶಕರು ಹೇಳಿದರು. ಅಂದರೆ ಈ ಎಲ್ಲ ಮಾತುಗಳು ಭುವನೇಶ್ವರಕ್ಕೆ ಕಾಲನಿಷ್ಕರ್ಷೆಗಾಗಿ ಸ್ಯಾಂಪಲ್ ಕಳಿಸಿದ ನಂತರ ಆದರೆ ಅದರ ಫಲಿತಾಂಶ ಬರುವದಕ್ಕೆ ಮೊದಲೇ ಮಾಡಲಾದ ಊಹಾಪೋಹಗಳು!
ಸದ್ಯ, ಕರ್ನಾಟಕದ ಪುಣ್ಯ. ಇಂಥದ್ದಕ್ಕೆ ಕಾಯ್ದು ಕುಳಿತಂತೆ ಸಾಮಾಜಿಕ ರಾಜಕೀಯ ಉದ್ದೇಶಕ್ಕೆ ಇಂಥವುಗಳನ್ನು ಬಳಸಿಕೊಳ್ಳಲೆಳಸುವ ಶಕ್ತಿಗಳು "ಹಾ ಹಾ ಖಡೆ ಖಡೆ" ಎಂಬಂತೆ ಎದ್ದು ನಿಲ್ಲಲಿಲ್ಲ, ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಲಿಲ್ಲ. ...ಕೊನೆಗೂ ಭುವನೇಶ್ವರದ ಇನ್ಸ್ಟಿಟ್ಯೂಟ್ ಆಫ್ ಫಿಜಿಕ್ಸ್ ಗೆ ಕಳಿಸಲಾದ ತಲೆಬುರುಡೆಗಳ ಸ್ಯಾಂಪಲ್ ಗಳು ಎಕ್ಸೆಲೆರೇಟರ್ ಮಾರ್ಕ್ಸ್ ಸ್ಪೆಕ್ಟ್ರೊಮೆಟ್ರಿ ವಿಶ್ಲೇಷಣೆಯ ಕಾರ್ಬನ್ ಡೇಟಿಂಗ್ ಗೆ ಒಳಪಟ್ಟು ಅವು ೬೩೮ ವರ್ಷಗಳಷ್ಟು ಪುರಾತನವಾದವುಗಳೆಂಬ ವರದಿ ಮೇ ತಿಂಗಳ ಹೊತ್ತಿಗೆ ಬಂದು. ಮತ್ತೊಂದು ರೌಂಡ್ ಇತಿಹಾಸಪುಸ್ತಕಗಳ, ಗೆಝೆಟಿಯರುಗಳ, ಶಾಸನಗಳ ಪುಟ ತಿರುವ್ಯಾಟ ಪ್ರಾರಂಭವಾಯಿತು. ಸುಪ್ರಸಿದ್ಧ ವಿದ್ವಾಂಸ ಡಾ. ಎಂ.ಎಂ.ಕಲಬುರ್ಗಿಯವರು ೧೩ನೇ ಶತಮಾನ ತೀವ್ರ ಮತೀಯ (Communal) ಅಸಹಿಷ್ಣುತೆಯ ಕಾಲವೆಂಬ ತಮ್ಮ ನಿರೂಪಣೆಯನ್ನು ಭುವನೇಶ್ವರದ ಈ ಕಾರ್ಬನ್ ಡೇಟಿಂಗ್ ವರದಿ ಸಮರ್ಥಿಸುತ್ತದೆ ಎಂದು, ಈ ರುಂಡಗಳು ವೀರಶೈವರ ಒಂದು ಪ್ರಭೇದದ ಆತ್ಮಾಹುತಿ ದಳಗಳ ಸದಸ್ಯರದ್ದೆಂದು ಹೇಳಿ ಶ್ರೀಶೈಲದಲ್ಲಿ ಹೀಗೇ ರುಂಡಗಳು ಸಾಲುಸಾಲಾಗಿ ಜೋಡಿಸಿಟ್ಟಂತೆ ಚಿತ್ರಿತವಾದ ಶಿಲ್ಪವೊಂದರ ಜೊತೆ ಈ ಪ್ರಕರಣವನ್ನು ಹೋಲಿಸಿದರು. ಜಿಲ್ಲಾಡಳಿತಕ್ಕೆ ಭುವನೇಶ್ವರದ ಸಂಸ್ಥೆ ಕಳಿಸಿದ ವರದಿಯಲ್ಲಿ ತಮ್ಮಲ್ಲಿ ಮಾಡಿದ ಪರೀಕ್ಷೆಯ ನಿಖರತೆಯ ಕುರಿತು ಸ್ವಲ್ಪ ಸಂದೇಹದ ಸೂಚನೆಗಳು ಇದ್ದವು ಮತ್ತು ಕಲಬುರ್ಗಿಯವರ ವಿವರಣೆ ಈ ಕಾಲನಿರ್ದೇಶನದ ಮೇಲೆ ಅವಲಂಬಿತವಾಗಿತ್ತು ಹಾಗೂ communalismಎನ್ನುವದು ಆಧುನಿಕ ಕಾಲದ ರಾಜಕೀಯ ಸಿದ್ಧಾಂತ ಎನ್ನುವದು ಬೇರೆ ಮಾತು.
ಭುವನೇಶ್ವರದ ಈ ವರದಿ ಬಂದ ಮೇಲೆ The Times of India ವರದಿಗಾರ ನಮ್ಮ ಬಳಿ ಬಂದಾಗ ನಮಗನ್ನಿಸಿದ್ದನ್ನು ನಾವು ಹೇಳಿದೆವು. ಈ ಬುರುಡೆಗಳನ್ನು ಅವುಗಳ ಇತಿಹಾಸ ಅಥವಾ ಪ್ರಾಕ್ತನ ನೆಲೆಯಲ್ಲಿ ವಿವರಿಸಲು ಅಗತ್ಯವಾದ ಸ್ತರಾನುಕ್ರಮ ಸಂದರ್ಭವೇ (stratigraphical context) ಇಲ್ಲ. ಗಟಾರದ ಕೊಚ್ಚೆಯಲ್ಲಿ ಭೂಮಿಯ ಮೇಲ್ಪದರದಿಂದ ಕೇವಲ ಎರಡು ಅಡಿಗಳ ಆಳದಲ್ಲಿರುವ ಆ ಬುರುಡೆಗಳ ನಡು ನಡುವೆ ಯಾವುದೇ ವಸ್ತು-ಉಪಕರಣಗಳು ಹರಡಿಲ್ಲವಾಗಿ (assemblage) ಅದು ಸ್ಮಶಾನಭೂಮಿಯೋ ವಾಸದನೆಲೆಯೋ ಎಂಬುದೂ ಸ್ಪಷ್ಟವಿಲ್ಲ. ಹೆಚ್ಚುವರಿ ಪರೀಕ್ಷೆಗಳ ಫಲಿತಾಂಶಕ್ಕೆ ಕಾಯಬೇಕು ಎಂಬುದು ನನ್ನ ಅಭಿಪ್ರಾಯವಾಗಿತ್ತು. ನನ್ನ ಸಹೋದ್ಯೋಗಿ, ಸ್ವತ: ಪ್ರಾಗೈತಿಹಾಸತಜ್ಞರಾಗಿರುವ ಡಾ. ರವಿ ಕೋರಿಶೆಟ್ಟರ್ ಹರಿತವಾದ ಆಯುಧಗಳ ಬಳಕೆಯಾಗಿದ್ದರೆ ಮೂಳೆವಸ್ತುಗಳ ಮೇಲೆ cut marks ರೂಪದಲ್ಲಿರುವ ಅದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಖಚಿತವಾಗಬೇಕು, ಅಂಥದೇನೂ ಇದ್ದಂತಿಲ್ಲ. ಇವು ದೀರ್ಘ ಕಾಲದ ಹಿಂದೆ ಹೂಳಲ್ಪಟ್ಟಿದ್ದರೆ ಸಾಮಾನ್ಯವಾಗಿ ಉಂಟಾಗುವ ಬದಲಾವಣೆಗಳಿಗೆ ಅವು ಒಳಪಟ್ಟಂತೆ ತೋರುವದಿಲ್ಲವಾದ್ದರಿಂದ ಅವು ಈಚಿನವು ಎನ್ನಿಸುತ್ತದೆ ಎಂದರು. ಅಣ್ಣಿಗೇರಿ ಉತ್ಖನನದಲ್ಲಿ ಸ್ವತ: ಭಾಗಿಯಾಗಿದ್ದ ಇನ್ನೊಬ್ಬ ಸಹೋದ್ಯೋಗಿ ಡಾ. ಶ್ರೀನಿವಾಸ ಪಾಡಿಗಾರ್ ಇದು ಸಾಮೂಹಿಕ ನರಮೇಧವಾಗಿರಲಿಕ್ಕಿಲ್ಲ. ಹಾಗೆಂದು ಹೇಳಲು ಬೇಕಾದ ಚಾರಿತ್ರಿಕ ಪ್ರಾಕ್ತನಶಾಸ್ತ್ರೀಯ ಪುರಾವೆಗಳಿಲ್ಲ. ಬಹುಶ: ಇನ್ನೂರು ವರ್ಷಗಳ ಹಿಂದೆ ವಸತಿನೆಲೆಯಿಂದ ಸ್ವಲ್ಪ ದೂರ ಇವುಗಳನ್ನು ರಹಸ್ಯವಾಗಿ ವ್ಯವಸ್ಥಿತವಾಗಿ ಹೂಳಲಾಗಿತ್ತು ಎನಿಸುತ್ತದೆ ಎಂದರು. ಅದಕ್ಕಿಂತ ಮುಖ್ಯವಾಗಿ ಅವು ಸುಮಾರು ೬೩೮ ವರ್ಷಗಳಷ್ಟು ಪುರಾತನ ಎಂದು ಹೇಳಿದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆಗೆ ಒಳಪಟ್ಟದ್ದು ಒಂದೇ ಸ್ಯಾಂಪಲ್. ಹೆಚ್ಚು random sampleಗಳನ್ನು ಪರೀಕ್ಷೆಗೊಳಪಡಿಸಬಹುದಿತ್ತು ಎಂದರು.
ಈಗ ಚಕ್ರ ಒಂದು ಸುತ್ತು ಸುತ್ತಿ ಮೊದಲಿದ್ದಲ್ಲಿಗೇ ಬಂದು ನಿಂತಿದೆ. ಕಳೆದ ವಾರ ಈ ಬುರುಡೆಗಳ ಕಾಲನಿಷ್ಕರ್ಷೆಗಾಗಿ ಅವುಗಳನ್ನು ಪರೀಕ್ಷೆಗೊಳಪಡಿಸಿದ ಅಮೆರಿಕೆಯ ಫ್ಲೋರಿಡಾದ ಮಿಯಾಮಿಯಲ್ಲಿರುವ ಬೆಟಾ ಎನಾಲಿಟಿಕ್ ಸಂಸ್ಥ್ರೆ ಇವು ಸುಮಾರು ೧೮೦ ವರ್ಷಗಳಷ್ಟು ಪುರಾತನ ಎಂದು ಮೂರು ಪುಟಗಳ ವಿವರವಾದ ವರದಿ ಸಲ್ಲಿಸಿದೆ ಎಂಬುದನ್ನು ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯ ಬಹಿರಂಗಗೊಳಿಸಿದೆ. ತಾಂತ್ರಿಕವಾಗಿ ಹೇಳುವದಾದರೆ ಬೆಟ ಎನಲಿಟಿಕ್ ನವರು ೧೯೫೦ನೇ ಇಸ್ವಿಯನ್ನು ಬೇಸ್ ಆಗಿ ಇಟ್ಟುಕೊಂಡು ಈ ಪರೀಕ್ಷೆಯನ್ನು ನಡೆಸಿದ್ದಾರೆ. ತಲೆಬುರುಡೆಗಳು ಹಾಗೂ ಮೂಳೆಗಳು ನೂರಿಪ್ಪತ್ತು ವರ್ಷಗಳಷ್ಟು ಹಳೆಯವೆಂದು ಹೇಳಿದ್ದಾರೆ. ೧೯೫೦ನ್ನು ಬೇಸ್ ಆಗಿ ತೆಗೆದುಕೊಂಡರೆ ಈ ತಲೆಬುರುಡೆಗಳು ಮತ್ತು ಮೂಳೆಗಳು ಸು. ೧೮೩೦ರ ಆಸುಪಾಸಿನವು ಎಂದಾಗುತ್ತದೆ ಎಂಬುದು ಪುರಾತತ್ವ ಇಲಾಖೆಯ ನಿರ್ದೇಶಕರ ಸ್ಪಷ್ಟನೆ.
೬೦, ೪೦,೨೦,೬ ಹೀಗೆ ವಿವಿಧ ವಯೋಮಾನದ ಜನರ ತಲೆಬುರುಡೆಗಳು ಇವಾಗಿದ್ದು ಬರ ಅಥವಾ ಸಾಂಕ್ರಾಮಿಕ ಪಿಡುಗು ಕಾರಣವಾಗಿ ದೊಡ್ಡ ಸಂಖ್ಯೆಯಲ್ಲಿ ಜನ ವಲಸೆ ಹೋಗಿ ಕಾಲಾಂತರದಲ್ಲಿ ಮರಳಿದ ನಂತರ ಅಲ್ಲೇ ಉಳಿದು ವಿಕೋಪಕ್ಕೆ ಬಲಿಯಾದ ತಮ್ಮವರ ಕಳೇಬರಗಳನ್ನು ಹೂಳಿದ್ದರೆಂದು ತೋರುತ್ತದೆ ಎಂದಿದ್ದಾರೆ ನಿರ್ದೇಶಕ ಆರ್.ಗೋಪಾಲ. ಅಂದರೆ ಅವರ ಪ್ರಕಾರ ಇದು ಪಶ್ಚಾತ್ ಹೂಳಿಕೆ (second burial)ಯ ನಿದರ್ಶನ. ಇಂಥ ಪರೀಕ್ಷೆಗಳನ್ನು ನಡೆಸುವಲ್ಲಿ ಬೆಟಾ ಎನಲಿಟಿಕ್ ಕಂಪನಿ ಹೊಂದಿರುವ ಕಾರ್ಯಕ್ಷಮತೆಯ ದಾಖಲೆಯ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ವರದಿಯನ್ನು ಒಪ್ಪಿಕೊಂಡಿದ್ದು ಅಣ್ಣಿಗೇರಿ ಬುರುಡೆ ಸ್ಥಳಶೋಧ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದಿವೆ ಪತ್ರಿಕೆಗಳು. ಆದರೆ ಯು ಎನ್ ಐ ವರದಿಯ ಪ್ರಕಾರ ಜಿಲ್ಲಾಡಳಿತವು ಅಣ್ಣಿಗೇರಿ ತಲೆಬುರುಡೆಗಳು ನೂರೆಂಬತ್ತು ವರ್ಷ ಹಳೆಯವೆನ್ನುವ ಅಮೇರಿಕದ ಪ್ರಯೋಗಶಾಲೆಯ ವರದಿ ತನಗೆ ಸಮ್ಮತವಲ್ಲ ಎಂದಿದೆ. ಭಾರತೀಯ ವಿಜ್ಞಾನಿಗಳ ನಿಷ್ಕರ್ಷೆಗೂ ಮಿಯಾಮಿ ಪರಿಣತರ ನಿಷ್ಕರ್ಷೆಗೂ ನಡುವೆ ಇರುವ ವ್ಯತ್ಯಾಸದ ಮಹದಂತರದ ಹಿನ್ನೆಲೆಯಲ್ಲಿ ಭಾರತೀಯ ಸ್ಥಿತಿಗತಿಗಳಲ್ಲಿ ಇವು ಪರೀಕ್ಷೆಗೊಳಪಡಬೇಕೆನ್ನುವದು ಪ್ರಾಕ್ತನಶಾಸ್ತ್ರಜ್ಞರ ಅಭಿಪ್ರಾಯವೆಂದು ಜಿಲ್ಲಾಡಳಿತ ಭಾವಿಸಿದೆ ಎಂದು ಈ ವರದಿ ಹೇಳುತದೆ, ಆದರೆ ಈ ಕುರಿತ ವಿವರಗಳು ಅದರಲ್ಲಿಲ್ಲ.
ಒಟ್ಟಿನಲ್ಲಿ ಕೇಸ್ ಖಲ್ಲಾಸ್ ಎನ್ನಲಾಗುವದಿಲ್ಲ. ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ, ಅಧ್ಯಯನ ಮುಂದುವರೆಯಬೇಕಾದ ಆಯಾಮಗಳಿವೆ, ಇದೊಂದು ವಿರಳಾತಿವಿರಳ ಸಂಗತಿ. ಬರೀ ರುಂಡಗಳು ಒಂದೆಡೆ ಹೂಳಲ್ಪಟ್ಟು ಇತರ ಅವಯವಗಳ ಅಸ್ಥಿಗಳು ಬೇರೆಡೆ ಹರಡಿರುವದೇಕೆ? ಕೆಳದವಡೆಗಳಿಲ್ಲದೇ ಬರಿದೇ ತಲೆಬುರುಡೆಗಳ ಮೇಲ್ಭಾಗ ಮಾತ್ರ ಇರುವದೇಕೆ? ಎರಡು ಪರೀಕ್ಷೆಗಳ ನಡುವೆ ನಾಲ್ಕೂವರೆನೂರು ವರ್ಷಗಳ ಅಂತರವನ್ನು ಹೇಗೆ ವಿವರಿಸುವದು? ಅವು ನೂರೆಂಬತ್ತು ವರ್ಷಗಳಷ್ಟು ಪುರಾತನವೆನ್ನುವದಾದರೆ ಸರಳ ವಿವರಣೆಗೆ ಅವು ನಿಲುಕುತ್ತವೆ. ೧೭೯೧ರಿಂದ ೧೮೭೭ರ್ ವರೆಗಿನ ಅವಧಿಯಲ್ಲಿ ಸ್ಥಾನಿಕವಾಗಿ ಡೌಗಿ ಬರ, (ಅಕ್ಷರಶ: ತಲೆಬುರುಡೆ ಬರ, ಅಂದರೆ ಹೂಳುವಿಕೆಗೂ ಗತಿ ಇಲ್ಲದೆ ಚೆಲ್ಲಾಡಿದ್ದ ಅಸಂಖ್ಯ ಕಳೇಬರಗಳು ಬುರುಡೆಗಳ ಸನ್ನಿವೇಶ) ಬ್ಯಾನಿಬರ, ಬ್ಯಾಸಿಗಿಬರ ಮೊದಲಾಗಿ ಕರೆಯಲ್ಪಟ್ಟ ಭೀಕರ ಬರಗಾಲಗಳು ಈ ಪ್ರದೇಶದಲ್ಲಿ ಸಂಭವಿಸಿದ ಕುರಿತು ೧೮೯೪ರಲ್ಲಿ ಮುಂಬೈ ಪ್ರಾಂತದ ಗೆಝೆಟಿಯರ್ ಸಂಕಲಿಸಿದ ಜೇಮ್ಸ್ ಕ್ಯಾಂಪಬೆಲ್ ಉಲ್ಲೇಖಿಸಿದ್ದಾನೆ. (ಸಂಕ್ಷಿಪ್ತ ವಿವರಗಳಿಗೆ, ೧೩ ನವೆಂಬರ್ ೨೦೧೧ರ The Hindu ಪತ್ರಿಕೆಯಲ್ಲಿ ಎನ್. ದಿನೇಶ್ ನಾಯಕ್ ಬರೆದ Historical records speak of famine, epidemics in region ಎಂಬ ವರದಿಯನ್ನು ನೋಡಿ.) ಈ ಕಾಲಾವಧಿಯಲ್ಲಿ ಈ ಬರಗಾಲದ ಬವಣೆಯನ್ನು ಮತ್ತಷ್ಟು ಭೀಕರಗೊಳಿಸಿದ ಪೆಂಡಾರಿಗಳ ದಾಳಿಗಳು, ಇನ್ನೊಂದು ಹಂತದಲ್ಲಿ ಪರಶುರಾಮ್ ಭಾವು ನೇತೃತ್ವದ ಮರಾಠಾ ದಾಳಿಗಳ ಹಿನ್ನೆಲೆಗಳೂ ಈ ಪ್ರದೇಶದ ದಾಖಲೆಯಲ್ಲಿವೆ.. ಇವೆಲ್ಲ ನಿರುದ್ವಿಗ್ನವಾಗಿ ಅಧ್ಯಯನಕ್ಕೊಳಪಡಬೇಕು. ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮೂಹಿಕ ನರಮೇಧದ, ವಾಮಾಚಾರದ, ಸೇಡಿನ ಪ್ರತಿರೂಪವಾದ ಅಂಗಾಂಗ ವಿಚ್ಛಿನ್ನತೆಯ, ಬ್ರಿಟಿಶ್ ವಿರೋಧಿ ಬಂಡಾಯ ಕಾಲದ ದಮನದ ಪ್ರಮೇಯಗಳ ಗತಿ ಏನಾಯಿತು ಅದನ್ನೂ ನೋಡಬೇಕು! ಅಂದರೆ ಆಣ್ಣಿಗೇರಿ ಪ್ರಕರಣ ಯಾವುದರ ಕುರಿತು ಯಾವ ಹಂತದಲ್ಲಿ ಯಾರು ಎಷ್ಟು ಮಾತಾಡಬೇಕು ಎಂಬಂಥ ಅಂಶಗಳ ಕುರಿತೂ ನಮ್ಮ ಕಣ್ಣು ತೆರೆಸಬೇಕು.