Sunday, November 7, 2010

ಕಿ.ರಂ.ನೆನಪಿನ ನೆಪದಲ್ಲಿ..

ಪ್ರೀತಿ, ಹೃದಯವಂತಿಕೆ, ಸಹನಶೀಲತೆಯಂಥ ಗುಣಗಳು ಕ್ರಮೇಣ ನಶಿಸುತ್ತಿರುವಂತೆ , ಜಾತಿ ಎಂಬುದು ಸಾಮಾಜಿಕ ವಾಸ್ತವ ಮಾತ್ರವೋ
ಅಥವಾ ಒಂದು ಮನಸ್ಥಿತಿ ಕೂಡ ಆಗಿದೆಯೋ ಎಂದೆನ್ನಿಸುವಂತೆ ನಮ್ಮಲ್ಲಿಂದು ಚರ್ಚೆಗಳು ನಡೆಯುತ್ತಿರುವಂತಿದೆ. ಯಾವುದೋ ಒಂದು ವಿಷಯದ ಕುರಿತು ಚರ್ಚೆ ನಡೆದಿರುವಾಗ ಸಂಬಂಧ ಸೂತ್ರವಿಲ್ಲದ ಇನ್ನಾವುದೋ ವಿಷಯವನ್ನು ಎಳೆದು ತಂದು ವಿತಂಡವೆನ್ನಿಸುವಂಥ ವಾದ ಹೂಡುವದು, ಅಗತ್ಯವೋ ಅನಗತ್ಯವೋ ಬುದ್ಧಿಮತ್ತೆಯನ್ನು, ಬೌದ್ಧಿಕ ಅಹಂಕಾರವನ್ನು ಪ್ರದರ್ಶಿಸುವದು, ಚರ್ಚೆ - ಚಿಂತನೆಗಳ ಮುಖ್ಯ ಆಶಯಗಳ ದಾರಿ ತಪ್ಪಿಸುವದು......ಇದೇಕೆ ಹೀಗೆ? ಒಂದು ವಿಷಯದ ಕುರಿತು ಸ್ವಲ್ಪ ಆಳಕ್ಕೆ ಹೋಗಿ ಯೋಚಿಸಿದ ಯಾರಾದರೊಬ್ಬರು ಒಂದು ವಿವರಣೆಯನ್ನೋ, ವಿಶ್ಲೇಷಣೆಯನ್ನೋ ಒದಗಿಸಿದರೆ ಅದರ ಕುರಿತು ಯೋಚಿಸುವ ವ್ಯವಧಾನ ಕೂಡ ತೋರದೇ ಹಗುರವಾಗಿ ಪ್ರತಿಕ್ರಿಯೆ ತೋರುವುದು, ಪ್ರತಿಕ್ರಿಯೆ ತೋರಲೆಂದೇ ಪ್ರತಿಕ್ರಿಯೆ ತೋರುವುದು, ಸೈದ್ಧಾಂತಿಕವೋ, ರಾಜಕೀಯವೋ ಇನ್ನಾವುದೋ ಹಿತಾಸಕ್ತಿಯನ್ನು ಆರೋಪಿಸುವದು ಇಂಥ ಪ್ರವೃತ್ತಿಗಳು ನಮ್ಮ ಸಾಂಸ್ಕೃತಿಕ ಚರ್ಚೆಗಳಲ್ಲಿ, ಬೌದ್ಧಿಕ ಪರಿಸರದಲ್ಲಿ ಕಾರಣರಹಿತ ಒರಟುತನದ ವಾತಾವರಣವನ್ನುಂಟು ಮಾಡುತ್ತಿರುವಂತಿದೆ.

**************

ಕಾಶ್ಮೀರ್ ಬಗ್ಗೆ ಬೂಕರ್ ಪ್ರಶಸ್ತಿ ವಿಜೇತೆ ಆರುಂಧತಿ ರಾಯ್ ಇತ್ತೀಚೆ ಮಾತಾಡಿದ್ದರ ಕುರಿತು "ಕೆಂಡಸಂಪಿಗೆ"ಯಲ್ಲಿ ಪ್ರೇಮಶೇಖರ್ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಇದ್ದಕ್ಕಿದ್ದಂತೆ ಜಾತಿ ನುಸುಳಿತು. ಶ್ರೀನಗರದಿಂದ ಒಂದು ಹೇಳಿಕೆ ಬಿಡುಗಡೆ ಮಾಡಿ, ಲಕ್ಷಾಂತರ ಜನ ಕಾಶ್ಮೀರದಲ್ಲಿ ದಿನನಿತ್ಯ ಹೇಳುವದನ್ನೇ ತಾನು ಹೇಳುತ್ತಿರುವದಾಗಿ ನಿವೇದಿಸಿಕೊಂಡದ್ದರಲ್ಲಿ ಆಕೆ ಹೇಳಿದ್ದಳಲ್ಲ:" ಜಗತ್ತಿನ ಒಂದು ಅತ್ಯಂತ ದಮನಕಾರಿ ಮಿಲಿಟರಿ ಆಕ್ರಮಣಕ್ಕೊಳಗಾಗಿರುವ ಕಾಶ್ಮೀರಿ ಜನತೆ, ತಮ್ಮದೇ ನೆಲದಿಂದ ಹೊರದೂಡಲ್ಪಡುವ ದುರಂತಕ್ಕೊಳಗಾಗಿರುವ ಕಾಶ್ಮೀರಿ ಪಂಡಿತರು, ಕಾಶ್ಮೀರದಲ್ಲಿ ಪ್ರಾಣ ತೆತ್ತ ದಲಿತ ಸೈನಿಕರು, ಮತ್ತು ಈ ಆಕ್ರಮಣಕ್ಕಾಗಿ ಬೆಲೆ ತೆರುತ್ತಿರುವ ಬಡ ಭಾರತೀಯರ ಪರ ನ್ಯಾಯಕ್ಕಾಗಿ ತಾನು ಮಾತಾಡುತ್ತಿರುವದಾಗಿ! ಸರಿ, ಚರ್ಚೆ ಕಾಶ್ಮೀರಿ ಪಂಡಿತರು, ದಲಿತರು ಎಂಬ ಹಾಗೂ, ಈ ಸಮಸ್ಯೆಗೆ ಸೀಮಿತವಾಗಿ ಕೆಲಸಕ್ಕೆ ಬಾರದ, ಎಡ-ಬಲ ಎಂಬ ವರ್ತುಲಗಳಲ್ಲಿ ಸುಳಿ ತಿರುಗತೊಡಗಿತು. ಕಾಶ್ಮೀರ ಸಮಸ್ಯೆಯ ವಾಸ್ತವಗಳೇನು? ಅದಕ್ಕಿರುವ ಸಂಕೀರ್ಣ ಆಯಾಮಗಳೇನು? ಅದರ ಜಿಯೋ-ಪೊಲಿಟಿಕಲ್ ಇರುವಿಕೆ ಸೃಷ್ಟಿಸಿರುವ ಕಗ್ಗಂಟುಗಳೆಂಥವು?... ಯಾರಿಗೆ ಬೇಕು? ಪ್ರೇಮ್ ಶೇಖರ್ ಪ್ರಭುತ್ವಪರ, ಬಿಜೆಪಿ ಬೆಂಬಲಿಗ...ಫಿನಿಶ್!.

ಒಬ್ಬರು ಬರೆದರು: ಹಿಂದೂ ಪ್ರಾಬಲ್ಯದಡಿಯ ಸಮಾಜದಲ್ಲಿ ಶತಶತಮಾನಗಳಿಂದ ದಲಿತರು ಹಾಗೂ ಕೆಳಜಾತಿಯವರು ಚಿತ್ರಹಿಂಸೆಗೆ ಈಡಾಗಿದ್ದಾರೆ. ಮುಸ್ಲಿಮರು ಅದರಿಂದ ತಪ್ಪಿಸಿಕೊಂಡರು ಏಕೆಂದರೆ ಅವರು ಆಳುವವರಾಗಿದ್ದರು. ಈಗ ಅವರು ಆಳುವವರಾಗಿ ಉಳಿದಿಲ್ಲ, ಆದ್ದರಿಂದ ಅವರು ಬಹುಸಂಖ್ಯಾತರ ಮರ್ಜಿಯಡಿ ಇರಬೇಕಾಗಿದೆ ಮತ್ತು ಅವರ ಪರವಾಗಿ "ಆರು" ಧ್ವನಿ ಎತ್ತುತ್ತಿದ್ದಾಳೆ, ತಪ್ಪೇನಿದೆ? ! ಮತ್ತೊಬ್ಬರು ಬರೆದರು: "ಓಕೆ, ದಲಿತ ಸೈನಿಕರು! ಯಥಾಪ್ರಕಾರ ಮೆಲ್ಜಾತಿಗಳು ನಿಂದನಾಯೋಗ್ಯ! ಒಳ್ಳೇದೇ, ಸೈನ್ಯದಲ್ಲಿರುವ ಮೆಲ್ಜಾತಿಗಳನ್ನು ಆಯ್ದು ಗುರಿಯಾಗಿಟ್ಟುಕೊಂಡು ಬಡ ದಲಿತ ಸೈನಿಕರನ್ನು ಉಳಿಸುವಂತೆ ಕಾಶ್ಮೀರದ ಧೀರ ಹಾಗೂ ದಯಾಳು ಭಯೋತ್ಪಾದಕ ನಾಯಕರನ್ನು ವಿನಂತಿಸಬಹುದಲ್ಲ? ಹೇಗೂ ನೀವು ಆ "ಪ್ರಗತಿಪರ" ಶಕ್ತಿಗಳ ಸೋದರ-ಬಂಧುಗಳು, ಅವರು ವಿನಂತಿಯನ್ನು ಮನ್ನಿಸದಿರುತ್ತಾರೆಯೆ?" -ಚರ್ಚೆ ಹಳ್ಳ ಹಿಡಿಯಲು ಇನ್ನೇನು ಬೇಕು?

***********

ಈ ವರ್ಷದ ಅಗಷ್ಟ್ ನಲ್ಲಿ ಕನ್ನಡದ ಖ್ಯಾತ ವಿಮರ್ಶಕ ಕಿ.ರಂ. ನಾಗರಾಜ ತೀರಿ ಹೋದಾಗ ಅದೇ " ಕೆಂಡಸಂಪಿಗೆ"ಯಲ್ಲಿ ಕೆಲ ಕಾಲ ಕಿ.ರಂ ಕುರಿತು ಆರೆಂಟು ಲೇಖನಗಳು ಪ್ರಕಟವಾದವು.ಕಿ. ರಂ ಜೊತೆ ಹಲವಾರು ವರ್ಷಗಳ ಸಂಪರ್ಕ, ಸ್ನೇಹ ಇದ್ದವರು, ಅಷ್ಟು ಗಾಢವಾಗಿ ಅಲ್ಲದಿದ್ದರೂ ಕಿ. ರಂ ಅವರ ವ್ಯಕ್ತಿತ್ವವಿಶೇಷಗಳನ್ನು ಮೆಚ್ಚಿದವರು ಸರಳವಾಗಿ ಆತ್ಮೀಯವಾಗಿ ಆ ಅದ್ಭುತ ವ್ಯಕ್ತಿಯನ್ನು ನೆನಪಿಸಿಕೊಂಡ ಬರಹಗಳವು. ಆ ಎಲ್ಲ ಬರಹಗಳನ್ನು, ಅವುಗಳ ಕುರಿತು ಬಂದ ಪ್ರತಿಕ್ರಿಯೆಗಳನ್ನು ಓದುತ್ತಿದ್ದೆ. ಅಗಷ್ಟ್ ನಲ್ಲಿ ಕಿ. ರಂ. ತೀರಿಹೋದ ಬೆನ್ನಲ್ಲೇ , ಡಿ.ವ್ಹಿ. ಪ್ರಹ್ಲಾದ್, ಸತ್ಯಮೂರ್ತಿ, ಸಂಧ್ಯಾದೇವಿ ಮುಂತಾದವರು ಅವರ ಕುರಿತು ಬರೆದದ್ದರಲ್ಲಿ, ಅವುಗಳನ್ನು ಸಂಪಾದಕರು ಸಾಲಾಗಿ ಪ್ರಕಟಿಸಿದ್ದರಲ್ಲಿ ಅಸಹಜವಾದುದೇನೂ ಇರಲಿಲ್ಲ. ಅಂಥ ವೈಯಕ್ತಿಕವಾದ, ಆಪ್ತವಾದ ಅನಿಸಿಕೆ-ಅನುಭವಗಳನ್ನು ಹಂಚಿಕೊಂಡವರ ಬರಹಗಳನ್ನು ಇನ್ನಷ್ಟು ಓದಬೇಕೆಂದು ನನ್ನಂತೆ ಹಲವಾರು ಜನರಿಗೆ ಅನ್ನಿಸಿರಬಹುದು.ಪ್ರತಿಕ್ರಿಯೆಗಳಲ್ಲಿ ಕೆಲವರು ತಮ್ಮ ಆ ಬಯಕೆಯನ್ನು ವ್ಯಕ್ತಗೊಳಿಸಿಯೂ ಇದ್ದರು..ಆದರೆ ಕೆಲವರಿಗೆ ಹಾಗೆ ಅನ್ನಿಸಲಿಲ್ಲ.! ಕಿ.ರಂ. ಬಗ್ಗೆ ಬಂದ ನಾಲ್ಕೆಂಟು ಲೇಖನ ಓದುತ್ತಲೇ ಅವರಲ್ಲಿ ಇದ್ದಿರಬಹುದಾದ ಸಹನೆಯ,ಹೃದಯವಂತಿಕೆಯ ಅಲ್ಪಸ್ವಲ್ಪ ಸ್ಟಾಕ್ ಮುಗಿದುಹೋಯಿತು. ಆಕಾಶ ಕಳಚಿಕೊಂಡು ಬಿದ್ದಿತ್ತು. ಕಿ.ರಂ ಕುರಿತ ಲೇಖನಗಳನ್ನು ಹೊರತುಪಡಿಸಿಯೂ ರಾಶಿ ಸಾಮಗ್ರಿ ಕೆಂಡಸಂಪಿಗೆಯಲ್ಲಿತ್ತು. ಊಹೂಂ. ಅದೆಲ್ಲ ಅವರಿಗೆ ಬೇಡ. ಒಬ್ಬರಿಗೆ ಕಿ.ರಂ ಲಂಕೇಶ್ ಬಳಗದ ವ್ಯಕ್ತಿಯಾಗಿಯೂ, ಕೆಂಡಸಂಪಿಗೆ ಲಂಕೇಶ್ ಬಳಗದ ಲೇಖಕರಿಗಾಗಿ ಇರುವಂಥ ಪತ್ರಿಕೆಯಾಗಿಯೂ ಕಂಡಿತು.ಒಬ್ಬರು ಕಿ.ರಂ.ಕುರಿತ ಬರಹಗಳು ಸಾಕಷ್ಟಾಯ್ತು. ದಯವಿಟ್ಟು ಅದನ್ನು ನಿಲ್ಲಿಸಿ ಬೇರೆ "ಸ್ಟೋರೀಸ್" ಪ್ರಕಟಿಸಿ ಎಂದು ಆದೇಶಿಸಿ ಇದೇನು ಕೆಂಡಸಂಪಿಗೆಯೋ ಕಿರಂಸಂಪಿಗೆಯೋ ಎಂದು ಕೇಳಿದರೆ ಇನ್ನೊಬ್ಬರು ವಿಜ್ಞಾನ ತಂತ್ರಜ್ಞಾನಕ್ಕಿಂತ ಸಾಹಿತ್ಯ ಹೇಗೆ ಮಿಗಿಲು? ಆದ್ದರಿಂದ ಸಂಪಾದಕರು "ಇನ್ನು ಹತ್ತು ವರ್ಷ" ಕಿ.ರಂ ಕುರಿತ ಲೇಖನ ಪ್ರಕಟಿಸುತ್ತ ಹೋಗದೇ ಸಮಕಾಲೀನ ಜಗತ್ತಿನ ಇತರೆ ಆಸಕ್ತಿಕರ ವಿಷಯಗಳ ಕುರಿತ ಲೇಖನಗಳನ್ನು ಆಹ್ವಾನಿಸುತ್ತಾರೆಂದು ಆಶಿಸುವೆ ಎಂದರು..ಮತ್ತೊಬ್ಬರಿಗೆ ಈ ಆತ್ಮೀಯ ಒಡನಾಟದ ಸ್ಮರಣೆಗಳು "ಸ್ವಾಮಿಭಕ್ತಿ"ಯ ವೈಭವೀಕರಣದಂತೆ ಕಂಡರೆ ಮತ್ತೂ ಒಬ್ಬರಿಗೆ ಸಂಧ್ಯಾದೇವಿಯ ಲೇಖನದ ಆರಂಭದಲ್ಲಿರುವ ಸಂಭ್ರಮ ಆಕೆ ತಮ್ಮ ಲವ್ಹ್ ಅಫೇರ್ ವಿವರಿಸುತ್ತಿದ್ದಂತೆ ಕಂಡಿತಂತೆ! ಇದೆಂಥ ಪ್ರತಿಕ್ರಿಯೆಗಳಿವು? ಕೆಂಡಸಂಪಿಗೆಯಲ್ಲಿ ಕಿ.ರಂ ಕುರಿತ ಬರಹಗಳು ಜಾಸ್ತಿಯಾದವು ಎಂಬ ಒಬ್ಬಿಬ್ಬರ ಆಕ್ಷೇಪಕ್ಕೆ ಬೆಲೆಕೊಟ್ಟು ಪಾಪ ಅಬ್ದುಲ್ ರಶೀದ್ ಅವರು, ಇನ್ನು ಕೆಲವರು ಬರೆದ ಬರಹಗಳು ಇದ್ದಾಗ್ಯೂ, ರಹಮತ್ ತರೀಕೆರೆಯವರ ಲೇಖನದೊಂದಿಗೆ ಕಿ.ರಂ ಕುರಿತ ಲೇಖನಸರಣಿಯ ಪ್ರಕಟಣೆಯನ್ನು ಮನಸಿಲ್ಲದ ಮನಸಿನಿಂದ ಕೊನೆಗೊಳಿಸಿದರು.ಮೇಲ್ಕಾಣಿಸಿದ ಹಗುರ ಪ್ರತಿಕ್ರಿಯೆಗಳನ್ನು ಬರೆದವರಿಗೆ ಕಿ.ರಂ. ಏನೆಂದು ಗೊತ್ತಿಲ್ಲವೆಂಬುದಂತೂ ಸ್ಪಷ್ಟವಾಯಿತು.

***********

ಕಿ.ರಂ ನನಗೂ ಬಹು ಕಾಲ ಗೊತ್ತಿರಲಿಲ್ಲ. ಆ ವ್ಯಕ್ತಿತ್ವಕ್ಕಿದ್ದ ಮೋಹಕತೆ ಎಂಥದೆಂದೂ ತಿಳಿದಿರಲಿಲ್ಲ. ಬಹಳ ವರ್ಷಗಳ ಹಿಂದೆ ಧಾರವಾಡದಲ್ಲಿ ಶಿ.ಶಿ. ಬಸವನಾಳರ ಕುರಿತು ಅವರ ವಿಚಾರಗಳ ಮಂಡನೆಯನ್ನು ಕೇಳಿದ ಸಂದರ್ಭದಲ್ಲಿ ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿರಲಿಲ್ಲ. ನನ್ನ ಮೊದಲ ಕವನ ಸಂಕಲನದ ಕುರಿತು ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ೧೯೯೨ರ "ಕನ್ನಡ ವಾರ್ಷಿಕ"ದಲ್ಲಿ ಒಳ್ಳೆಯ ಕೆಲವು ಮಾತುಗಳನ್ನು ಬರೆದಿದ್ದರು. ಆಗಲೂ ನನಗೆ ಅವರು ವೈಯಕ್ತಿಕವಾಗಿ ಪರಿಚಿತರಿರಲಿಲ್ಲ. ಆ ಮೇಲೆ ಕೆಲವು ಸಂದರ್ಭಗಳಲ್ಲಿ ನಾವು ಭೇಟಿಯಾದೆವಾದರೂ ೧೯೯೮ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ. ಎಂ. ಜಮುನ ಅವರು Nationalism and Literature ಎಂಬ ವಿಚಾರ ಸಂಕಿರಣವೊಂದನ್ನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ಸಂದರ್ಭದಲ್ಲಿ ನನಗವರು ಹೆಚ್ಚು ನಿಕಟವಾಗಿ ಅರ್ಥವಾದರು, ಕನ್ನಡದ ಬಹುಪಾಲು ಸಾಹಿತ್ಯಾಸಕ್ತರಿಗೆ ಅವರು ಸರಿಯಾದ ರೀತಿಯಲ್ಲಿಯೇ ಅರ್ಥವಾಗಿದ್ದಾರೆ. ಅವರ ಕುರಿತ ಬರಹಗಳಲ್ಲಿ ಅವರ ಕುಡಿತದ ಪ್ರಸ್ತಾಪಗಳಿದ್ದದ್ದನ್ನೇ ಕೆಲವರು ತಮ್ಮ ಪ್ರತಿಕ್ರಿಯೆಗಳ ಅತಿ ಪ್ರಶಸ್ತ ಅಂಶವಾಗಿಟ್ಟುಕೊಂಡಿದ್ದಾರೆ. ಕಿ.ರಂ ಅವರನ್ನು ಬಲ್ಲವರಿಗೆ ಅದು ವೈಯಕ್ತಿಕವಾದ ಅವರ ಒಂದು ಬಲಹೀನತೆ ಎಂಬುದಕ್ಕೆ ಹೊರತಾಗಿ ಬಹಳ ಮಹತ್ವವಿಲ್ಲ. ಕುಡಿದಾಗಲೂ ಕುಡಿಯದಿದ್ದಾಗಲೂ ಮುಖ್ಯವಾಗುತ್ತಿದ್ದುದು ಅವರ ಸರಳ ವರ್ತನೆ, ಮಾನವೀಯ ಸಂವೇದನೆಗಳು,ಜೀವನೋತ್ಸಾಹ, ಕಾವ್ಯಪ್ರೀತಿ ಇವೇ. ಸ್ವಲ್ಪ ಖ್ಯಾತಿ ಹೆಗಲೇರುತ್ತಿದ್ದಂತೆ ಸೆಲೆಬ್ರಿಟಿ ಚಹರೆ, ಸೆಲೆಬ್ರಿಟಿ ದಿರಿಸು, ಸೆಲೆಬ್ರಿಟಿ ಮ್ಯಾನರಿಸಂಗಳನ್ನು ಧರಿಸಿ ಜನವಿದೂರವಾಗುವವರ ನಡುವೆ ಕಿ.ರಂ ಒಬ್ಬ ಅಪ್ಪಟ ಮನುಷ್ಯರಾಗಿದ್ದರು. ದೊಡ್ಡಬಳ್ಳಾಪುರದ ಸೆಮಿನಾರ್ ಕುರಿತು ಪ್ರಸ್ತಾಪಿಸಿದೆನಷ್ಟೆ. ನಿಜ ಹೇಳಬೇಕೆಂದರೆ ಕಿ.ರಂ ಅವರ ವ್ಯಕ್ತಿತ್ವ-ವಿಚಾರಗಳೆರಡರ ಪರಿಚಯ ಮೊಟ್ಟಮೊದಲು ನನಗಾದದ್ದು ಕೂಡ ಎರಡನೆಯ ದಿನದ ಎಲ್ಲ ಗೋಷ್ಠಿಗಳು ಮುಗಿದಾದ ಮೇಲೆ ಡಾ.ಜಮುನ ಹಾಗೂ ಕೊಂಗಾಡಿಯಪ್ಪ ಕಾಲೇಜಿನಲ್ಲೇ ಅಧ್ಯಾಪಕರಾಗಿರುವ ಅವರ ಪತಿ ಪ್ರೊ.ಮುನಿರಾಜು ಅವರ ನಿವಾಸದ ತಾರಸಿಯ ಮೇಲೆ ನಡೆದ ಪಾನಗೋಷ್ಠಿಯಲ್ಲೇ. ಒಂದು ತಮಾಷೆಯೂ ನಡೆಯಿತು. ಆ ರಾತ್ರಿ ಕಿ.ರಂ ಭೌತವಿಜ್ಞಾನದ ಯಾವ್ಯಾವುದೋ ಸಿದ್ಧಾಂತಗಳ ಕುರಿತು ಮಾತಾಡುತ್ತಿದ್ದಾರೆ. ಅಲ್ಲಿ ಗುಂಪು ಸೇರಿದವರಲ್ಲಿ ನಾಲ್ಕೆಂಟು ಜನ ವಿಜ್ಞಾನದ ಅಧ್ಯಾಪಕರೂ ಇದ್ದಾರೆ. ಕಿ.ರಂ ಮಾತುಗಳನ್ನು ಕೇಳುತ್ತ ಬೆಕ್ಕಸ ಬೆರಗಾಗಿದ್ದಾರೆ."...ಇದು ಸರಿ ತಾನೆ? ನೀವು ವಿಜ್ಞಾನದ ಅಧ್ಯಾಪಕರು, ನೀವು ಸರಿ ಎಂದರೇನೇ ನಾನು ಮುಂದುವರಿಯುವದು.." ಎಂದು ಅವರು ವಿಜ್ಞಾನದ ಅಧ್ಯಾಪಕರನ್ನು ಕೇಳುವದು, ಅವರು ತಲೆದೂಗುವದು.. ಇವರು ಮತ್ತೆ ಆಕಾಶದತ್ತ ಮೊಗ ಮಾಡಿ ಮಾತನಾಡುವದು,ಮಧ್ಯೆ ಮಧ್ಯೆ ಮದ್ಯ,ಅಡಿಗ, ಬೇಂದ್ರೆ, ಲಂಕೇಶ್... ... ರಾತ್ರಿ ಹತ್ತಾಯಿತು, ಹನ್ನೊಂದಾಯಿತು.. ಪ್ರೊ. ಎಸ್. ಚಂದ್ರಶೇಖರ್ ಅವರು ಕಿ.ರಂ. ನಾಗರಾಜರನ್ನು "ಆಧುನಿಕ ಕರ್ನಾಟಕದ ಅಲ್ಲಮ" ಎಂದು ಹೆಸರಿಸಿ ಎಲ್ಲರೂ ಅದನ್ನು ಸರ್ವಾನುಮತದಿಂದ ಅನುಮತಿಸಿದ್ದೂ ಆಯಿತು. ನನಗೆ ಒಂದು ಟೆನ್ಶನ್ ಶುರುವಾಗಿ ಹೋಗಿತ್ತು. ಇನ್ನು ಊಟ ಮುಗಿಸಿಕೊಂಡು ಈ ಕಿ.ರಂ ಮತ್ತು ಪ್ರೊ.ಚಂದ್ರಶೇಖರ್ ಜೊತೆ ಬೆಂಗಳೂರು ತಲುಪಿ ಅಲ್ಲಿ ಇವರಿಂದ ಬೇರ್ಪಟ್ಟು ನಾನು ಕೋಣನಕುಂಟೆಗೆ ಹೋಗುವದೆಂತು? ಕನಕಪುರ ಮುಖ್ಯರಸ್ತೆಯಿಂದ ಚುಂಚಗಟ್ಟಾ ರಸ್ತೆಯಲ್ಲಿ ಸಾಗಿ ಉದ್ದೋಉದ್ದ ನಡೆದು ನನ್ನ ಸಂಬಂಧಿಯ ಮನೆ ಸೇರುವುದ್ಯಾವಾಗ ಮತ್ತು ಹೇಗೆ? ಬೀದಿ ನಾಯಿಗಳು?... ಕಳ್ಳರು?... ಮಧ್ಯೆ ಒಮ್ಮೆ ನನ್ನ ಪೇಚಾಟ ಅವರ ಗಮನಕ್ಕೆ ಬಂದು ಅವರ ಯಾವುದೋ ಆಲೋಚನಾ ಲಹರಿ ತುಂಡಾದಂತಾಗಿ "ಶೆಟ್ಟರ್ ಸಮಸ್ಯೆ ಏನಂತೆ?" ಎಂದು ಅವರು ಕೇಳಿದ್ದರು. ಅದನ್ನ್ಯಾರೂ ಅವರಿಗೆ ವಿವರಿಸದೇ ಅವರು ಮುಂದುವರಿದಿರಬೇಕಾದರೆ ನನ್ನ ಸಮಸ್ಯೆಯೂ ಮುಂದುವರಿದೇ ಇತ್ತಲ್ಲ? ಕೊನೆಗೆ ನನ್ನನ್ನೇ ಕೇಳಿದರು, ನಾನು ನಿವೇದಿಸಿಕೊಂಡೆ. ಅವರು ನನ್ನನ್ನೇ ನೋಡುತ್ತ ಹೇಳಿದ್ದು ಈಗಲೂ ನೆನಪಿದೆ: "ಕವಿ ಕಣಯ್ಯಾ ನೀನು, ಬೇಂದ್ರೆಯ ಧಾರವಾಡದಿಂದ ಬೇರೆ ಬಂದಿದೀಯ. ಕವಿಯಾದವನು ಅನುಭವಗಳಿಗೆ ಅಂಜಬಾರದು. ನಡೀ ಬೆಂಗಳೂರಿಗೆ ಹೋಗೋಣ. ನಾನೂ ನಿನ್ನೊಂದಿಗೆ ಇರುತ್ತೇನೆ. ಬಸ್ ಸ್ಟ್ಯಾಂಡಿನಲ್ಲಿ ಮಲಗಿ ರಾತ್ರಿ ಕಳೆಯೋಣ. ಬೆಳಗಾದ ಮೇಲೆ ನೀನು ಕೋಣನಕುಂಟೆಗೆ ಹೋಗು, ನಾನು ನನ್ನ ಮನೆಗೆ ಹೋಗ್ತೇನೆ ಆಯ್ತಾ..." ಕೊನೆಗೆ ಜಮುನ ನನಗೆ "ಅಯ್ಯೋ ಬಿಟ್ ಹಾಕಿ ಸರ್, ಮೇಲೆ ಗೆಸ್ಟ್ ರೂಮ್ ಇದೆ. ಆರಾಮಾಗಿ ಮಲಗಿ, ಬೆಳಿಗ್ಗೆ ತಿಂಡಿ ಮಾಡಿಕೊಂಡು ಹೋಗಿ" ಎಂದು ನನ್ನ ಸಮಸ್ಯೆಯನ್ನು ಪರಿಹರಿಸಿದರು. ಅದಾದ ಬಹುದಿನಗಳ ವರೆಗೆ " ಕವಿಯಾದವನು ಅನುಭವಗಳಿಗೆ ಅಂಜಬಾರದು" ಎಂದ ಕಿ.ರಂ ಮಾತು ಮನಸ್ಸಿನಲ್ಲಿ ನೆಲೆ ಊರಿದ್ದು ಮಾತ್ರ ನಿಜ.

***********

ತುಂಬ ಜಾತ್ಯಾತೀತ ಕಾಳಜಿಗಳನ್ನು ಹೊಂದಿದ್ದ ಕಿ.ರಂ ಅವರ ಕುರಿತ ಲೇಖನಗಳಿಗೆ ಬಂದ ಪ್ರತಿಕ್ರಿಯೆಗಳಲ್ಲೂ ಜಾತಿ ನುಸುಳಿತು. ಶಶಿಕಲಾ ಚಂದ್ರಶೇಖರ್ ಎಂಬುವರು ಬರೆದ ಲೇಖನಕ್ಕೆ ಒಬ್ಬ ಮಹನೀಯರ ಪ್ರತಿಕ್ರಿಯೆ ನೋಡಿದರೆ ಬೇಸರವಾಗುತ್ತದೆ. ಪ್ರತಿಯೊಬ್ಬ ಬರಹಗಾರನೂ ಕಿ. ರಂ. ಒಬ್ಬ ಮದ್ಯವ್ಯಸನಿ ಎಂಬಂತೆ ಚಿತ್ರಿಸುತ್ತಿದ್ದಾರೆಂದು ವ್ಯಾಖ್ಯಾನಿಸಿ ಅದು "ಕಿ. ರಂ ಅವರ ಜಾತಿ ಕಾರಣವಾಗಿ ಅವರನ್ನು ಹಾಗೆ ಬಿಂಬಿಸುವ ವ್ಯವಸ್ಥಿತ ಪ್ರಚಾರವಾಗಿರಬಹುದೆ?" ಎಂದು ಅವರು ಓದುಗರನ್ನೇ ಕೇಳುತ್ತಾರೆ! ಇದಕ್ಕೆ ಪ್ರತಿಯಾಗಿ ಒಬ್ಬರು, "ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ, ಆದರೆ ಕಿ.ರಂ.ಅವರ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ.ಅದು ಮುಖ್ಯ ಎಂದೂ ಅನಿಸಿರಲಿಲ್ಲ" ಎಂದು ಸರಿಯಾಗಿಯೇ ಬರೆದರು. ಅವರ ಹೆಸರಿನಲ್ಲಿದ್ದ ಅಕ್ಷರಗಳ ದೀರ್ಘ ರೂಪ ಕಿತ್ತಾನೆ ರಂಗಪ್ಪ ಎಂಬುದೂ ಬಹಳ ಜನಕ್ಕೆ ಗೊತ್ತಿರಲಿಲ್ಲ. ಜಾತಿ ಯಾವುದು? ಅದ್ಯಾರಿಗೆ ಯಾತಕ್ಕೆ ಬೇಕು? ಅವರ ಮರಣಾನಂತರ ಪ್ರಕಟವಾದ ಬರಹಗಳಲ್ಲಿ ಅವರ ತಂದೆ ಶಾನುಬೋಗರಾಗಿದ್ದರು ಇತ್ಯಾದಿ ಓದಿ ಬ್ರಾಹ್ಮಣರಿದ್ದಾರು ಅನ್ನಿಸಿತು. ಅದು ಮುಖ್ಯವಾಗಲಿಲ್ಲ, ಅದರಿಂದ ಅವರ ಕುರಿತಾಗಿದ್ದ ಪ್ರೀತಿ ಮೆಚ್ಚುಗೆ ಆದರಗಳು ಮುಕ್ಕಾಗಲೂ ಇಲ್ಲ. ಕಿ.ರಂ ಇದ್ದುದೇ ಹಾಗೆ.

ಅಂತಿಮವಾಗಿ ಜುಲೈ ೧೬ನೇ ತಾರೀಖು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ,ಈಗ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಆಗಿರುವ,ಡಾ. ಎಸ್. ಚಂದ್ರಶೇಖರ್ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ನಾನವರನ್ನು ಕಂಡೆ..ಮಧ್ಯಾಹ್ನ ಊಟದ ವೇಳೆಯಲ್ಲಿ ಕಿ.ರಂ. ಸರತಿ ಸಾಲಿನಲ್ಲಿ ನಿಂತಿದ್ದರು. ಸಾರ್, ಅದೆಲ್ಲ ತುಂಬ ವಿಳಂಬವಾಗುತ್ತದೆ. ಬನ್ನಿ ಎಂದು ಪಕ್ಕಕ್ಕೆ ಕರೆದು ಒಬ್ಬ ವಿದ್ಯಾರ್ಥಿಗೆ ಹೇಳಿ ಅವರಿಗೆ ಊಟದ ವ್ಯವಸ್ಥೆ ಮಾಡಿಸಿದೆ. ಕಿ. ರಂ. ಯಥಾಪ್ರಕಾರದ ಹುರುಪಿನ ಕಿ.ರಂ ಆಗಿ ಕಾಣಲಿಲ್ಲ. ಬಳಲಿದಂತಿದ್ದರು. ಊಟದ ನಂತರ ಅವರದೇ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ನಾನು, ನಟರಾಜ್ ಹುಳಿಯಾರ್, ಅಶ್ವಥ್ ನಾರಾಯಣ ನಮ್ಮ ವಿಚಾರಗಳನ್ನು ಮಂಡಿಸಿಯಾದ ಮೇಲೆ ಅವರು ಅಧ್ಯಕ್ಷ ಭಾಷಣ ಮಾಡಿದ್ದೂ ಸೋತ ದನಿಯಲ್ಲೇ. ಹಿಂದೂ ಧರ್ಮ, ಭಾರತೀಯ ಸಂಸ್ಕೃತಿಗಳ ಕುರಿತ ಕುವೆಂಪು ಅವರ ತಾತ್ವಿಕತೆಯ ಬಗ್ಗೆ ನಮ್ಮ ಪೀಳಿಗೆಯ ಪ್ರಗತಿಪರರಲ್ಲಿ ಇರುವ ಗೊಂದಲಗಳ ಕುರಿತು ನಾನು ಮಾಡಿದ ವಿಶ್ಲೇಷಣೆಯನ್ನು ಮೆಚ್ಚಿ ಒಂದೆರಡು ಮಾತಾಡಿದರು. ರಾತ್ರಿ ಸೆಂಚುರಿ ಕ್ಲಬ್ ನಲ್ಲಿ ಬಹಳ ವರ್ಷಗಳ ನಂತರ ದೆಹಲಿಯ ಜೆ ಎನ್ ಯುನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಅಧ್ಯಾಪಕರಾಗಿದ್ದ ಸವ್ಯಸಾಚಿ ಭಟ್ಟಾಚಾರ್ಯ, ಪಣಿಕ್ಕರ್ ಸಿಕ್ಕು ಅವರ ಜೊತೆ ನಾನು ಮಾತಾಡುತ್ತಿದ್ದರೂ ಕಣ್ಣುಗಳು ಕಿ.ರಂ ಅವರನ್ನು ಹುಡುಕುತ್ತಿದ್ದವು. ಅವರು ಬಂದಿಲ್ಲವೆಂದು ಯಾರೋ ಹೇಳಿದರು. ಆಗಷ್ಟ್ ೮ ರಂದು ಧಾರವಾಡದಲ್ಲಿ ಕುರ್ತಕೋಟಿ ಟ್ರಸ್ಟ್ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿ ಬರುತ್ತಾರೆ ಎಂದು ಪತ್ರಿಕೆಗಳಲ್ಲಿ ಓದಿದಾಗ ಅವರ ಜೊತೆ ಮಾತನಾಡುವ ಒಂದು ಅವಕಾಶಕ್ಕಾಗಿ ಕಾಯ್ದಿದ್ದೆ. ಅದರ ಹಿಂದಿನ ದಿನವೇ ಸಂಜೆ ಅವರ ನಿಧನದ ವಾರ್ತೆ ಬಂತು.

ಕಿ.ರಂ. ಅಥವಾ ಅವರಂಥ ಉನ್ನತಿಕೆಯ ವ್ಯಕ್ತಿತ್ವಗಳ ಕುರಿತೂ ಎಂತೆಂಥ ವಿಲಕ್ಷಣ ಗ್ರಹಿಕೆಗಳು, ಕುಹಕಗಳು,ತೆಳುವಾದ ಅನಿಸಿಕೆಗಳು ಎಗ್ಗಿಲ್ಲದೇ ವ್ಯಕ್ತಗೊಳ್ಳುತ್ತವಲ್ಲ ಅಂತ ಬೇಸರವಾಗುತ್ತದೆ. ಸುಶಿಕ್ಷಿತ ವ್ಯಕ್ತಿಗಳ ಮನಸುಗಳೂ ಎಲ್ಲದರಲ್ಲಿ ಜಾತಿ ಹುಡುಕುತ್ತ ಕುಳಿತರೆ ಅಂಥ ಮನಸುಗಳನ್ನು ಸುಶಿಕ್ಷಿತ ಮನಸುಗಳು ಎಂದು ಪರಿಗಣಿಸುವದು ಹೇಗೆ? ಎಂಬುದು ಪ್ರಶ್ನೆ. ಇಂಥ ಪ್ರವೃತ್ತಿಗಳು ಸಂವಾದಗಳ ಸಾಧ್ಯತೆಗಳನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಬಹುದಷ್ಟೇ. ಅದರಿಂದೇನು ಪ್ರಯೋಜನ?

2 comments:

  1. Oh!!!! Its is very difficult for me to read Kannada. Sorry i tried to read though

    ReplyDelete
  2. ತುಂಬಾ ಸುಂದರವಾಗಿ ಬರೆದಿದ್ದೀರಿ ಸಾರ್.
    ಅಭಿನಂದನೆಗಳು.

    ReplyDelete